ಭಾರತ ಮತ್ತು ಅಮೆರಿಕ (ಮೋದಿ-ಟ್ರಂಪ್) ನಡುವೆ ನಡೆದಿರುವ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ನೇತೃತ್ವದ ಸರ್ಕಾರವು ಮತ್ತೆ ರೈತರ ಮೇಲೆ ದಾಳಿ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಮೋದಿ-ಟ್ರಂಪ್ ಮಾತುಕತೆಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕವು 50%ನಿಂದ 18%ಗೆ ಇಳಿಸುವುದಾಗಿಯೂ, ಅಮೆರಿಕದ ಮೇಲಿನ ಸುಂಕವನ್ನು ಭಾರತವು ಶೂನ್ಯಕ್ಕೆ (0%) ಇಳಿಸುವುದಾಗಿ ನಿರ್ಧರಿಸಲಾಗಿದೆ ಎಂದು ಅಮೆರಿಕ-ಭಾರತ ಹೇಳಿಕೊಂಡಿವೆ. ಈ ಬೆನ್ನಲ್ಲೇ, ಸರ್ಕಾರದ ವಿರುದ್ಧ ಅಖಿಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಗಳನ್ನು ಮುಕ್ತವಾಗಿ ತೆರೆಯುವುದು ಕೃಷಿಯನ್ನು ಅವಲಂಬಿಸಿರುವ ದೇಶದ ಸುಮಾರು 70% ಜನಸಂಖ್ಯೆಗೆ ಮಾಡಿದ ‘ದ್ರೋಹ’ವಾಗಿದೆ. ಬಿಜೆಪಿ ಮತ್ತು ಅದರ ಸಹವರ್ತಿಗಳು ಸ್ವಾತಂತ್ರ್ಯಕ್ಕೆ ಮುಂಚೆಯೇ ವಿದೇಶಿ ಹಿತಾಸಕ್ತಿಗಳ ಏಜೆಂಟರಾಗಿದ್ದರು. ಇಂದು ಕೂಡ ಅದೇ ರೀತಿ ಮುಂದುವರಿಯುತ್ತಿದ್ದಾರೆ” ಎಂದು ಯಾದವ್ ಪ್ರತಿಪಾದಿಸಿದ್ದಾರೆ
“ಕೃಷಿ ಮಾರುಕಟ್ಟೆಯಲ್ಲಿ ವಿದೇಶಗಳಿಗೆ ತೆರೆಯುವ ಇಂತಹ ನೀತಿಗಳು ರೈತರಿಗೆ ಹಾನಿ ಮಾಡುವುದಲ್ಲದೆ, ಆಹಾರಧಾನ್ಯಗಳು ಮತ್ತು ಕೃಷಿ ಉತ್ಪನ್ನಗಳಲ್ಲಿ ಲಾಭಕೋರತನವನ್ನು ಹೆಚ್ಚಿಸುತ್ತವೆ. ಹೊಸ ದಲ್ಲಾಳಿ ವರ್ಗವನ್ನು ಸೃಷ್ಟಿಸುವ ಮೂಲಕ ಕೆಳಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಇದು ಬೆಲೆ ಏರಿಕೆಗೆ ಕಾರಣವಾಗುತ್ತದೆ” ಎಂದು ಯಾದವ್ ಹೇಳಿದ್ದಾರೆ.
“ಈ ಕ್ರಮಗಳು ರೈತರ ಆದಾಯವನ್ನು ಕ್ರಮೇಣ ಕಡಿಮೆ ಮಾಡುತ್ತವೆ. ಶ್ರೀಮಂತ ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ತಮ್ಮ ಭೂಮಿಯನ್ನು ಮಾರಾಟ ಮಾಡಲು ರೈತರನ್ನು ಒತ್ತಾಯಿಸುತ್ತವೆ. ಭೂಮಿಯನ್ನು ಕಬಳಿಸುವುದೇ ಬಿಜೆಪಿ ಮತ್ತು ಅದರ ಸಹವರ್ತಿಗಳ ಅಂತಿಮ ಉದ್ದೇಶವಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಉದ್ದೇಶಿತ ಬೀಜ ಮಸೂದೆಯು (Seed Bill) ಭಾರತೀಯ ಕೃಷಿಗೆ ಮಾರಕ. ಇದು ಬಿಜೆಪಿ ಸರ್ಕಾರದ ರೈತ ವಿರೋಧಿ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಆಡಳಿತಾರೂಢ ಪಕ್ಷವು ಬಿಜೆಪಿ) ಭೂಸ್ವಾಧೀನ ಕಾಯ್ದೆಗಳನ್ನು ತರುತ್ತಿದೆ. ಪ್ರತಿ ವರ್ಷ ಜನರನ್ನು ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡುವ ಮೂಲಕ ಅವಮಾನಿಸುತ್ತಿದೆ. ಬೀಜಗಳು, ಕೀಟನಾಶಕಗಳು, ಶೇಖರಣಾ ಘಟಕಗಳು, ಬೆಳೆ ವಿಮೆ ಹಾಗೂ ಕೃಷಿ ವ್ಯಾಪಾರಗಳಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಉತ್ತೇಜಿಸುತ್ತಿದೆ” ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕೇರಳದಲ್ಲಿ ಕುಂಭಮೇಳ ರಾಜಕಾರಣ!
ಬಿಜೆಪಿ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆಯನ್ನು ಕೂಡ ಸಂಗ್ರಹಿಸುತ್ತದೆ. ಈ ಬೃಹತ್ ಒಪ್ಪಂದದಿಂದ ಬಿಜೆಪಿ ನಾಯಕರು ಎಷ್ಟು ‘ಕಮಿಷನ್’ ಗಳಿಸಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ಸರ್ಕಾರ ವಿವರಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಈಗಾಗಲೇ, ಬೀಡಾಡಿ ದನಗಳಂತಹ ಸಮಸ್ಯೆಗಳಿಂದ ತೊಂದರೆಗೀಡಾಗಿರುವ ರೈತರು ಇನ್ನು ಮುಂದೆ ಸರ್ಕಾರದ ಕ್ರಮಗಳನ್ನು ಸಹಿಸುವುದಿಲ್ಲ. ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಪ್ರತಿರೋಧಕ್ಕೆ ರೈತರು ಮತ್ತು ನಾಗರಿಕರು ಸಿದ್ದರಾಗಬೇಕು. ಬಿಜೆಪಿ ಹಠಾವೋ, ಹೊಲ, ಕೃಷಿ ಮತ್ತು ರೈತರ ಬಚಾವೋ ಆಂದೋಲನ ನಡೆಸಬೇಕಿದೆ” ಎಂದು ಕರೆಕೊಟ್ಟಿದ್ದಾರೆ.





