ಮಹಾರಾಷ್ಟ್ರ ಭಾಷಾ ವಿವಾದದ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿದ ಹೇಳಿಕೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟೀಕಿಸಿದ್ದಾರೆ. “ದುಬೆ ಹೇಳಿಕೆ ಅನುಚಿತ ಮತ್ತು ಗೊಂದಲ ಉಂಟುಮಾಡುವ ಅಪಾಯವಿದೆ” ಎಂದು ಮಂಗಳವಾರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭಾಷಾ ವಿವಾದ ಮತ್ತು ಮರಾಠಿ ಮಾತನಾಡದ ಜನರ ಮೇಲಿನ ದಾಳಿಯ ಮಧ್ಯೆ ಜಾರ್ಖಂಡ್ನ ಲೋಕಸಭಾ ಸದಸ್ಯ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿವಾದಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದರು.
ಇದನ್ನು ಓದಿದ್ದೀರಾ? ಹಿಂದಿ ತಿಳಿಯದಿರುವುದು ಗಂಭೀರ ದೌರ್ಬಲ್ಯ: ಭಾಷಾ ಸಮರದ ನಡುವೆ ಶ್ರೀಧರ್ ವೆಂಬು ಹೇಳಿಕೆ
“ಮುಂಬೈನಲ್ಲಿ ಹಿಂದಿ ಭಾಷಿಕರನ್ನು ಹೊಡೆಯುವವರು ನಿಮಗೆ ಧೈರ್ಯವಿದ್ದರೆ, ಮಹಾರಾಷ್ಟ್ರದಲ್ಲಿ ಉರ್ದು ಭಾಷಿಕರನ್ನು ಹೊಡೆಯಲು ಪ್ರಯತ್ನಿಸಿ. ನಾಯಿ ಕೂಡ ತನ್ನ ಮನೆಯಲ್ಲಿ ಹುಲಿಯೇ. ನಾಯಿ ಯಾರು ಮತ್ತು ಹುಲಿ ಯಾರು ಎಂಬುದನ್ನು ನೀವೇ ನಿರ್ಧರಿಸಿ” ಎಂದು ಜಾರ್ಖಂಡ್ನ ಗೊಡ್ಡಾದ ಸಂಸದ ದುಬೆ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಫಡ್ನವೀಸ್, “ನಿಶಿಕಾಂತ್ ದುಬೆ ಅವರ ಸಂಪೂರ್ಣ ಹೇಳಿಕೆಯನ್ನು ನೀವು ಕೇಳಿದರೆ, ಅವರು ನಿರ್ದಿಷ್ಟವಾಗಿ ಒಂದು ಸಂಘಟನೆಯ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಯುತ್ತದೆ. ಅವರು ಸಾಮಾನ್ಯವಾಗಿ ಮರಾಠಿ ಜನರ ವಿರುದ್ಧ ಮಾತನಾಡಿರುವುದಲ್ಲ. ಆದಾಗ್ಯೂ, ಅಂತಹ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ. ಈ ರೀತಿಯ ವ್ಯಾಖ್ಯಾನ ಜನರ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡುತ್ತದೆ” ಎಂದು ತಿಳಿಸಿದ್ದಾರೆ.
“ದೇಶದ ಜಿಡಿಪಿಗೆ ಅತಿದೊಡ್ಡ ಕೊಡುಗೆ ಮಹಾರಾಷ್ಟ್ರ ನೀಡಿದೆ. ದೇಶದ ಇತಿಹಾಸ ಮತ್ತು ವರ್ತಮಾನದಲ್ಲಿ ಮಹಾರಾಷ್ಟ್ರ ಮತ್ತು ಮರಾಠಿ ಜನರ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಯಾರದರೂ ತಿರಸ್ಕರಿಸುವುದಾದರೆ ಅದು ತಪ್ಪೆಂದು ನಾನು ಭಾವಿಸುತ್ತೇನೆ” ಎಂದೂ ಈ ಸಂದರ್ಭದಲ್ಲೇ ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಎರಡು ದಶಕಗಳ ನಂತರ ‘ಮರಾಠಿ ವಿಜಯ’ ರ್ಯಾಲಿ ನೆಪದಲ್ಲಿ ಒಂದಾದ ರಾಜ್, ಉದ್ಧವ್ ಠಾಕ್ರೆ
“ನನ್ನ ಹೇಳಿಕೆಗಳನ್ನು ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ. ಮರಾಠಿ ಜನರು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆಕ್ರಮಣಕಾರರು ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ಮರಾಠರು ದೇಶಾದ್ಯಂತ ಹೋರಾಡಿದ್ದಾರೆ. ಮೂರನೇ ಪಾಣಿಪತ್ ಯುದ್ಧದ ಸಮಯದಲ್ಲಿ, ಅಬ್ದಾಲಿ ಒಪ್ಪಂದ ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ನಮ್ಮ ಮರಾಠರು ಹಾಗೆ ಮಾಡಲಿಲ್ಲ” ಎಂದು ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ಬಿಜೆಪಿ-ಶಿವಸೇನೆ(ಶಿಂದೆ ಬಣ) ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಹೆಚ್ಚಾಗುತ್ತಿದ್ದಂತೆ ಫಡ್ನವೀಸ್ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಇವೆಲ್ಲವುದರ ನಡುವೆ ಅಲ್ಲಲ್ಲಿ ಹಿಂದಿ ಭಾಷಿಕರ ಮೇಲೆ ಮರಾಠಿ ಭಾಷಿಕರು ದಾಳಿ ನಡೆಸಿದ್ದಾರೆ ಎಂಬ ಆರೋಪಗಳಿವೆ.





