- ‘ದಲಿತ ಯುವಕರಿಗೆ ಬಿಜೆಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೆ ಬಿಳಿ ವಸ್ತ್ರ ಹೊದಿಸಲು’
- ‘ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಕೊಲೆಗಡುಕರ ಮೋರ್ಚಾಕ್ಕೆ ಚಾಲನೆ ನೀಡಿದೆಯೇ?’
ಜೈನಮುನಿ ಹತ್ಯೆ ಮತ್ತು ತಿ. ನರಸೀಪುರದ ವೇಣುಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿ ಸತ್ಯಶೋಧನೆಗೆ ಮುಂದಾಗಿದೆ. ಹೆಣದ ಮೇಲೆ ರಾಜಕೀಯ ಮಾಡುವ ಬಿಜೆಪಿಯ ಈ ನಡೆಯನ್ನು ಕಾಂಗ್ರೆಸ್ ಖಂಡಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ. ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ.
ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು. ಕರ್ನಾಟಕ ಬಿಜೆಪಿ ಕಾರ್ಯಕರ್ತರನ್ನು ಬೆಳೆಸುತ್ತಿದೆಯೇ, ಕೊಲೆಗಡುಕರನ್ನು ಬೆಳೆಸುತ್ತಿದೆಯೇ? ಸರ್ಕಾರದ ಮೇಲೆ ಆರೋಪಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರು ತಮ್ಮವರೇ ಕೊಲೆಗಾರರು ಎಂದು ತಿಳಿದ ನಂತರ ಬಿಲ ಸೇರಿರುವುದೇಕೆ” ಎಂದು ಪ್ರಶ್ನಿಸಿದೆ.
“ಅದ್ಯಾವುದೋ ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು. ದಲಿತರೆಂದರೆ ಬಿಜೆಪಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು. ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ?” ಎಂದು ಕಾಂಗ್ರೆಸ್ ಕಿಡಿಕಾರಿದೆ.
“ಕಲ್ಬುರ್ಗಿಯಲ್ಲಿ ನಡೆದ ಕಾನ್ಸ್ಟೆಬಲ್ ಹತ್ಯೆಯಲ್ಲಿ ಬಿಜೆಪಿ ಮುಖಂಡನ ಪಾತ್ರ. ತಿ. ನರಸೀಪುರದಲ್ಲಿ ನಡೆದ ವೇಣುಗೋಪಾಲ್ ಹತ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡ. ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ ಬ್ಲಾಕ್ಮೇಲ್ ಪ್ರಕರಣದ ರೂವಾರಿ ಎಬಿವಿಪಿ ಕಾರ್ಯಕರ್ತ. ಸೋಲಿನ ಹತಾಶೆಯಲ್ಲಿರುವ ಬಿಜೆಪಿ ನಮ್ಮ ಸರ್ಕಾರದ ಹೆಸರು ಕೆಡಿಸಲು ಕೊಲೆಗಡುಕರ ಮೋರ್ಚಾಕ್ಕೆ ಚಾಲನೆ ನೀಡಿದೆಯೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸುದ್ದಿ ಓದಿದ್ದೀರಾ? ತಾಲಿಬಾನಿ ಮನಸ್ಥಿತಿಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಹತ್ಯೆಗಳು ಹೆಚ್ಚಾಗಿವೆ: ಸಿ ಟಿ ರವಿ
‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ, ನೆರೆಮನೆಯ ಸುಡದು’
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ರಾಜ್ಯದಲ್ಲಿ ಎಲ್ಲೇ ಯಾವುದೇ ಕೊಲೆಯಾದರೂ, ಅದರ ಮೇಲೆ ರಾಜಕೀಯದ ಬೇಳೆ ಬೇಯಿಸಲು ಬಿಜೆಪಿ ನಾಯಕರು ತುದಿಗಾಲಲ್ಲಿರುತ್ತಾರೆ. ನಿನ್ನೆ ಕೊಲೆಗೀಡಾಗಿದ್ದ ವೇಣುಗೋಪಾಲ್ ಪ್ರಕರಣದಲ್ಲಿಯೂ “ಹನುಮ ಜಯಂತಿ” ಮಾಡಿದ್ದಕ್ಕೆ ಕೊಲೆ ಆಗಿದೆ ಎಂದು ಕೋಮು ಭಾವನೆ ಪ್ರಚೋದಿಸಿ, ರಾಜಕೀಯ ಅಪ್ರಭುದ್ಧತೆ ಪ್ರದರ್ಶಿಸಲು ಬಿಜೆಪಿ ವನಾಯಕರು ಮುಂದಾಗಿದ್ದರು” ಎಂದು ಆರೋಪಿಸಿದ್ದಾರೆ.
“ಈಗ ಪೊಲೀಸ್ ತನಿಖೆಯಲ್ಲಿ ಬಿಜೆಪಿ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೇ ಕೊಲೆಗಾರರಾಗಿರುವ ಬಗ್ಗೆ ಮಾಹಿತಿ ಬರುತ್ತಿದೆ. “ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ, ನೆರೆಮನೆಯ ಸುಡದು” ಈಗಲಾದರೂ ಎಚ್ಚೆತ್ತುಕೊಂಡು ಪ್ರತಿದಿನ ಬೆಳಗ್ಗೆ ಶಾಖೆಗಳಲ್ಲಿ ದ್ವೇಷ ಹಂಚುವುದನ್ನು ಬಿಟ್ಟು ಸಮಾಜದಲ್ಲಿ ಪ್ರೀತಿ ಹಂಚುವುದನ್ನ ಕಲಿಸುವಂತಾಗಲಿ. ಬಿಜೆಪಿ ನಾಯಕರು, ಸಂಸದರು ಹೆಣ ಬಿದ್ದ ತಕ್ಷಣ ರಾಜಕೀಯ ಲಾಭದ ಬೇಳೆ ಬೇಯಿಸಲು ಹೋಗುವ ಬದಲು ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ” ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.




