ಸಮಾಜ ಸುಧಾರಕ ರಾಜರಾಮ್ ಮೋಹನ್ ರಾಯ್ ಅವರನ್ನು ‘ಬ್ರಿಟಿಷ್ ಏಜೆಂಟ್’ ಎಂದು ಕರೆದಿದ್ದ ಮಧ್ಯಪ್ರದೇಶದ ಸಚಿವ ಮತ್ತು ಬಿಜೆಪಿ ನಾಯಕ ಇಂದರ್ ಸಿಂಗ್ ಪರ್ಮಾರ್, ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ. “ಬಾಯಿ ತಪ್ಪಿ ಹೇಳಿಕೆಯನ್ನು ನೀಡಿದ್ದೇನೆ” ಎಂದು ಹೇಳಿದ್ದಾರೆ.
ಬುಡಕಟ್ಟು ಮುಖಂಡ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದಂದು ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಇಂದರ್ ಸಿಂಗ್, “ರಾಜರಾಮ್ ಮೋಹನ್ ರಾಯ್ ಒಬ್ಬ ಬ್ರಿಟಿಷ್ ಏಜೆಂಟ್. ದೇಶದಲ್ಲಿ ಬ್ರಿಟಿಷರ ದಲ್ಲಾಳಿಯಾಗಿ ಕೆಲಸ ಮಾಡಿದ್ದರು. ಧಾರ್ಮಿಕ ಮತಾಂತರಕ್ಕೆ ಸಹಾಯ ಮಾಡಿದ್ದರು” ಎಂದಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ಸೌಹಾರ್ದ ಜಿಲ್ಲೆ ನಿರ್ಮಾಣದ ಸಂಕಲ್ಪದೊಂದಿಗೆ ಸಿಪಿಎಂ ಪರ್ಯಾಯ ಶಕ್ತಿ ಆಗಬೇಕು : ಸುರೇಶ್ ಕಲ್ಲಾಗರ
“ಬ್ರಿಟಿಷರು ಹಲವಾರು ಜನರನ್ನು ‘ನಕಲಿ ಸಮಾಜ ಸುಧಾರಕರು’ ಎಂದು ಬಿಂಬಿಸಿದ್ದರು. ಮತಾಂತರವನ್ನು ಪ್ರೋತ್ಸಾಹಿಸುವವರನ್ನು ಉತ್ತೇಜಿಸಿದ್ದು. ಇದನ್ನು ನಿಲ್ಲಿಸಿ ಬುಡಕಟ್ಟು ಸಮುದಾಯವನ್ನು ರಕ್ಷಿಸುವ ಧೈರ್ಯ ಯಾರಿಗಾದರೂ ಇದ್ದರೆ, ಅದು ಬಿರ್ಸಾ ಮುಂಡಾ ಮಾತ್ರ” ಎಂದೂ ಹೇಳಿಕೊಂಡಿದ್ದರು.
ಪರ್ಮಾರ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳು ಹೇಳಿಕೆಯನ್ನು ಟೀಕಿಸಿದೆ. ಈ ಬೆನ್ನಲ್ಲೇ ಪರ್ಮಾರ್ ಕ್ಷಮೆಯಾಚಿಸಿದ್ದಾರೆ. “ರಾಜರಾಮ್ ಮೋಹನ್ ರಾಯ್ ಒಬ್ಬ ಸಮಾಜ ಸುಧಾರಕ, ಅವರನ್ನು ಗೌರವಿಸಬೇಕು. ನಾನು ಬಾಯಿ ತಪ್ಪಿ ಈ ಹೇಳಿಕೆ ನೀಡಿದೆ. ಈ ಹೇಳಿಕೆ ಬಗ್ಗೆ ತುಂಬಾ ದುಃಖಿತನಾಗಿದ್ದೇನೆ. ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
1772ರ ಮೇ 22ರಂದು ಜನಿಸಿದ ರಾಜರಾಮ್ ಮೋಹನ್ ರಾಯ್ ಬಂಗಾಳದ ರಾಧಾನಗರದಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಭಾರತೀಯ ನವೋದಯದ ಪಿತಾಮಹ ಎಂದೂ ಅವರನ್ನು ಕರೆಯಲಾಗುತ್ತದೆ.





