ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಕ್ತಾಯಗೊಂಡಿದೆ. ಇದೇ ಸಮಯದಲ್ಲಿ, ಬಿಜೆಪಿ ಮಾಜಿ ಸಂಸದೆ ನವನೀತ್ ರಾಣಾ ವಿರುದ್ಧ ಗಂಭೀರ ಆರೋಪವೂ ಕೇಳಿಬಂದಿದೆ. ಅಮರಾವತಿ ಪಾಲಿಕೆ ವ್ಯಾಪ್ತಿಯಲ್ಲಿ ಪಕ್ಷದ ವಿರುದ್ಧವೇ ರಾಣಾ ಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿಯ 22 ಅಭ್ಯರ್ಥಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಪತ್ರ ಬರೆದಿದ್ದಾರೆ. ನವನೀತ್ ರಾಣಾ ಅವರನ್ನು ಪಕ್ದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದ್ದಾರೆ.
ಪತ್ರ ಬರೆದಿರುವ 22 ಮಂದಿಯಲ್ಲಿ 20 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಇಬ್ಬರು ಮಾತ್ರವೇ ಗೆಲುವು ಸಾಧಿಸಿದ್ದಾರೆ. ಅವನೀತ್ ರಾಣಾ ಅವರು ಪಕ್ಷದ ವಿರುದ್ಧ ಪ್ರಚಾರ ಮಾಡಿದ್ದೇ, ಈ ಸೋಲಿಗೆ ಕಾರಣವೆಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮನ್ನು ಡಮ್ಮಿ ಅಭ್ಯರ್ಥಿಗಳೆಂದೂ, ಅವರ ಪತಿ ರವಿ ರಾಣಾ ಅವರ ‘ಯುವ ಸ್ವಾಭಿಮಾನ್ ಪಕ್ಷ’ದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಬಿಜೆಪಿಯ ನೈಜ ಅಭ್ಯರ್ಥಿಗಳೆಂದೂ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.
ನವನೀತ್ ರಾಣಾ ಅವರ ಪತಿ ರವಿ ರಾಣಾ ಅವರು ಯುವ ಸ್ವಾಭಿಮಾನ್ ಪಕ್ಷವನ್ನು ಕಟ್ಟಿದ್ದರೂ, ನವನೀತ್ ರಾಣಾ ಅವರು ಬಿಜೆಪಿಯಲ್ಲಿಯೇ ಇದ್ದಾರೆ. ಈ ಹಿಂದೆ, ಬಿಜೆಪಿ ಮತ್ತು ಯುವ ಸ್ವಾಭಿಮಾನ್ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಸ್ಥಳೀಯ ಚುನಾವಣೆಗೂ ಮುನ್ನ ಮೈತ್ರಿ ಮುರಿದುಬಿದ್ದಿತ್ತು. ಬಿಜೆಪಿಯಲ್ಲೇ ಇದ್ದ ನವನೀತ್ ರಾಣಾ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಗಳಿಂದ ಅಸಮಾಧಾನ ವ್ಯಕ್ತವಾಗಿದೆ.
85 ಸದಸ್ಯ ಬಲವಿರುವ ಅಮರಾವತಿ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್ ಹಾಗೂ ಯುವ ಸ್ವಾಭಿಮಾನ್ ಪಕ್ಷಗಳು ತಲಾ 15, ಎಐಎಂಐಎಂ 12, ಎನ್ಸಿಪಿ 11, ಶಿಂಧೆ ಶಿವಸೇನೆ ಮತ್ತು ಬಿಎಸ್ಪಿ ತಲಾ 3, ಶಿವಸೇನೆ (ಯುಬಿಟಿ) 2 ಹಾಗೂ ವಂಚಿತ್ ಬಹುಜನ್ ಅಘಾಡಿ ಪಕ್ಷ 1 ಸ್ಥಾನದಲ್ಲಿ ಗೆಲುವು ಸಾಧಿಸಿವೆ.




