ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರೈಫಲ್ ಹಿಡಿದು ಮುಸ್ಲಿಮರ ಮೇಲೆ ತೀರ ಹತ್ತಿರದಿಂದ (ಪಾಯಿಂಟ್ ಬ್ಲಾಂಕ್) ಗುಂಡು ಹಾರಿಸುತ್ತಿರುವಂತೆ ಚಿತ್ರಿಸಿರುವ AI ವಿಡಿಯೋವನ್ನು ಅಸ್ಸಾಂ ಬಿಜೆಪಿ ಹಂಚಿಕೊಂಡಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಅಸ್ಸಾಂ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ‘ಪಾಯಿಂಟ್ ಬ್ಲಾಂಕ್ ಶೂಟ್’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿತ್ತು. ಈಗ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಅದರಲ್ಲಿ; ಮುಖ್ಯಮಂತ್ರಿ ಶರ್ಮಾ ಅವರು ಗುಂಡು ಹಾರಿಸುತ್ತಿರುವ ನೈಜ ದೃಶ್ಯಗಳೊಂದಿಗೆ, ಮುಸ್ಲಿಮರನ್ನು ಪ್ರತಿನಿಧಿಸುವ ಗಡ್ಡಧಾರಿ ಮತ್ತು ಟೋಪಿ ಧರಿಸಿದ ವ್ಯಕ್ತಿಗಳ AI ಸೃಜಿತ ಚಿತ್ರಗಳನ್ನು ಸೇರಿಸಲಾಗಿತ್ತು. ಜೊತೆಗೆ, ‘ವಿದೇಶಿ ಮುಕ್ತ ಅಸ್ಸಾಂ’, ‘ಯಾವುದೇ ದಯೆ ಇಲ್ಲ’ ಹಾಗೂ ‘ಬಾಂಗ್ಲಾದೇಶಿಗಳಿಗೆ ಕ್ಷಮೆಯಿಲ್ಲ’ ಎಂಬ ಬರಹಗಳನ್ನು ಬಳಸಲಾಗಿದೆ.
ವಿಡಿಯೋ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಟಿಎಂಸಿ ಸಂಸದೆ ಸಾಗರಿಕಾ ಘೋಷ್, “ಇದು ಲಜ್ಜೆಗೆಟ್ಟ ಕೃತ್ಯ. ಈ ಅಪರಾಧವು ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದೆ. ಬಿಜೆಪಿ ವಿರುದ್ಧ UAPA ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು” ಆಗ್ರಹಿಸಿದ್ದಾರೆ.
“ಅಸ್ಸಾಂ ಬಿಜೆಪಿ ಕೃತ್ಯವು ಯುಎಪಿಎ ಅಡಿಯಲ್ಲಿ ಅಪರಾಧವಾಗಿದೆ. ಹಿಂಸಾಚಾರಕ್ಕೆ ಸ್ಪಷ್ಟ ಪ್ರಚೋದನೆ ನೀಡಿದೆ. ಕೇವಲ ವಿಡಿಯೋವನ್ನು ಅಳಿಸುವುದರಿಂದ ತನ್ನ ಕೃತ್ಯದಿಂಧ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಬಿಎನ್ಎಸ್ ಸೆಕ್ಷನ್ 152, 156 ಮತ್ತು 192 ಅಡಿಯಲ್ಲಿಯೂ ಅಪರಾಧವಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
Shameful. Whoever has made this ad 👇🏽 needs to be IMMEDIATELY arrested . You need to act @narendramodi @AmitShah @AshwiniVaishnaw https://t.co/VX5Axd1wKe
— Sagarika Ghose (@sagarikaghose) February 7, 2026
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, “ಬಿಜಪಿಯ ಅಧಿಕೃತ ಹ್ಯಾಂಡಲ್ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ‘ಪಾಯಿಂಟ್ ಬ್ಲಾಂಕ್’ ಹತ್ಯೆ ಮಾಡುವುದನ್ನು ತೋರಿಸುವ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದು ಜನಾಂಗೀಯ ಹತ್ಯೆಗೆ ನೀಡಿದ ಕರೆಗಿಂತ ಕಡಿಮೆಯೇನಲ್ಲ. ಈ ಫ್ಯಾಸಿಸ್ಟ್ ಆಡಳಿತವು ದಶಕಗಳಿಂದ ಹೊಂದಿರುವ ಕನಸು ಇದು,” ಎಂದು ಆರೋಪಿಸಿದ್ದಾರೆ.
