ಬಿಎಸ್ವೈ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಾಯಿಗೆ ಬಂದಂತೆ ಬೈದರೂ ಕೂಡಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಗೂ ಬಿಜೆಪಿಯಲ್ಲಿದ್ದಾರೆ. ಬಿ.ಎಲ್. ಸಂತೋಷ್ ಕೃಪಾಕಟಾಕ್ಷವಿರುವುದರಿಂದಲೇ ಯತ್ನಾಳ್ರಿಗೆ ಹೈಕಮಾಂಡಿನಿಂದ ಯಾವ ಶಿಸ್ತು ಕ್ರಮವಾಗಲಿ, ನೋಟಿಸ್ ಆಗಲಿ ಜಾರಿಯಾಗುತ್ತಿಲ್ಲ. ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ಟಿದ ಸಂಘಿ ಸಂತೋಷ್ ತಮಾಷೆ ನೋಡುತ್ತಿದ್ದಾರೆ. ಬಿಜೆಪಿ ಮಾನ ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ.
ಕರ್ನಾಟಕ ಬಿಜೆಪಿಯ ಭಿನ್ನಮತ ದಿನಕಳೆದಂತೆ ಇನ್ನಷ್ಟು ಜಟಿಲವಾಗುತ್ತಿದೆ. ಇತ್ತ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ; ಅತ್ತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಇಲ್ಲಿ ನಡೆಯುತ್ತಿರುವುದು ಯತ್ನಾಳ್ ಮತ್ತು ಬಿಎಸ್ವೈ ನಡುವಿನ ವಾಕ್ಸಮರ ಮಾತ್ರವಲ್ಲ, ಬಿಜೆಪಿಯ ಸಂಘಟನಾತ್ಮಕ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಬಿ ಎಲ್ ಸಂತೋಷ್- ಬಿವೈಎಸ್ ನಡುವಿನ ಶೀತಲ ಸಮರ ಕೂಡಾ ಹೌದು.
ಬಿಜೆಪಿಯಲ್ಲಿ ಹೈಕಮಾಂಡ್ ಅಂತಿಮವೇನಲ್ಲ. ಆರ್ಎಸ್ಎಸ್ನ ಹದ್ದಿನ ಕಣ್ಣು ಎಂದಿಗೂ ಬಿಜೆಪಿಯ ಮೇಲಿರುತ್ತದೆ. ಶಾಲಾ ಕಾಲೇಜು, ಪೊಲೀಸ್ ಇಲಾಖೆ, ಸರ್ಕಾರಿ ಕಚೇರಿಗಳು, ಮಾಧ್ಯಮ, ಇತರೆ ಸಂಸ್ಥೆಗಳು- ಹೀಗೆ ಎಲ್ಲಾ ಕಡೆಯೂ ಆರ್ಎಸ್ಎಸ್ ತನ್ನ ಸಿಂಪಥೈಸರ್ಸ್ ಇರುವಂತೆ ನೋಡಿಕೊಳ್ಳುತ್ತದೆ. ಅದೇ ರೀತಿ ಬಿಜೆಪಿಯಲ್ಲಿಯೂ ಸಂಘಟನಾತ್ಮಕ ಕಾರ್ಯದರ್ಶಿಯಂತಹ ಹುದ್ದೆಗಳನ್ನು ಆರ್ಎಸ್ಎಸ್ ಗರಡಿಯಲ್ಲಿ ಪಳಗಿದವರಿಗೆ ನೀಡಲಾಗುತ್ತದೆ. ಇದೇ ಕಾರಣದಿಂದಾಗಿ ಬಿ ಎಲ್ ಸಂತೋಷ್ ಅವರಿಗೆ ಅಂದು ಬಿಜೆಪಿ ಕರ್ನಾಟಕ ಸಂಘಟನಾತ್ಮಕ ಕಾರ್ಯದರ್ಶಿ ಹುದ್ದೆ, ಇಂದು ರಾಷ್ಟ್ರೀಯ ಸ್ಥಾನ ಲಭಿಸಿರುವುದು. ಬಿಜೆಪಿಯಲ್ಲಿ ಬಿ ಎಲ್ ಸಂತೋಷ್, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾಗಿಂತ ಮೇಲೆ ಅಂದರೆ ತಪ್ಪಾಗಲಾರದು.
