ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಟೀಕಿಸಿದ್ದ ಕಾರಣಕ್ಕೆ ಗುಜರಾತ್ ಪೊಲೀಸರು ಬೆಂಗಳೂರಿನಲ್ಲಿ ಬಿಜೆಪಿ ಸದಸ್ಯ ಗುರುದತ್ ಶೆಟ್ಟಿ ಕಾರ್ಕಳ ಅವರನ್ನು ಬಂಧಿಸಿದೆ ಎಂದು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, “ಗುಜರಾತ್ ರಾಜ್ಯ ಪೊಲೀಸ್ ತಂಡ ಇಂದು ಬೆಂಗಳೂರಿಗೆ ಹಾರಿ, ಬಿಜೆಪಿಯ ಯುವ ಸದಸ್ಯ ಗುರುದತ್ ಕಾರ್ಕಳ ಶೆಟ್ಟಿ ಅವರನ್ನು ಬಂಧಿಸಿದೆ. ಏಕೆಂದರೆ ಅವರು ಮೋದಿಯ ನೀತಿಗಳನ್ನು ಟೀಕಿಸಿದ್ದರು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸೇವಕನನ್ನು ಟ್ರಂಪ್ ಆಹ್ವಾನಿಸಿರುವುದು ಪ್ರಧಾನಿಗೆ ದೊಡ್ಡ ಅಪಮಾನ: ಸುಬ್ರಮಣಿಯನ್ ಸ್ವಾಮಿ
“ಪೊಲೀಸ್ ದೌರ್ಜನ್ಯದ ಬಗ್ಗೆ ಅನೇಕರು ನನಗೆ ದೂರು ನೀಡಿದ್ದಾರೆ. ಕೂಡಲೇ ಗುರುದತ್ ಅವರನ್ನು ಬಿಡುಗಡೆ ಮಾಡಬೇಕು. ವಕೀಲ ಸಮ್ಮುಖದಲ್ಲಿ ಹೇಳಿಕೆಯನ್ನು ನೀಡಲು ಅವಕಾಶ ಮಾಡಿಕೊಡಬೇಕು” ಎಂದು ತಿಳಿಸಿದ್ದಾರೆ.
ಹಾಗೆಯೇ “ನನ್ನ ವಕೀಲ ಸ್ನೇಹಿತರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಪರವಾಗಿ ನಿಲ್ಲುವಂತೆ ನಾನು ಕೇಳಿಕೊಂಡಿದ್ದೇನೆ. ನಮ್ಮ ಸ್ಥಳೀಯ ವಕೀಲರ ಉಪಸ್ಥಿತಿಯಲ್ಲಿ ಅವರನ್ನು ಪ್ರಶ್ನಿಸಬಹುದು” ಎಂದು ಹೇಳಿದ್ದಾರೆ.
The Gujarat State Police team flew to Bengaluru today and arrested a young BJP member Gurudath Karkala Shetty because he was critical of Modi’s policies !!!! Many have complained to me about the Police atrocity. He be should be freed immediately and asked to explain his statement…
— Subramanian Swamy (@Swamy39) November 10, 2025
ಇನ್ನು ಸುಬ್ರಮಣಿಯನ್ ಸ್ವಾಮಿ ಬಿಜೆಪಿಗರಾದರೂ ಈ ಹಿಂದೆ ಹಲವು ಬಾರಿ ಮೋದಿ ನೀತಿಗಳನ್ನು, ಕೇಂದ್ರದ ಕ್ರಮಗಳನ್ನು ಟೀಕಿಸುತ್ತಾ ಬಂದಿದ್ದಾರೆ. ಪಹಲ್ಗಾಮ್ ದಾಳಿಯ ನಂತರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದರು. ಹಾಗೆಯೇ ಚೀನಾ, ಪಾಕಿಸ್ತಾನ ಮತ್ತು ಇತರ ದೇಶಗಳ ಮುಂದೆ ಮೋದಿ, ಶಾ ಶರಣಾಗಿದ್ದಾರೆ ಎಂದು ಆರೋಪಿಸಿದ್ದರು. ಇನ್ನು ಮೋದಿ ನೇತೃತ್ವದಲ್ಲಿ ಬಿಜೆಪಿ ‘ಟೈಟಾನಿಕ್’ ಹಡಗಿನಂತೆ ಮುಳುಗಲಿದೆ 2024ರ ಜುಲೈನಲ್ಲಿ ಹೇಳಿದ್ದರು.
ಸುಬ್ರಮಣಿಯನ್ ಸ್ವಾಮಿ ಬೆಂಬಲಿಗರಾದ ಗುರುದತ್ ಕಾರ್ಕಳ ಶೆಟ್ಟಿ ಎಂಬ ವ್ಯಕ್ತಿ ಪ್ರಧಾನಿ ಮೋದಿ ನೀತಿಗಳನ್ನು ಟೀಕಿಸುತ್ತಿದ್ದರು ಎಂಬುದು ಎಕ್ಸ್ ಖಾತೆಯ ಪರಿಶೀಲಿಸಿದಾಗ ಕಂಡುಬಂದಿದೆ.




