- ನಾಲ್ಕು ಸೀಟು ಹಂಚಿಕೆಯ ಮಾತುಕತೆ ಆಗಿದೆ ಎಂದಿದ್ದ ಮಾಜಿ ಸಿಎಂ ಬಿಎಸ್ವೈ
- ನಾನು ಹೇಳುವಾಗಲೂ ಒಂದು ರೂಪಕ್ಕೆ ಬಂದಿರಲಿಲ್ಲ ಎಂದ ಬಿಜೆಪಿ ಮುಖಂಡ
ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿದ್ದು, ನಾಲ್ಕು ಸೀಟು ಬಿಟ್ಟುಕೊಡುವ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ‘ಮಾತುಕತೆ ಇನ್ನೂ ಅಂತಿಮ ಆಗಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ವೈ, “ಪ್ರಧಾನಿ ನರೇಂದ್ರ ಮೋದಿ ಬೇರೆ ವಿಷಯದಲ್ಲಿ ಬ್ಯುಝಿಯಾಗಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಬಹುಶಃ ನಾಳೆ ಅಥವಾ ನಾಡಿದ್ದು ನಂತರ ಮಾತುಕತೆ ಆಗಬಹುದು. ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ, ಕಾದು ನೋಡುತ್ತೇವೆ. ಮೈತ್ರಿ ವಿಚಾರ ಇನ್ನೂ ಯಾವುದೇ ಅಂತಿಮ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಕಾದು ನೋಡಬೇಕು” ಎಂದು ಹೇಳಿದರು.
ನಿಮ್ಮ ಹೇಳಿಕೆಯನ್ನು ಕುಮಾರಸ್ವಾಮಿಯವರು ಸ್ವಾಗತಿಸಿದ್ದಾರೆ ಎಂದು ಪತ್ರಕರ್ತರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, ಈ ಹಿಂದೆ ನಾನು ಹೇಳುವಾಗಲೂ ಒಂದು ರೂಪಕ್ಕೆ ಬಂದಿರಲಿಲ್ಲ. ಈಗಲೂ ಅಷ್ಟೇ ಮೈತ್ರಿ ವಿಚಾರ ಯಾವುದೇ ರೂಪಕ್ಕೆ ಬಂದಿಲ್ಲ. ಎಲ್ಲವನ್ನೂ ಪ್ರಧಾನಿ ಮೋದಿ, ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ; ಜೆಡಿಎಸ್ಗೆ ನಾಲ್ಕು ಕ್ಷೇತ್ರ : ಯಡಿಯೂರಪ್ಪ
ಯಡಿಯೂರಪ್ಪ ಈ ಹಿಂದೆ ಹೇಳಿದ್ದೇನು?
ಕಳೆದ ಸೆ.8ರಂದು ಬೆಂಗಳೂರಿನಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದ ಯಡಿಯೂರಪ್ಪ, ಜೆಡಿಎಸ್ ಜೊತೆ ಮೈತ್ರಿಗೆ ಹೈಕಮಾಂಡ್ ಒಲವು ತೋರಿಸಿದ್ದು, ಮೈತ್ರಿ ಮಾಡಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ ಎಂದಿದ್ದರು.
“ಅಲ್ಲದೇ, ಚರ್ಚೆಯ ನಂತರ ಜೆಡಿಎಸ್ಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಅಮಿತ್ ಶಾ ಒಪ್ಪಿದ್ದಾರೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಹೆಚ್ಚು ಶಕ್ತಿ ಬರಲಿದ್ದು, 25ರಿಂದ 26 ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆದ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದರು.
ಇದರೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗುವುದನ್ನು ಖಚಿತಪಡಿಸಿದ್ದರು. ಆ ಬಳಿಕ ಕಾಂಗ್ರೆಸ್ನವರು ಬಿಜೆಪಿಯ ಬಿ ಟೀಮ್ ಜೆಡಿಎಸ್ ಎಂದು ಟೀಕಿಸಿದ್ದರು. ಈ ಬೆಳವಣಿಗೆಯ ನಡುವೆಯೇ, ಈಗ ಬಿಎಸ್ವೈ ಮಾತು ಬದಲಾಯಿಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.





