ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಹಾಲಿ ಸಂಸದರಲ್ಲಿ ಈ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯೇ ಅಧಿಕವಾಗಿದೆ. ಮುಖ್ಯವಾಗಿ ದ್ವೇಷ ಭಾಷಣದ ಮೂಲಕ ಫೇಮಸ್ ಆಗಿದ್ದ ಬಿಜೆಪಿ ಸಂಸದರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.
ಇಂಡಿಯಾ ಮೈತ್ರಿಕೂಟದ ವಿರುದ್ಧ ಸೆಣೆಸಾಡಿ, ಗೆದ್ದು, ಮತ್ತೆ ಅಧಿಕಾರಕ್ಕೇರಬೇಕೆಂದು ಭಾರೀ ತಂತ್ರ ಎಣೆಯುತ್ತಿರುವ ಬಿಜೆಪಿ, ವಿವಾದಿತ ಸಂಸದರನ್ನು ದೂರವಿಟ್ಟು, ಜನರನ್ನು ಸೆಳೆಯಲು ಯತ್ನಿಸುತ್ತಿದೆ. ಪ್ರಮುಖವಾಗಿ ಈ ಪಟ್ಟಿಯಲ್ಲಿ ಪ್ರಗ್ಯಾ ಠಾಕೂರ್, ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ರಮೇಶ್ ಬಿಧುರಿ ಹೆಸರು ಕಾಣಿಸಿಕೊಂಡಿಲ್ಲ. ಈ ಮೂವರು ಸಂಸತ್ತಿನ ಒಳಗೆ ಮತ್ತು ಹೊರಗೆ ಹೆಚ್ಚಾಗಿ ವಿವಾದಾದ್ಮಕ ಹೇಳಿಕೆ ನೀಡಿಯೇ ಸುದ್ದಿಯಾಗುತ್ತಿದ್ದರು.

ಭೋಪಾಲ್ನಲ್ಲಿ ಪ್ರಗ್ಯಾ ಠಾಕೂರ್ ಬದಲಾಗಿ ಬಿಜೆಪಿ ಅಲೋಕ್ ಶರ್ಮಾರಿಗೆ ಟಿಕೆಟ್ ನೀಡಲಾಗಿದೆ. 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಗ್ಯಾ ಠಾಕೂರ್ ಕಳೆದ ಬಾರಿ ಟಿಕೆಟ್ ಪಡೆದಿದ್ದರು. ಸಂಸದೆಯಾದ ಬಳಿಕ ಹಲವಾರು ವಿವಾದಗಳಲ್ಲಿ ಪ್ರಗ್ಯಾ ಸಿಲುಕಿಕೊಂಡಿದ್ದರು. ಸದ್ಯ ಆರೋಗ್ಯ ಸಮಸ್ಯೆ ನೆಪದಲ್ಲಿ ಜಾಮೀನು ಪಡೆದು ಪ್ರಗ್ಯಾ ಜೈಲಿನಿಂದ ಹೊರಕ್ಕೆ ಬಂದಿದ್ದಾರೆ.
ಇತ್ತೀಚೆಗೆ, ಪ್ರಗ್ಯಾ ಠಾಕೂರ್ ಕಬ್ಬಡಿ, ಫುಟ್ಬಾಲ್ ಆಟಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಕ್ಕೂ ಅಧಿಕವಾಗಿ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಹೇಳುವ ಮೂಲಕ ಪ್ರಗ್ಯಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
2008ರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಸಾವನ್ನಪ್ಪಿದ ಮುಂಬೈ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಬಗ್ಗೆಯೂ ವಿವಾದಾದ್ಮಕ ಹೇಳಿಕೆಯನ್ನು ಪ್ರಗ್ಯಾ ನೀಡಿದ್ದರು. ತನ್ನ ‘ಶಾಪ’ದಿಂದ ಹೇಮಂತ್ ಕರ್ಕರೆ ಸಾವನ್ನಪ್ಪಿದ ಎಂದು ಹೇಳಿಕೊಂಡಿದ್ದರು. ಆದರೆ, ಇತ್ತೀಚೆಗೆ ಪ್ರಗ್ಯಾ ಹೆಚ್ಚು ಸುದ್ದಿಯಾಗುತ್ತಿಲ್ಲ ಮತ್ತು ಸಕ್ರಿಯರಾಗಿಲ್ಲ. ಈ ಬೆನ್ನಲ್ಲೇ ಈಗ ಟಿಕೆಟ್ ಕೂಡಾ ಕಳೆದುಕೊಂಡಿದ್ದಾರೆ.
ಇನ್ನು ಬಿಜೆಪಿ ಪಟ್ಟಿಯಲ್ಲಿ ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಹೆಸರು ಕೂಡಾ ಕಾಣಿಸಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ಸಾಹೀಬ್ ಸಿಂಗ್ ವರ್ಮಾರ ಪುತ್ರ, ಎರಡು ಬಾರಿ ಸಂಸದರಾಗಿರುವ ಪರ್ವೇಶ್ ಹೆಸರು ಕಾಣದಿರುವುದು ಆಶ್ಚರ್ಯವಾಗಿದೆ.
ಬಿಜೆಪಿಯ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಒಟ್ಟು 33 ಹಾಲಿ ಸಂಸದರು ಸ್ಥಾನ ಪಡೆದಿಲ್ಲ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟಿಕೆಟ್ ಪಡೆದುಕೊಂಡಿದ್ದಾರೆ.




