ಸದ್ಯ ದೇಶದ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ನಡೆಯುತ್ತಿದ್ದು, ಹಲವು ಎಡವಟ್ಟುಗಳು ನಡೆದಿವೆ. ಭಾರತೀಯ ಚುನಾವಣಾ ಆಯೋಗವು (ECI) ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆಯೇ ವಿಚಾರಣೆಗೆ ನೋಟಿಸ್ ನೀಡಿದೆ. ಆಯೋಗದ ಈ ಕ್ರಮವನ್ನು ದೇಶದ ಪ್ರಸಿದ್ಧ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ತಮ್ಮ ಕಾರ್ಟೂನ್ ಮೂಲಕ ಟೀಕಿಸಿದ್ದಾರೆ.
ಪ್ರಸ್ತುತ 92 ವರ್ಷದ ಅಮರ್ತ್ಯ ಸೇನ್ ಅವರು ವಿದೇಶದಲ್ಲಿದ್ದು ಅವರ ಕುಟುಂಬಸ್ಥರು ನೋಟಿಸ್ ಸ್ವೀಕರಿಸಿದ್ದಾರೆ. ಈ ಕ್ರಮವನ್ನು ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರುಗಳು ತೀವ್ರವಾಗಿ ಖಂಡಿಸಿದ್ದಾರೆ. “ಕೇಂದ್ರ ಸರ್ಕಾರ ನಡೆಸುತ್ತಿರುವ ಕಿರುಕುಳವಿದು” ಎಂದು ಟಿಎಂಸಿ ಆರೋಪಿಸಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಎಸ್ಐಆರ್ ಒತ್ತಡ; ಮತ್ತೋರ್ವ ಬಿಎಲ್ಒ ಆತ್ಮಹತ್ಯೆ
ಈ ನಡುವೆ ಸಮರ್ಥನೆಗೆ ಇಳಿದಿರುವ ಚುನಾವಣಾ ಆಯೋಗ ಮತದಾರರ ಪಟ್ಟಿ ನಮೂನೆಯಲ್ಲಿ ದಾಖಲಾಗಿರುವ ಮಾಹಿತಿಯಲ್ಲಿ ಕೆಲವು ವ್ಯತ್ಯಾಸಗಳಿವೆ ಆದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಹೇಳಿಕೊಂಡಿದೆ. ಅಮರ್ತ್ಯ ಸೇನ್ ಮತ್ತು ಅವರ ತಾಯಿ ಅಮಿತಾ ಸೇನ್ ನಡುವಿನ ವಯಸ್ಸಿನ ವ್ಯತ್ಯಾಸವು 15 ವರ್ಷಗಳಿಗಿಂತ ಕಡಿಮೆ ಇದೆ. ಇದನ್ನು ಸರಿಪಡಿಸಲು ವಿಚಾರಣೆ ಅಗತ್ಯ. ಆದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ. ಇನ್ನು ಜನವರಿ 16ರಂದು ವಿಚಾರಣೆಗೆ ಹಾಜರಾಗುವಂತೆ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಈ ಬೆಳವಣಿಗೆ ನಡುವೆ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ದೈನಿಕ್ ಭಾಸ್ಕರ್ಗೆ ನೀಡಿರುವ ಕಾರ್ಟೂನ್ ವೈರಲ್ ಆಗುತ್ತಿದೆ. “ಗಾಂಧಿ ಬದುಕ್ಕಿದ್ದರೆ ಅವರಿಗೂ ಎಸ್ಐಆರ್ ಬುಲಾವ್ ಬರುತ್ತಿತ್ತು!” ಎಂದು ಸತೀಶ್ ಆಚಾರ್ಯ ಹೇಳಿದ್ದಾರೆ.
“ನೀವು ರಾಷ್ಟ್ರಪಿತವೇ? ಅದಿರಲಿ ನೀವು ಭಾರತೀಯರು ಎಂದು ಸಾಬೀತುಪಡಿಸಬಹುದೇ?” ಎಂದು ಮಹಾತ್ಮ ಗಾಂಧಿ ಅವರನ್ನು ಚುನಾವಣಾ ಅಧಿಕಾರಿ ಪ್ರಶ್ನಿಸುವಂತಿರುವ ಕಾರ್ಟೂನ್ ಇದಾಗಿದೆ.
ಈ ಮೂಲಕ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ದೇಶದ ಶ್ರೇಷ್ಠ ಚಿಂತಕರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ವ್ಯಂಗ್ಯವಾಡಿದ್ದಾರೆ. “ಒಂದು ವೇಳೆ ಗಾಂಧೀಜಿಯವರು ಇಂದು ಜೀವಂತವಾಗಿದ್ದರೂ ಸಹ ಅವರಿಗೆ ಇಂತಹದ್ದೇ ಒಂದು ನೋಟಿಸ್ ನೀಡಲಾಗುತ್ತಿತ್ತು” ಎಂಬ ಕಲ್ಪನೆಯನ್ನು ಈ ವ್ಯಂಗ್ಯಚಿತ್ರವು ಧ್ವನಿಸುತ್ತದೆ.





