ಇರಾನ್ ಮೇಲೆ ಯುದ್ಧದಾಹಿ ಅಮೆರಿಕ ಮತ್ತು ಅದರ ಬಾಲಂಗೋಚಿ ಇಸ್ರೇಲ್ ಯುದ್ಧ ಸಾರಿವೆ. ಇರಾನ್ನ ಸರ್ವೋಚ್ಛ ನಾಯಕ ಖಮೇನಿ ಅವರನ್ನು ಹತ್ಯೆಗೈದಿವೆ. ತೈಲ ಸಂಪತ್ತನ್ನು ಹೊಂದಿರುವ ಇರಾನ್ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿವೆ. ಅಮೆರಿಕ ಸರ್ವಾಧಿಕಾರದ ದಾಹಕ್ಕೆ ಮಧ್ಯಪ್ರಾಚ್ಯ ಯುದ್ಧಭೂಮಿಯಾಗಿ ಬದಲಾಗಿದೆ. ಆದರೂ, ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರ ಯುದ್ಧಕೋರ ಅಮೆರಿಕ-ಇಸ್ರೇಲ್ ಪರವಾದ ಧೋರಣೆಯನ್ನು ತಳೆದಿದೆ. ಇದೇ ಸಮಯದಲ್ಲಿ, ಬಿಜೆಪಿ ಸಂಸದರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪಕ್ಷದ ಧೋರಣೆಗಿಂತ ಭಿನ್ನವಾಗಿ ಮಾತನಾಡಿದ್ದಾರೆ. ಅಮೆರಿಕವನ್ನು ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, “ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ಯುದ್ಧ ಮತ್ತು ಇರಾನ್ ಪ್ರತಿದಾಳಿಯು ಆತಂಕವಾಗಿದೆ. ಇನ್ನಷ್ಟು ಅನಾಹುತ ಆಗುವ ಮೊದಲು ವಿಶ್ವದ ನಾಯಕರು ಯುದ್ಧ ನಿಲ್ಲಿಸಬೇಕು. ಮಧ್ಯಪ್ರಾಚ್ಯ ಇಡೀ ವಿಶ್ವದ ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರದೇಶ. ಮೊದಲು ಜರಸಲೇಮ್ಗಾಗಿ ಯುದ್ಧ ನಡೆದಿತ್ತು. ಈಗ ಪೆಟ್ರೋಲಿಯಂ, ಧಾರ್ಮಿಕ ವಿಚಾರಕ್ಕೆ ಯುದ್ಧ ನಡೆಯುತ್ತಿದೆ. ಅಮೆರಿಕ ತೈಲ ಉತ್ಪನ್ನಗಳ ಮೇಲೆ ಹಿಡಿತ ಸಾಧಿಸಲು ನೋಡುತ್ತಿದೆ. ಅಮೆರಿಕ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮೂರನೇ ವಿಶ್ವ ಯುದ್ದ ಆಗಲು ಚೀನಾ ಮತ್ತು ರಶ್ಯಾ ಇನ್ನೂ ಯುದ್ದಕ್ಕೆ ಇಳಿದಿಲ್ಲ. ಕಾದು ನೋಡುವ ತಂತ್ರ ಮಾಡುತ್ತಿವೆ. ಅವರೂ ಯುದ್ದಕ್ಕೆ ಇಳಿದರೆ ಬಹಳ ದೊಡ್ಡ ಅನಾಹುತ ಆಗಲಿದೆ. ಇದರಿಂದ, ಪರಿಣಾಮ ಬೀರಲಿದೆ. ಆಧುನಿಕ ಯುದ್ಧಗಳಲ್ಲಿ ಎಲ್ಲರೂ ಸೋಲುತ್ತಾರೆ; ವಿಶೇಷವಾಗಿ ಪರಮಾಣು ಸಾಮರ್ಥ್ಯದ ಹಿನ್ನೆಲೆಯಲ್ಲಿ ಮಾತುಕತೆ, ಚರ್ಚೆಗಳ ಮೂಲಕ ಪರಿಹರಿಸಬೇಕು” ಎಂದಿದ್ದಾರೆ.
