ಮುಡಾ ಹಗರಣದ ವಿರುದ್ಧ ಶನಿವಾರ ಬೆಳಗ್ಗೆ 8:30ಗೆ ಪಾದಯಾತ್ರೆ ಆರಂಭವಾಗಲಿದೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ಪಾದಯಾತ್ರೆಗೆ ಎನ್ಡಿಎ ಒಕ್ಕೂಟದ ಮಿತ್ರ ಪಕ್ಷವಾದ ಜೆಡಿಎಸ್ನ ಬೆಂಬಲವಿಲ್ಲ. ಬಿಜೆಪಿ ಈ ಪಾದಯಾತ್ರೆಯ ಬಗ್ಗೆ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ ಎಂದು ಬುಧವಾರ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹೇಳಿದ್ದರು.
ಇದನ್ನು ಓದಿದ್ದೀರಾ? ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ಇಲ್ಲ; ಕಟುವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ
ಇದಾದ ಬೆನ್ನಲ್ಲೇ ಗುರುವಾರ ಸಂಸತ್ ಭವನದ ಎಚ್ಡಿ ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಎಚ್ಡಿಕೆ ಅವರನ್ನು ಭೇಟಿಯಾಗಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಮೋಹನ್ ದಾಸ್, ಬಿಜೆಪಿ ನಾಯಕರಾದ ಬಂಡೆಪ್ಪ ಕಾಶೆಂಪೂರ್, ಮಲ್ಲೇಶ್ ಬಾಬು ಸೇರಿ ಎಚ್ಡಿ ಕುಮಾರಸ್ವಾಮಿ ಜೊತೆ ಸಭೆ ನಡೆಸಿದ್ದಾರೆ.
ಈ ಸಭೆಯ ಬಳಿಕ ಬಿವೈ ವಿಜಯೇಂದ್ರ, ರಾಧಮೋಹನ್ ದಾಸ್ ಜೊತೆ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪ್ರಲ್ಹಾದ್ ಜೋಶಿ, “ಪಾದಯಾತ್ರೆ ಬಗ್ಗೆ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. ಸಣ್ಣ ಗೊಂದಲ ಬಗೆಹರಿಸಿಕೊಂಡಿದ್ದೇವೆ. ಪಾದಯಾತ್ರೆ ಏಳು ದಿನಗಳ ಕಾಲ ನಡೆಯಲಿದೆ. ಯಾರನ್ನೂ ವಿಶೇಷವಾಗಿ ಕರೆಯಲ್ಲ. ಭ್ರಷ್ಟಾಚಾರದ ವಿರುದ್ಧ ಇರುವವರು ಭಾಗವಹಿಸಬಹುದು” ಎಂದು ಹೇಳಿದ್ದಾರೆ.




