ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು. ಹೆಚ್ಚು ಸ್ಥಾನಗಳನ್ನು ಗೆದ್ದು, ಸಂವಿಧಾನದಲ್ಲಿ ಕಾಂಗ್ರೆಸ್ ಹೇರಿರುವ ವಿಚಾರಗಳನ್ನು ತೆಗೆದು ಹಾಕಬೇಕು ಎಂದು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷ್ಯ ಆಗಿರುವ ಸಂಸದ ಹೆಗಡೆ, ಪದೇ-ಪದೇ ನಾಲಿಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದರು. ಇದೀಗ, ಮತ್ತೆ ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ. ಹಲವು ಅಂಶಗಳನ್ನು ಕಿತ್ತಾಕುತ್ತೇವೆ ಎಂದು ಮಾತನಾಡುತ್ತಿದ್ದಾರೆ.
ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ ಮಾತನಾಡಿದ ಅನಂತ ಹೆಗಡೆ, “ಸಂವಿಧಾನ ತಿದ್ದುಪಡಿಗೆ ಬಹುಮತ ಅಗತ್ಯ. ಲೋಕಸಭೆಯಲ್ಲಿ ಪೂರ್ಣ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ 2/3 ರಷ್ಟು ಬಹುಮತವಿಲ್ಲ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಬೇಕು” ಎಂದಿದ್ದಾರೆ.
“ಸಂವಿಧಾನದಲ್ಲಿ ಬೇಡದೇ ಇರುವ ಅಂಶಗಳನ್ನು ಕಾಂಗ್ರೆಸ್ ಸೇರಿಸಿದೆ. ಇಡೀ ಹಿಂದು ಸಮಾಜವನ್ನು ದಮನಿಸುವ ರೀತಿ ಕಾನೂನು ಮಾಡಲಾಗಿದೆ. ಅದೆಲ್ಲವನ್ನೂ ಬದಲಿಸಬೇಕು” ಎಂದು ಸನಾತನಿ ಮತ್ತು ಮನುವಾದವನ್ನು ತುಂಬಬೇಕೆನ್ನುವ ಮಾತನಾಡಿದ್ದಾರೆ.




