ಮೇಘಾಲಯದಲ್ಲಿ ನಡೆದ ಸಭೆಯೊಂದರಲ್ಲಿ ಹಿರಿಯ ಬಿಜೆಪಿ ನಾಯಕ ಸುನಿಲ್ ದೇವಧರ್ ಕ್ರೈಸ್ತರನ್ನು ಮತ್ತು ಯೇಸುಕ್ರಿಸ್ತನನ್ನು ಅಪಹಾಸ್ಯ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಹಲವರು ದೇವಧರ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ದೂರು ದಾಖಲಾಗಿದೆ. ಎಲ್ಲ ಕಡೆಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ದೇವಧರ್ ಕ್ಷಮೆಯಾಚಿಸಿದ್ದಾರೆ.
ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ದೇವಧರ್ ಅವರ ಹೇಳಿಕೆಯನ್ನು ಖಂಡಿಸಿದ್ದು, ರಾಜ್ಯ ಎನ್ಸಿಪಿಯ ಯುವ ಘಟಕವು, “ದೇವಧರ್ ಕ್ರೈಸ್ತರನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ದೇವಧರ್ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ಒಡಿಶಾ ಕ್ರೈಸ್ತರ ಮೇಲೆ ಬಜರಂಗದಳದ ದಾದಾಗಿರಿ: ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರೇ ಗುರಿ
ಮಹಾರಾಷ್ಟ್ರದವರಾದ ದೇವಧರ್, ಸ್ಥಳೀಯ ಖಾಸಿ ಭಾಷೆಯಲ್ಲಿ ಭಾಷಣ ಮಾಡಿದ್ದರು. ಕೆಲವು ಚರ್ಚ್ಗಳು ಶಾಲಾ ದಾಖಲಾತಿಗಾಗಿ ಮತಾಂತರ ಮತ್ತು ಕಡ್ಡಾಯ ಬೈಬಲ್ ಅಧ್ಯಯನದಂತಹ ಷರತ್ತುಗಳನ್ನು ಹೇರುತ್ತಿವೆ ಎಂದು ದೇವಧರ್ ಆರೋಪಿಸಿದ್ದರು. ಅಲ್ಲದೆ, ಯೇಸು ಕ್ರಿಸ್ತನ ಬಗ್ಗೆ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಂಕಿಟ್ಬುಕ್ ಪೋಷ್ಣಾ, “ಕ್ರೈಸ್ತರ ವಿರುದ್ಧ ತೀವ್ರ ಪಕ್ಷಪಾತವನ್ನು ಈ ಹೇಳಿಕೆ ತೋರಿಸುತ್ತವೆ. ದೇವಧರ್ ಕ್ರೈಸ್ತನನ್ನು ಅಪಹಾಸ್ಯ ಮಾಡಿದ್ದಾರೆ. ಯೇಸುವನ್ನು ಹೊರಗಿನವರು ಅಥವಾ ಧಾಕರ್ ಎಂದು ಉಲ್ಲೇಖಿಸಿದ್ದಾರೆ” ಎಂದು ದೂರಿದ್ದಾರೆ. ಹಾಗೆಯೇ ಈ ಹೇಳಿಕೆಗಳು ತಪ್ಪು, ಸಮಾಜದೊಳಗೆ ದ್ವೇಷ ಮತ್ತು ವಿಭಜನೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿವೆ ಎಂದು ಪಕ್ಷ ಹೇಳಿದೆ.