ಈ ಹುದ್ದೆಯಲ್ಲಿ ಕೂತ ಬಿ.ಎಲ್. ಸಂತೋಷ್, ರಾಜ್ಯದಲ್ಲಿ ಬಿಎಸ್ವೈ ವಿರೋಧಿಗಳಾಗಿರುವವರನ್ನು ಕುಣಿಸುವ ಬೊಂಬೆಯಾಟದ ಸೂತ್ರದಾರಿಯಾಗಿದ್ದಾರೆ. ಅಷ್ಟಕ್ಕೂ ಬಿಎಸ್ವೈ- ಸಂತೋಷ್ ವೈಮನಸ್ಸು ನಿನ್ನೆ ಮೊನ್ನೆಯದಲ್ಲ. 2006ರಲ್ಲಿ ಯಡಿಯೂರಪ್ಪ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿ ಜೆಡಿಎಸ್-ಬಿಜೆಪಿ ಸರ್ಕಾರ ರಚಿಸಿದಾಗಲೇ ಶುರುವಾಗಿದೆ. ಈ ಮೈತ್ರಿಗೆ ಆರ್ಎಸ್ಎಸ್ ಒಪ್ಪಿಗೆ ಇರಲಿಲ್ಲ. ಆರ್ಎಸ್ಎಸ್ ನಾಯಕ ಬಿ ಎಲ್ ಸಂತೋಷ್ಗೂ ಒಪ್ಪಿಗೆ ಇರಲಿಲ್ಲ. ಇಲ್ಲಿಂದ ಆರಂಭವಾದ ಬಿಎಸ್ವೈ ಮತ್ತು ಸಂತೋಷ್ ನಡುವಿನ ತೆರೆಮರೆಯ ಸಮರ ಇಂದಿಗೂ ನಡೆಯುತ್ತಲೇ ಇದೆ.
ಇದನ್ನು ಓದಿದ್ದೀರಾ? ಬಿಎಲ್ ಸಂತೋಷ್ಗೆ ಕಡಿವಾಣ ಹಾಕದಿದ್ದರೆ ಬಿಜೆಪಿ ನಾಶ ಖಚಿತ: ಮಾಜಿ ತಾ.ಪಂ ಸದಸ್ಯ
2006ರಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ರಚಿಸಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು, ಬಿಎಸ್ವೈ ಉಪಮುಖ್ಯಮಂತ್ರಿಯಾದರು. ಆದರೆ ಒಪ್ಪಂದದಂತೆ ತನ್ನ ಸ್ಥಾನವನ್ನು ಬಿಟ್ಟುಕೊಡಲು ಎಚ್ಡಿಕೆ ಒಪ್ಪದೆ ‘ವಚನಭ್ರಷ್ಟ’ರೆನಿಸಿಕೊಂಡರು. ಈಗಾಗಲೇ ಈ ಮೈತ್ರಿಯಿಂದ ತೀವ್ರ ಅಸಮಾಧಾನವನ್ನು ಹೊಂದಿದ್ದ ಆರ್ಎಸ್ಎಸ್ ನಾಯಕರಿಗೆ ಯಡಿಯೂರಪ್ಪ ಅವರ ನಿರ್ಧಾರದಿಂದ ಬಿಜೆಪಿಗೆ ಆದ ದ್ರೋಹವು ಇನ್ನಷ್ಟು ಮನಸ್ತಾಪಕ್ಕೆ ಕಾರಣವಾಯಿತು. ಇದಾದ ಬಳಿಕ ಯಡಿಯೂರಪ್ಪರ ಭ್ರಷ್ಟಾಚಾರ, ಹಗರಣಗಳೆಲ್ಲವೂ ಒಂದೊಂದಾಗಿ ಬಯಲಾಯಿತು. ಯಡಿಯೂರಪ್ಪ ಜೈಲು ವಾಸವೂ ಅನುಭವಿಸಬೇಕಾಯಿತು.
