ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 20 ವರ್ಷಗಳ ಆಡಳಿತಕ್ಕೆ ಅವರ ಮಿತ್ರ ಪಕ್ಷ ಬಿಜೆಪಿಯೇ ಅಂತ್ಯ ಹಾಡಿದೆ. ನಿತೀಶ್ರನ್ನು ರಾಜ್ಯಸಭೆಗೆ ದಬ್ಬಲು ಬಿಜೆಪಿ ಸಿದ್ದವಾಗಿದೆ. ನಿತೀಶ್ ರಾಜ್ಯಸಭೆಗೆ ತೆರಳಿದರೆ, ಬಿಹಾರ ಆಡಳಿತ-ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೆಣೆದಿದೆ.
ಗುರುವಾರ (ಮಾರ್ಚ್ 5), ನಿತೀಶ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬಿಹಾರ ರಾಜಧಾನಿ ಪಟ್ನಾಕ್ಕೆ ಬಂದಿದ್ದಾರೆ. ಅಮಿತ್ ಶಾ ಮತ್ತು ನಿತೀಶ್ ನಡುವೆ ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ. ವಿಧಾನಸಭೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ಬಿಜೆಪಿ, ನಿತೀಶ್ ಅವರ ನಿರ್ಗಮನದ ನಂತರ, ತನ್ನದೇ ಮುಖ್ಯಮಂತ್ರಿಯನ್ನು ನೇಮಿಸುವುದು ಬಹುತೇಕ ಖಚಿತವಾಗಿದೆ. ಇದು ಬಿಜೆಪಿಗೆ ಬಿಹಾರದಲ್ಲಿ ಸಂಪೂರ್ಣ ಅಧಿಕಾರದ ನಿಯಂತ್ರಣ ಸಾಧಿಸುವ ಅವಕಾಶ ನೀಡಬಹುದು ಎಂಬ ಮಾತುಗಳೂ ಇವೆ.
ಅಂದಹಾಗೆ, ಬಿಹಾರ ಚುನಾವಣೆಯ ಸಮಯದಲ್ಲೇ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ರಿಂದ ಕಸಿದುಕೊಳ್ಳಲು ಹಣಿಸಿತ್ತು. ಅದಕ್ಕಾಗಿ, ಚುನಾವಣೆಯ ಉದ್ದಕ್ಕೂ ಎಲ್ಲಿಯೂ ಮೋದಿ-ಶಾ ಆದಿಯಾಗಿ ಬಿಜೆಪಿಯ ಯಾರೊಬ್ಬರೂ ನಿತೀಶ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೇಳಿರಲಿಲ್ಲ. ಮಹಾರಾಷ್ಟ್ರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಏಕನಾಥ್ ಶಿಂಧೆ ಅವರಿಂದ ಮುಖ್ಯಮಂತ್ರಿ ಗಾಧಿ ಕಸಿದುಕೊಂಡಂತೆ ಬಿಹಾರದಲ್ಲಿಯೂ ಮಾಡಬೇಕೆಂದು ಬಿಜೆಪಿ ಭಯಸಿತ್ತು.
ಅದರಂತೆ, ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಕಡಿಮೆ ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡುವುದು, ಆ ಮೂಲಕ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ ಅವರಿಂದ ಕಸಿದುಕೊಂಡು, ಬಿಜೆಪಿಯಿಂದ ಹುದ್ದೆಗೆ ಯಾರನ್ನಾದರೂ ಪ್ರತಿಷ್ಠಾಪಿಸುವುದು ಬಿಜೆಪಿಯ ತಂತ್ರವಾಗಿತ್ತು. ಅಂತೆಯೇ, ಬಿಜೆಪಿಯೇ 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೂ, ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಕಸಿದುಕೊಳ್ಳುವ ತಂತ್ರ ನಿತೀಶ್ ಎದುರು ಫಲಿಸಿಲ್ಲ. ಅಂತಿಮವಾಗಿ, ನಿತೀಶ್ ಅವರಿಗೇ ಹುದ್ದೆಯನ್ನು ಬಿಟ್ಟುಕೊಟ್ಟಿತ್ತು.