ಬೊಮ್ಮಾಯಿ ಅವರ ಮಾತುಗಳು ಬಿಜೆಪಿಯ ಧೋರಣೆ-ನಿಲುವಿಗಿಂತ ಭಿನ್ನವಾಗಿವೆ. ಮಾತ್ರವಲ್ಲ, ಮಹತ್ವದ್ದೂ ಆಗಿವೆ. ಪ್ರಧಾನಿ ಮೋದಿ ಅವರು ಇಸ್ರೇಲ್ಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ಅನ್ನು ತಮ್ಮ ಪಿತೃ ರಾಷ್ಟ್ರವೆಂದು ಹೇಳಿಕೊಂಡಿದ್ದಾರೆ. ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ರಾಜತಾಂತ್ರಿಕ ಮಾತುಕತೆ ಅಗತ್ಯವೆಂದು ಹೇಳುತ್ತಿದ್ದರೂ, ಟ್ರಂಪ್ ಎದುರು ಶರಣಾಗಿರುವ ಮೋದಿ, ಇಸ್ರೇಲ್ಗೆ ಬೆಂಬಲ ಮುಂದುವರೆದಿದ್ದಾರೆ.
ಈ ಲೇಖನ ಓದಿದ್ದೀರಾ?: ಇರಾನ್ನ ಮಿತ್ರರು ಯಾರು? ರಷ್ಯಾ-ಚೀನಾ ನಿಲುವೇನು?
ಮಧ್ಯಪ್ರಾಚ್ಯದಲ್ಲಿ ಸಾವಿರಾರು ಕನ್ನಡಿಗರು ಸೇರಿದಂತೆ ಸುಮಾರು 1 ಕೋಟಿಗೂ ಹೆಚ್ಚು ಮಂದಿ ಭಾರತೀಯರು ನೆಲೆಸಿದ್ದಾರೆ. ಒಂದು ವೇಳೆ, ಯುದ್ಧವು ಭೀಕರತೆ ಪಡೆದುಕೊಂಡರೆ, ಅಲ್ಲಿರುವ ಭಾರತೀಯರು ಸೇರಿದಂತೆ ಮಧ್ಯಪ್ರಾಚ್ಯ ವಾಸಿಗಳ ಮಾರಣಹೋಮವೇ ನಡೆದುಹೋಗಲಿದೆ. ಇದರ ಅರಿವಿದ್ದರೂ, ಮೋದಿ ಸರ್ಕಾರವು ಯುದ್ಧಕೋರರ ಪರವಾಗಿ ನಿಂತಿದೆ.
ಇದೇ ಸಮಯದಲ್ಲಿ ಬಂದಿರುವ ಬೊಮ್ಮಾಯಿ ಅವರ ನಿಲುವು ಯುದ್ಧ ವಿರೋಧಿ ಮತ್ತು ಶಾಂತಿ-ಮಾತುಕತೆಯನ್ನು ಒತ್ತಾಯಿಸಿದೆ. ವೊಮ್ಮಾಯಿ ಮಾತುಗಳು ಭಾರತವು ಮೊದಲಿನಿಂದಲೂ ಪ್ರತಿಪಾದಿಸುತ್ತಿರುವ ‘ವಸುಧೈವ ಕುಟುಂಬಕಂ’ – ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಆದರ್ಶವನ್ನು ಮತ್ತೆ ಒತ್ತಿ ಹೇಳುತ್ತವೆ. ಅಂತರರಾಷ್ಟ್ರೀಯ ನಿಯಮಗಳು ಒತ್ತಡದಲ್ಲಿರುವ ಇಂತಹ ಸಮಯದಲ್ಲಿ, ಮೌನವಾಗಿರುವ ಮೋದಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡುತ್ತವೆ. ಬೊಮ್ಮಾಯಿ ಮಾತುಗಳು ಮೋದಿ ಸೇರಿದಂತೆ ಬಿಜೆಪಿಗರ ಕಿವಿಹೊಕ್ಕಬೇಕು. ಭಾರತವು ತನ್ನ ಯುದ್ಧವಿರೋಧಿ ನಿಲುವನ್ನು ಬಲವಾಗಿ ಪ್ರತಿವಾದಿಸುವಂತಾಗಬೇಕು.