“ಇದು ಕೇವಲ ಟ್ರೋಲ್ ಕಂಟೆಂಟ್ ಎಂದು ನಿರ್ಲಕ್ಷಿಸುವಂತಹ ಸಾಮಾನ್ಯ ವಿಡಿಯೋ ಅಲ್ಲ, ಬದಲಾಗಿ ಉನ್ನತ ಮಟ್ಟದಿಂದ ಹರಡುತ್ತಿರುವ ವಿಷವಾಗಿದೆ. ನರೇಂದ್ರ ಮೋದಿ ಇದನ್ನು ಖಂಡಿಸುತ್ತಾರೆ ಅಥವಾ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇಲ್ಲ, ಆದರೆ ನ್ಯಾಯಾಂಗವು ಮಧ್ಯಪ್ರವೇಶಿಸಬೇಕು.ಈ ಪ್ರಕರಣದಲ್ಲಿ ಯಾವುದೇ ಮೃದು ಧೋರಣೆ ತೋರಬಾರದು” ಎಂದು ವೇಣುಗೋಪಾಲ್ ಹೇಳಿದ್ದಾರೆ.
ಬಿಜಪಿಯನ್ನು ‘ಸಮೂಹ ಹಂತಕರು’ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಟ್, “ವಿಡಿಯೋವನ್ನು ಕೇವಲ ಡಿಲೀಟ್ ಮಾಡುವುದು ಸಾಕಾಗುವುದಿಲ್ಲ. ಬಿಜೆಪಿಯ ಅಸಲಿ ಮುಖ ಇದು; ಇವರು ಸಮೂಹ ಹಂತಕರು. ಈ ವಿಷ, ದ್ವೇಷ ಮತ್ತು ಹಿಂಸಾಚಾರದ ಹೊಣೆ ನಿಮ್ಮದಾಗಿದೆ ಮೋದಿ ಅವರೇ. ನ್ಯಾಯಾಲಯಗಳು ಮತ್ತು ಇತರ ಸಂಸ್ಥೆಗಳು ನಿದ್ರಿಸುತ್ತಿವೆಯೇ” ಎಂದು ಪ್ರಶ್ನಿಸಿದ್ದಾರೆ.
ಪತ್ರಕರ್ತೆ ರಾಣಾ ಅಯ್ಯೂಬ್ ಅವರು ಈ ವಿಡಿಯೋ ಬಿಜೆಪಿಯ ಉನ್ನತ ನಾಯಕರ ನೈತಿಕ ಅಧಃಪತನವನ್ನು ತೋರಿಸುತ್ತದೆ ಎಂದಿದ್ದಾರೆ. “ಇದನ್ನು ಪ್ರಚಾರ ಮಾಡಲು ಇಷ್ಟವಿಲ್ಲದಿದ್ದರೂ, ಇದು ಉನ್ನತ ಮಟ್ಟದ ವಿಕೃತಿಯನ್ನು ಬಹಿರಂಗಪಡಿಸುತ್ತದೆ. ಪ್ರಧಾನಿ ಮೋದಿ ಮುಸ್ಲಿಂ ಬಹುಸಂಖ್ಯಾತ ಮಲೇಷ್ಯಾದಲ್ಲಿ ಭವ್ಯ ಸ್ವಾಗತದ ಬಗ್ಗೆ ಮಾತನಾಡುತ್ತಿದ್ದರೆ, ಬಿಜೆಪಿಯ ಟ್ವಿಟರ್ ಹ್ಯಾಂಡಲ್ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ಮೇಲೆ ಗುಂಡು ಹಾರಿಸುವ ಮೀಮ್ (meme) ಹಂಚಿಕೊಳ್ಳುತ್ತಿದೆ” ಎಂದು ಕಿಡಿಕಾರಿದ್ದಾರೆ.