ಆದರೂ, ತನ್ನ ತಂತ್ರವನ್ನು ನಿಲ್ಲಿಸದ ಬಿಜೆಪಿ, ಈಗ ಹೊಸ ತಂತ್ರದೊಂದಿಗೆ ಬಿಹಾರ ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ರಿಂದ ಕಿತ್ತುಕೊಳ್ಳುತ್ತಿದೆ. ನಿತೀಶ್ರನ್ನು ರಾಜ್ಯಸಭೆಗೆ ದೂಡುತ್ತಿದೆ. ನಿತೀಶ್ ರಾಜ್ಯಸಭೆಗೆ ಹೋದರೆ, ಬಿಹಾರದಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣ ತನ್ನ ತೆಕ್ಕೆಗೆ ಸಿಗುತ್ತದೆ ಎಂಬುದು ಬಿಜೆಪಿ ಒಳಸಂಚು.
ನಿತೀಶ್ರನ್ನು ರಾಜ್ಯಸಭೆಗೆ ನೂಕಲು ಅವರ ಆರೋಗ್ಯ ಪರಿಸ್ಥಿತಿಯನ್ನು ಬಿಜೆಪಿ ದಾಳವಾಗಿ ಬಳಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿತೀಶ್ ಅವರ ವರ್ತನೆಗಳು ಮುಜುಗರಕ್ಕೀಡು ಮಾಡುವ ರೀತಿಯಲ್ಲಿದ್ದವು. ಅವರು ವಯೋಸಹಜ ಮರೆಗುಳಿತನಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ, ಅವರು ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಲಾರರು, ಅವರು ಸಂಸತ್ತಿಗೆ ತೆರಳಿದರೆ, ಅವರಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಎಂಬ ನಿರೂಪಣೆಯನ್ನು ಹಣೆಯಲಾಗಿತ್ತು.
ಜೊತೆಗೆ, ದಶಕಗಳಿಂದ ಬಿಹಾರದ ರಾಜಕೀಯದಲ್ಲಿ ಪ್ರಭಾವ ಬೀರಿರುವ ಮೂವರು – ನಿತೀಶ್ ಕುಮಾರ್, ಲಾಲು ಪ್ರಸಾದ್ ಹಾಗೂ ದಿ. ಸುಶೀಲ್ ಮೋದಿ – ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಒಟ್ಟಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ದಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಶರದ್ ಯಾದವ್ ಕೂಡ ಹಾಗೆಯೇ ಇದ್ದರು. ಈ ಐವರಲ್ಲಿ, ನಿತೀಶ್ ಕುಮಾರ್ ಅವರನ್ನು ಹೊರತುಪಡಿಸಿ, ಉಳಿದ ನಾಲ್ವರೂ ರಾಜ್ಯಸಭೆಯನ್ನು ಪ್ರವೇಶಿಸಿದ್ದರು. ನಿತೀಶ್, ವಿಧಾನಸಭೆ, ವಿಧಾನ ಪರಿಷತ್ತು ಹಾಗೂ ಲೋಕಸಭೆಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆದರೆ, ಎಂದಿಗೂ ರಾಜ್ಯಸಭೆಯಲ್ಲಿ ಇರಲಿಲ್ಲ. ಆದ್ದರಿಂದ, ಅವರೂ ರಾಜ್ಯಸಭೆಯನ್ನು ಪ್ರವೇಶಿಸಲಿ ಎಂಬ ಮತ್ತೊಂದು ದಾಳವನ್ನೂ ಉರುಳಿಸಲಾಗಿದೆ.
