ಜುಲೈ 10ರಂದು ದೇಶದ ನಾನಾ ಭಾಗಗಳ 13 ಸ್ಥಾನಗಳಿಗೆ ನಡೆದಿದ್ದ ಉಪಚುನಾವಣೆ ಮತ ಎಣಿಕೆ ಶನಿವಾರ ನಡೆಯುತ್ತಿದೆ. ಈ ಪೈಕಿ, ಪಂಜಾಬ್ನ ಜಲಂಧರ್ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ಎಎಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, 10 ಸ್ಥಾನಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ ನೇತೃತ್ವದ ‘ಎನ್ಡಿಎ’ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
ಏಳು ರಾಜ್ಯಗಳ 13 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಅವುಗಳಲ್ಲಿ ಪಶ್ಚಿಮ ಬಂಗಾಳದ ನಾಲ್ಕು, ಹಿಮಾಚಲ ಪ್ರದೇಶದಲ್ಲಿ ಮೂರು, ಉತ್ತರಾಖಂಡದ ಎರಡು ಹಾಗೂ ಬಿಹಾರ, ಪಂಜಾಬ್, ಮಧ್ಯಪ್ರದೇಶ ಮತ್ತು ತಮಿಳುನಾಡಿನ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇಂದು ಫಲಿತಾಂಶ ಪ್ರಟಕವಾಗುತ್ತಿದೆ.
ಈಗಾಗಲೇ, ಪಂಜಾಬ್ನ ಜಲಂಧರ್ ಪಶ್ಚಿಮದಲ್ಲಿ ಎಎಪಿ ಅಭ್ಯರ್ಥಿ ಮೊಹಿಂದರ್ ಭಗತ್ 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಎಲ್ಲ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಹಿಮಾಚಲ ಪ್ರದೇಶದಲ್ಲಿ ಮೂರು ಕ್ಷೇತ್ರಗಳ ಪೈಕಿ ಡೆಹ್ರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರು ಮುನ್ನಡೆ ಸಾಧಿಸಿದ್ದಾರೆ. ನಲಗಢ ಕ್ಷೇತ್ರದಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಹಮೀರ್ಪುರದಲ್ಲಿ ಮಾತ್ರ ಬಿಜೆಪಿ ಮುಂದಿದೆ.
2023ರ ಅಕ್ಟೋಬರ್ನಲ್ಲಿ ಉತ್ತರಾಖಂಡದ ಬಿಎಸ್ಪಿ ಶಾಸಕ ಸರ್ವತ್ ಕರೀಂ ಅನ್ಸಾರಿ ನಿಧನದಿಂದಾಗಿ, ಮಂಗ್ಳೂರ್ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವೆ ಹಣಾಹಣಿ ಇದ್ದರೂ, ಕಾಂಗ್ರೆಸ್ ಮುನ್ನಡೆಯಲ್ಲಿದೆ. ಬಿಜೆಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಬದರಿನಾಥ ಕ್ಷೇತ್ರದಲ್ಲೂ ಬಿಜೆಪಿ ಹಿಂದುಳಿದಿದೆ.
ಬಿಹಾರದಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಶಾಸಕ ಬಿಮಾ ಭಾರತಿ ರಾಜೀನಾಮೆ ನೀಡಿ, ಆರ್ಜೆಡಿ ಸೇರಿದ್ದರಿಂದ ರುಪೌಲಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಕ್ಷೇತ್ರದಲ್ಲಿ ಸದ್ಯ ಜೆಡಿಯು ಮುನ್ನಡೆ ಸಾಧಿಸಿದೆ.
ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಎನ್ ಪುಗಜೆಂಧಿ ಅವರು ಏಪ್ರಿಲ್ 6 ರಂದು ನಿಧನರಾದ್ದರಿಂದ, ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದು, ಆಡಳಿತಾರೂಢ ಡಿಎಂಕೆ ಅಭ್ಯರ್ಥಿ ಅಣ್ಣಿಯೂರ್ ಶಿವ ಮುನ್ನಡೆಯಲ್ಲಿದ್ದಾರೆ.
ಮಧ್ಯಪ್ರದೇಶದಲ್ಲಿ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಕಮಲೇಶ್ ಶಾ ಅವರು ಮಾರ್ಚ್ನಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ, ಅಮರವಾರ ವಿಧಾನಸಭಾ ಕ್ಷೇತ್ರವು ತೆರವಾಗಿತ್ತು. ಎಸ್ಟಿ ಮೀಸಲು ಕ್ಷೇತ್ರವಾದ ಅಮರವಾರದಲ್ಲಿ ಬಿಜೆಪಿಯ ಕಮಲೇಶ್ ಷಾ, ಕಾಂಗ್ರೆಸ್ನ ಧೀರನ್ ಶಾ ಇನ್ವಾಟಿ ಹಗೂ ಗೊಂಡ್ವಾನಾ ಗಂಟಂತ್ರ ಪಾರ್ಟಿಯ (ಜಿಜಿಪಿ) ದೇವ್ರಮನ್ ಭಾಲವಿ ನಡುವೆ ಭಾರೀ ಹಣಾಹಣಿಯಿದೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿ ಇನ್ವಾಟಿ ಮುನ್ನಡೆ ಸಾಧಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದೆ. ಸದ್ಯ, ಚುನಾವಣೆ ನಡೆದಿರುವ ಏಳು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಆಳ್ವಿಕೆಯಲ್ಲಿವೆ. ಮೂರು ರಾಜ್ಯಗಳಲ್ಲಿ ‘ಎನ್ಡಿಎ’ ಅಧಿಕಾರದಲ್ಲಿದೆ. ಅದಾಗ್ಯೂ, ಹಿಮಾಚಲ ಪ್ರದೇಶ ಮತ್ತು ಬಿಹಾರದ ತಲಾ ಒಂದು ಸ್ಥಾನಗಳಲ್ಲಿ ಮಾತ್ರವೇ ಎನ್ಡಿಎ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಉಳಿದ 11 ಸ್ಥಾನಗಳಲ್ಲಿ ‘ಇಂಡಿಯಾ’ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.




