- ಯತ್ನಾಳ್ ಅಥವಾ ಇನ್ಯಾರೂ ಕೂಡ ಪಕ್ಷದ ವಿರುದ್ಧ ಮಾತನಾಡಬಾರದು
- ರೇಣುಕಾಚಾರ್ಯ ಪಕ್ಷದ ವಿರುದ್ಧ ಮಾತನಾಡುತ್ತಿರುವ ಕಾರಣ ಗೊತ್ತಿಲ್ಲ ಎಂದ ಸಂಸದ
‘ಎಂಟು ಸಂಸದರಿಗೆ ಟಿಕೆಟ್ ಇಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಆಕ್ರೋಶ ಹೊರಹಾಕಿರುವ ಸಂಸದ ಸಂಗಣ್ಣ ಕರಡಿ, “ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ; ಪಕ್ಷ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸಾಕಷ್ಟು ಸಮಯವಿದ್ದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಂಟು ಜನ ಸಂಸದರಿಗೆ ಟಿಕೆಟ್ ಇಲ್ಲವೆಂದು ಹೇಳುತ್ತಿದ್ದಾರೆ. ಅವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಆಗ್ರಹಿಸಿದರು.

‘ಯತ್ನಾಳ್ ಅಥವಾ ಇನ್ಯಾರೂ ಕೂಡ ಪಕ್ಷದ ವಿರುದ್ಧ ಮಾತನಾಡಬಾರದು. ಲೋಕಸಭಾ ಚುನಾವಣೆಯ ಟಿಕೆಟ್ ವಿಷಯವಾಗಿ ಯಾವುದೇ ಚರ್ಚೆ ನಡೆದಿಲ್ಲ. ಆದರೂ ಊಹಾಪೋಹ ಹರಿದಾಡುತ್ತಿದೆ. ಪಕ್ಷ ವಿರೋಧಿಯಾಗಿ ಮಾತನಾಡುವವರ ಬಗ್ಗೆ ಹೈಕಮಾಂಡ್ ನಿಗಾ ವಹಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಧಾನಿ ಪಕ್ಷದ ಸಾಧನೆ ಎಂದಿರುವುದು ವಿಷಾದನೀಯ : ಸಿದ್ದರಾಮಯ್ಯ
ಬಿ.ಎಲ್.ಸಂತೋಷ್ ಕರೆದಿದ್ದ ಸಭೆಗೆ ಪಕ್ಷದ ಪ್ರಮುಖ ನಾಯಕರು ಗೈರಾಗಿದ್ದರು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಸದ ಸಂಗಣ್ಣ ಕರಡಿ, “ಅಂದು ಬೇರೆ ಕೆಲಸದ ನಿಮಿತ್ತ ನಮ್ಮ ಎಲ್ಲ ನಾಯಕರು ಸಭೆಯಲ್ಲಿ ಭಾಗಿಯಾಗಿಲ್ಲ. ಹಾಗಂದ ಮಾತ್ರಕ್ಕೆ ಅವರನ್ನು ದೂರವಿಟ್ಟಿದ್ದಾರೆ ಎಂದಲ್ಲ. ಎಲ್ಲರ ಅಭಿಪ್ರಾಯವನ್ನೇ ಪಡೆದುಕೊಂಡೇ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದಷ್ಟು ಬೇಗನೆ ಹೊಸ ರಾಜ್ಯಾಧ್ಯಕ್ಷರ ಮತ್ತು ವಿಪಕ್ಷದ ನಾಯಕನ ಆಯ್ಕೆ ನಡೆಯಲಿದೆ” ಎಂದು ತಿಳಿಸಿದರು.
‘ಮಾಜಿ ಶಾಸಕ ರೇಣುಕಾಚಾರ್ಯ ಪಕ್ಷದ ವಿರುದ್ಧವಾಗಿ ಯಾವ ಕಾರಣಕ್ಕಾಗಿ ಮಾತನಾಡುತ್ತಿದ್ದಾರೆ ಎನ್ನುವುದು ನನಗಂತೂ ತಿಳಿದಿಲ್ಲ. ಈ ವಿಷಯವನ್ನು ನೀವು ಅವರಿಗೆ ಕೇಳಬೇಕು. ಏನೇ ಸಮಸ್ಯೆಯಿದ್ದರೂ ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿಯೇ ಮಾತನಾಡಬೇಕು’ ಎಂದು ಸಂಸದ ಸಂಗಣ್ಣ ಕರಡಿ ಬಿಜೆಪಿ ಮುಖಂಡರಿಗೇ ಸಲಹೆ ನೀಡಿದ್ದಾರೆ.