ಜನತಾ ಪಕ್ಷದಲ್ಲಿದ್ದ (ಇಂದಿನ ಬಿಜೆಪಿ) ಕೆಎಸ್ ಹೆಗ್ಡೆಯವರ ಪುತ್ರ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು 2006ರಲ್ಲಿ ಲೋಕಾಯುಕ್ತರಾದರು. ಯಡಿಯೂರಪ್ಪ ಅವರ ಭ್ರಷ್ಟಾಚಾರವನ್ನು ಕೆದಕಿದರು. ಕೊನೆಗೆ 2011ರ ಅಕ್ಟೋಬರ್ನಲ್ಲಿ ಸರ್ಕಾರಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪದಲ್ಲಿ ಬಿಎಸ್ವೈ 25 ದಿನ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೂಡ ಅವರು ಆರೋಪ ಎದುರಿಸಿದ್ದರು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವೆಲ್ಲವುದರ ಹಿಂದೆ ಬಿಎಲ್ ಸಂತೋಷ್ ನಿಂತಿದ್ದಾರೆ ಎಂಬ ಆರೋಪವೂ ಇದೆ. ಇನ್ನು ಕರ್ನಾಟಕ ಬಿಜೆಪಿ ಅಂದಿನ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ದ ರಥಯಾತ್ರೆ ಮಾಡಿದಾಗ ಭ್ರಷ್ಟಾಚಾರಿ ಎನಿಸಿಕೊಂಡಿದ್ದ ಬಿಎಸ್ವೈಗೆ ವೇದಿಕೆಯಲ್ಲಿ ಸ್ಥಾನ ನೀಡಲಿಲ್ಲ ಎಂಬುದನ್ನು ಮರೆಯುವಂತಿಲ್ಲ.
ಇದನ್ನು ಓದಿದ್ದೀರಾ? ಬಿಜೆಪಿಯೊಳಗಿನ ಸರ್ವಾಧಿಕಾರಿ ಧೋರಣೆ ಕೊನೆಯಾಗಲಿ: ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಬಿಎಸ್ವೈ ರಾಜೀನಾಮೆ ನೀಡುವ ವೇಳೆ ಅವರ ಜೊತೆ ಶಾಸಕರ ದಂಡೇ ರಾಜಭವನಕ್ಕೆ ತೆರಳಿತ್ತು. ಇದು ಯಡಿಯೂರಪ್ಪ ಮಾಡಿದ ಶಕ್ತಿ ಪ್ರದರ್ಶನವಾಗಿತ್ತು. ಯಡಿಯೂರಪ್ಪರನ್ನು ಬಿ ಎಲ್ ಸಂತೋಷ್ ಮೂಲೆಗುಂಪು ಮಾಡಲು ಎಷ್ಟು ಪ್ರಯತ್ನಿಸಿದರೂ ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ವೈ ಹಿಡಿತ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲ.
ಇನ್ನು ಬಿಎಸ್ವೈ ರಾಜೀನಾಮೆ ನೀಡಿದ ಬಳಿಕ ತನಗೆ ಬೇಕಾದವರನ್ನೇ ಸಿಎಂ ಮಾಡಿದರು. ತಾನು ರಾಜೀನಾಮೆ ನೀಡಿದ ಬಳಿಕ ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಬಳಿಕ ಜಗದೀಶ್ ಶೆಟ್ಟರ್ ಸಿಎಂ ಆದರು. 2013ರಲ್ಲಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತು. ಆದರೆ ಕಾಂಗ್ರೆಸ್ ಎದುರು ಬಿಜೆಪಿ ಸೋತು ದೊಡ್ಡ ನಷ್ಟ ಅನುಭವಿಸಿತು. 1994ರ ಬಳಿಕ ಮೊದಲ ಬಾರಿಗೆ 2023ರಲ್ಲಿ ಬಿಜೆಪಿ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ಇಳಿಯಿತು.
2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾಯಿತು. ಈ ವೇಳೆ ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದರು. ಆರ್ಎಸ್ಎಸ್ನ ಬಿ ಎಲ್ ಸಂತೋಷ್ ಪ್ರಭಾವ ಎಷ್ಟೇ ಇದ್ದರೂ ಕೂಡಾ ಕರ್ನಾಟಕದಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಅಷ್ಟೊಂದು ಪ್ರಭಾವ ಯಡಿಯೂರಪ್ಪರಿಗೆ ಇದೆ ಎಂಬುದು ಬಿಜೆಪಿಗೆ ತಿಳಿದಿದೆ. ಇದೇ ಕಾರಣಕ್ಕೆ ಈಗ ಅವರ ಪುತ್ರನಿಗೆ ರಾಜ್ಯಾಧ್ಯಕ್ಷರ ಪಟ್ಟ ನೀಡಿರುವುದು ಮತ್ತು ಬಿಜೆಪಿ ತೊರೆದು ಕೆಜೆಪಿ ಕಟ್ಟಿದರೂ ಮತ್ತೆ ಪಕ್ಷಕ್ಕೆ ಕರೆಸಿಕೊಂಡಿರುವುದು.