ಸಾಮಾಜಿಕ ಸಂಘಟನೆಯಾದ ಹಿನ್ನಿವ್ಟ್ರೆಪ್ ಯೂತ್ ಕೌನ್ಸಿಲ್ (ಎಚ್ವೈಸಿ) ಶಿಲ್ಲಾಂಗ್ನ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ದೇವಧರ್ ಅವರ ಚಿತ್ರಗಳನ್ನು ಸುಟ್ಟು ಹಾಕಿದ್ದಾರೆ. ಹಾಗೆಯೇ ಕೋಮು ಭಾವನೆಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸಾರ್ವಜನಿಕವಾಗಿ ಟೀಕೆಗಳು ಹೆಚ್ಚಾಗುತ್ತಿರುವ ನಡುವೆ ಬಿಜೆಪಿ ಮೇಘಾಲಯ ನಾಯಕತ್ವವು ದೇವಧರ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಹಾಗೆಯೇ ಬಿಜೆಪಿ ಎಲ್ಲಾ ಧರ್ಮಗಳು, ಸಮುದಾಯಗಳನ್ನು ಗೌರವಿಸುತ್ತದೆ ಎಂದು ಒತ್ತಿ ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಅದಾದ ಬಳಿಕ ಕ್ಷಮೆಯಾಚಿಸಿರುವ ದೇವಧರ್, “ಕ್ರಿಸ್ತನ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗಳನ್ನು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಕ್ಷಮೆಯಾಚನೆಯನ್ನು ಬಿಜೆಪಿ ರಾಜ್ಯ ಘಟಕಕ್ಕೆ ಕಳುಹಿಸಿದ್ದಾಗಿ ವರದಿಯಾಗಿದೆ.
ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ದೇವಧರ್
ಈ ಹಿಂದೆ 2025ರ ಆಗಸ್ಟ್ನಲ್ಲಿ ದೇವಧರ್ ಪ್ರತಿಯೊಬ್ಬ ಹಿಂದೂ ಕೂಡ ಕೈಯಲ್ಲಿ ತ್ರಿಶೂಲ, ಗದೆ ಮತ್ತು ಪರಶು (ಕೊಡಲಿ) ಹಿಡಿದಿರುವ ಗಣಪತಿ ಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಹಾಗೆಯೇ, “ಹಿಂದೂಗಳಿಗೆ ಸ್ವಯಂ ರಕ್ಷಣೆ ಎಂಬುದು ಕೇವಲ ಸಂಪ್ರದಾಯವಲ್ಲ, ಅದು ಸಾಂವಿಧಾನಿಕ ಹಕ್ಕು. ಹೀಗಾಗಿ ಶಸ್ತ್ರಗಳನ್ನು ಹೊಂದಿರುವ ಗಣಪತಿಯ ಮೂಲ ರೂಪವನ್ನೇ ಆರಾಧಿಸಬೇಕು” ಎಂದು ಪ್ರತಿಪಾದಿಸಿದ್ದರು.
ಅಷ್ಟು ಮಾತ್ರವಲ್ಲದೆ ಅಹಿಂಸೆ ಎಂಬ ಪದದ ತಪ್ಪು ವ್ಯಾಖ್ಯಾನ ಮಾಡಿ ಹಿಂದೂಗಳು ದೇವರ ಕೈಯಲ್ಲಿದ್ದ ಶಸ್ತ್ರಗಳನ್ನು ತೆಗೆದುಹಾಕಿದ್ದಾರೆ. ಇದರಿಂದಾಗಿ ಇಂದು ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದೇವೆ ಎಂದು ವಾದಿಸಿದ್ದರು. ಗಣೇಶನನ್ನು ಶಾಂತಿ ಮತ್ತು ವಿಘ್ನನಿವಾರಕನಾಗಿ ಆರಾಧಿಸುವ ಸಂಪ್ರದಾಯಕ್ಕೆ ದೇವಧರ್ ಶಸ್ತ್ರಸಜ್ಜಿತ ಗಣೇಶನ ಪರಿಕಲ್ಪನೆಯು ವಿರುದ್ಧವಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಇದು ಣೇಶೋತ್ಸವದ ಧಾರ್ಮಿಕ ಸ್ವರೂಪವನ್ನು ರಾಜಕೀಯಗೊಳಿಸುವ ಪ್ರಯತ್ನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವುದು ಬಿಜೆಪಿಯ ಅಜೆಂಡಾ ಎಂದು ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಕಿಡಿಕಾರಿದ್ದರು.