ಈ ಲೇಖನ ಓದಿದ್ದೀರಾ? ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…
ನಿತೀಶ್ ಅವರು ರಾಜ್ಯಸಭೆ ಪ್ರವೇಶಿಸುವ ಮೂಲಕ, ಬಿಹಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಅವರಿಂದ ತೆರವಾಗುವ ಹುದ್ದೆಗೆ ಬಿಜೆಪಿ ತನ್ನ ನಾಯಕರನ್ನು ಪ್ರತಿಷ್ಠಾಪಿಸಲು ಸಜ್ಜಾಗಿದೆ.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವ ನಿತ್ಯಾನಂದ ರೈ, ಬಿಹಾರ ಸಚಿವ ದಿಲೀಪ್ ಜೈಸ್ವಾಲ್, ವಿಜಯ್ ಕುಮಾರ್ ಸಿನ್ಹಾ ಹಾಗೂ ಸಂಜೀವ್ ಚೌರಾಸಿಯಾ ಮುಂತಾದ ಹೆಸರುಗಳು ಚರ್ಚೆಯಲ್ಲಿವೆ. ಗೃಹ ಖಾತೆಯನ್ನು ಹೊಂದಿರುವ ಚೌಧರಿ, ಬಿಹಾರದ ಅತ್ಯಂತ ಪ್ರಭಾವಿ ಬಿಜೆಪಿ ನಾಯಕರಲ್ಲಿ ಒಬ್ಬರು ಮತ್ತು ಸರ್ಕಾರದಲ್ಲಿ ನಂಬರ್ 2 ಆಗಿದ್ದಾರೆ. ನಿತ್ಯಾನಂದ ರೈ ಕೇಂದ್ರ ಸರ್ಕಾರದಲ್ಲಿ ಕಿರಿಯ ಗೃಹ ಸಚಿವರಾಗಿದ್ದಾರೆ. ಅವರು ಬಿಹಾರ ಬಿಜೆಪಿಯ ಮಾಜಿ ಮುಖ್ಯಸ್ಥರೂ ಆಗಿದ್ದಾರೆ. ಇನ್ನು, ಜೈಸ್ವಾಲ್ ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ, ಬಿಹಾರ ಬಿಜೆಪಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಆದಾಗ್ಯೂ, ಬಿಜೆಪಿ ಅಚ್ಚರಿನ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.
ನಿತೀಶ್ ಅವರು ರಾಜ್ಯಸಭೆಗೆ ತೆರಳಿದ ಬಳಿಕ, ಬಿಹಾರ ಸರ್ಕಾರದಲ್ಲಿ ಜೆಡಿಯು ಪಾತ್ರದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೇ ಸಮಯದಲ್ಲಿ, ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲಾಗುತ್ತಿದೆ. ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಚರ್ಚೆಗಳು ನಡೆಯುತ್ತಿವೆ.
ನಿತೀಶ್ರನ್ನು ರಾಜ್ಯ ರಾಜಕೀಯದಿಂದ ಹೊರಹಾಕಿ, ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಳ್ಳುವ ಬಿಜೆಪಿಯ ತಂತ್ರವನ್ನು ವಿಪಕ್ಷಗಳು ‘ಭೀಕರ ಸಂಚು’ ಎಂದು ಕರೆದಿವೆ.
ಈ ಬದಲಾವಣೆಯಿಂದ ಬಿಹಾರದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತದೆ. ಹಿಂದಿ ಹೃದಯಭೂಮಿಯಲ್ಲಿ ಮುಖ್ಯಮಂತ್ರಿ ಹುದ್ದೆ ಸಿಗುವುದು ರಾಜಕೀಯವಾಗಿ ಬಿಜೆಪಿಗೆ ಮತ್ತೊಂದು ಮೈಲಿಗಲ್ಲಾಗಲಿದೆ. ಆದರೆ, ನಿತೀಶ್ ಇಲ್ಲದೆ ಜೆಡಿಯು ಭವಿಷ್ಯ ಸವಾಲಿನ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.