ಆದರೆ ಬಿ ವೈ ವಿಜಯೇಂದ್ರ ನಾಯಕತ್ವವನ್ನು ಒಪ್ಪದ ಹಲವು ನಾಯಕರುಗಳಿದ್ದಾರೆ. ಈ ‘ಅತೃಪ್ತ ನಾಯಕರು’ ಪ್ರತ್ಯೇಕವಾಗಿ ಸಭೆ, ಕಾರ್ಯಕ್ರಮ, ಹೋರಾಟ ರೂಪಿಸುವ ಮಟ್ಟಿಗೆ ಬಿಜೆಪಿ ಒಡೆದುಹೋಗಿದೆ. ಆರಂಭದಿಂದಲೂ ಯಡಿಯೂರಪ್ಪ ಪರವಾಗಿಯೇ ನಿಂತಿದ್ದ ಶೋಭಾ ಕರಂದ್ಲಾಜೆಯೂ ಬಂಡಾಯ ಗುಂಪಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದೂ ಆಗಿದೆ. ಬಂಡಾಯ ನಾಯಕರುಗಳ ಸಂಖ್ಯೆ ವಿಸ್ತರಿಸುತ್ತಾ ಹೋದಂತೆ ಬಿಎಸ್ವೈ ಬಂಡಾಯ ಶಮನಗೊಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ನಿಂತಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ಬಿ.ಎಲ್. ಸಂತೋಷ್ ಅವರು ಕರ್ನಾಟಕ ಸಂಘಟನಾತ್ಮಕ ಕಾರ್ಯದರ್ಶಿ ಆಗಿರುವಾಗಲೇ ರಾಷ್ಟ್ರೀಯ ಸ್ಥಾನ ಪಡೆದವರು. ಆ ಬಳಿಕ ಕರ್ನಾಟಕ ಬಿಜೆಪಿ ಮೇಲೆ ತನ್ನ ಪ್ರಭಾವವನ್ನು ಇಟ್ಟುಕೊಂಡಿದ್ದಾರೆ. ಬಿಎಸ್ವೈ ವಿರುದ್ಧ ಬಿಜೆಪಿ ನಾಯಕರನ್ನು ಎತ್ತಿಕಟ್ಟುತ್ತಿದ್ದರೆ, ಅವರಿಗೆ ಶಕ್ತಿ ತುಂಬುತ್ತಿದ್ದಾರೆ, ಪಕ್ಷದಲ್ಲೇ ಉಳಿಸುತ್ತಿದ್ದಾರೆ. ಬಿಎಸ್ವೈ, ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಾಯಿಗೆ ಬಂದಂತೆ ಬೈದರೂ ಕೂಡಾ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಗೂ ಬಿಜೆಪಿಯಲ್ಲಿದ್ದಾರೆ. 2023ರಲ್ಲಿ ಟಿಕೆಟ್ ಪಡೆದು ಚುನಾವಣೆಯಲ್ಲಿಯೂ ಸ್ಪರ್ಧಿಸಿ ಗೆದ್ದಿದ್ದಾರೆ. ಬಿ.ಎಲ್. ಸಂತೋಷ್ ಕೃಪಾಕಟಾಕ್ಷವಿರುವುದರಿಂದಲೇ ಯತ್ನಾಳ್ರಿಗೆ ಹೈಕಮಾಂಡಿನಿಂದ ಯಾವ ಶಿಸ್ತು ಕ್ರಮವಾಗಲಿ, ನೋಟಿಸ್ ಆಗಲಿ ಜಾರಿಯಾಗುತ್ತಿಲ್ಲ. ಲಿಂಗಾಯತರ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ಟಿದ ಸಂಘಿ ಸಂತೋಷ್ ತಮಾಷೆ ನೋಡುತ್ತಿದ್ದಾರೆ. ಬಿಜೆಪಿ ಮಾನ ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




