ಬಿಜೆಪಿ ಸಂಸದ ರಾಮ್ಶಂಕರ್ ಕಠಾರಿಯಾ ಅವರಿಗೆ 12 ವರ್ಷದ ಹಳೆಯ ಪ್ರಕರಣದಲ್ಲಿ ಎಂಪಿ/ಎಂಎಲ್ಎ ವಿಶೇಷ ನ್ಯಾಯಾಲಯ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಭಾರತೀಯ ದಂಡಸಂಹಿತೆ ಕಾಯ್ದೆ ಸೆಕ್ಷನ್ 147 (ದಂಗೆ) ಮತ್ತು 323 (ಸ್ವಯಂಪ್ರೇರಿತವಾಗಿ ಘಾಸಿಗೊಳಿಸಿದ್ದು) ಅನ್ವಯ ಶಿಕ್ಷೆ ವಿಧಿಸಲಾಗಿದೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಮ್ಶಂಕರ್ ಕಠಾರಿಯಾ ಅವರಿಗೆ ನ್ಯಾಯಾಲಯ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.
2011ರ ನವೆಂಬರ್ 16ರಂದು ಕಠಾರಿಯಾ ಅವರು ಆಗ್ರಾ ಸಂಸದರಾಗಿದ್ದ ಅವಧಿಯಲ್ಲಿ 10-15 ಮಂದಿ ಬೆಂಬಲಿಗರೊಂದಿಗೆ ಆಗ್ರಾ ಪ್ರದೇಶದಲ್ಲಿ ವಿದ್ಯುತ್ ಸೇವೆ ಒದಗಿಸುತ್ತಿದ್ದ ಟೊರೆಂಟ್ ಪವರ್ ಎಂಬ ಫ್ರಾಂಚೈಸಿ ಕಂಪನಿಯ ಕಚೇರಿಗೆ ನುಗ್ಗಿ ಕಚೇರಿ ಧ್ವಂಸಗೊಳಿಸಿದ್ದರು ಎಂಧು ಆಪಾದಿಸಲಾಗಿತ್ತು. ಜೊತೆಗೆ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿದ ಆರೋಪವೂ ಇತ್ತು. ಕಂಪನಿ ಪ್ರತಿನಿಧಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಘಟನೆಯಾದ ಸಂದರ್ಭದಲ್ಲಿ ಬಿಎಸ್ಪಿ ಅಧಿಕಾರದಲ್ಲಿತ್ತು.
ಈ ಸುದ್ದಿ ಓದಿದ್ದೀರಾ? ಜೈಪುರ | ಪತಿಯಿಂದ ಲಂಚ ಸ್ವೀಕಾರ: ಜೈಪುರ ಮೇಯರ್ ವಜಾ
ಪ್ರಜಾಪ್ರತಿನಿಧಿ ಕಾಯ್ದೆ-1951ರ ಅನ್ವಯ ಎರಡು ವರ್ಷ ಅಥವಾ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾಗುವ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕಾಗುವ ಕಾರಣ, ಕಠಾರಿಯಾ ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಆರು ವರ್ಷಗಳ ಕಾಲ ಸ್ಪರ್ಧಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಬಿಎಸ್ಪಿ ಸರ್ಕಾರ ಅಧಿಕಾರದಲ್ಲಿತ್ತು. ನನ್ನ ವಿರುದ್ಧ ಹಲವು ರಾಜಕೀಯ ಪ್ರೇರಿತ ದೂರುಗಳನ್ನು ದಾಖಲಿಸಲಾಗಿತ್ತು. ಇದು ಅವುಗಳ ಪೈಕಿ ಒಂದು. ನನ್ನ ವಿರುದ್ಧ ನ್ಯಾಯಾಲಯ ನೀಡಿರುವ ತೀರ್ಪನ್ನು ನಾನು ಗೌರವಿಸುತ್ತೇನೆ. ನ್ಯಾಯಾಲಯದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ ” ಎಂದು ಶನಿವಾರ ಕೋರ್ಟ್ ಕಲಾಪದಲ್ಲಿ ಪಾಲ್ಗೊಂಡ ಕಠಾರಿಯಾ ತಿಳಿಸಿದ್ದಾರೆ.
ರಾಮ್ಶಂಕರ್ ಕಠಾರಿಯಾ ಅವರು 2017-20ರ ಅವಧಿಯಲ್ಲಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದರು. 2014-16ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.





