ನನ್ನನ್ನು ಬೆದರಿಸಲು ನನ್ನ ಕುಟುಂಬಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿವೆ. ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಂಗ ಸದಸ್ಯರು ಸಹ ಒತ್ತಡ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ಹೇಳಿದ್ದಾರೆ.
ವಿಐಟಿ-ಎಪಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ನ್ಯಾಯಮೂರ್ತಿ ರಮಣ, ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಂಗ ಸದಸ್ಯರು ಸಹ ಒತ್ತಡ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ. ಯಾವುದೇ ಪಾತ್ರವಿಲ್ಲದ ನ್ಯಾಯಾಧೀಶರ ಕುಟುಂಬಗಳು ರಾಜಕೀಯ ಸಂಘಟನೆಗಳ ದಾಳಿಗೆ ಗುರಿಯಾಗಿದೆ ಎಂದರು. ಆದರೆ ಈ ಹಿಂದಿನ ವೈಎಸ್ಆರ್ಸಿಪಿ ಆಡಳಿತವನ್ನು ನೇರವಾಗಿ ಉಲ್ಲೇಖಿಸಿಲ್ಲ.
ಇದನ್ನು ಓದಿದ್ದೀರಾ? ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್
“ಇಲ್ಲಿರುವ ಹೆಚ್ಚಿನವರು ನನ್ನ ಕುಟುಂಬವನ್ನು ಹೇಗೆ ಗುರಿಯಾಗಿಸಿಕೊಳ್ಳಲಾಗಿದೆ ಮತ್ತು ನನ್ನ ಕುಟಂಬದವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದು ತಿಳಿದಿದೆ. ಇವೆಲ್ಲವನ್ನೂ ನನ್ನ ಮೇಲೆ ಒತ್ತಡ ಹೇರಲು ಮಾಡಲಾಗಿದೆ. ನಾನು ಒಬ್ಬಂಟಿಯಲ್ಲ. ಆ ಕಠಿಣ ಹಂತದಲ್ಲಿ, ರೈತರ ಪರವಾಗಿ ಸಹಾನುಭೂತಿ ಹೊಂದಿದ್ದ ಎಲ್ಲರೂ ಬೆದರಿಕೆ, ಒತ್ತಡಕ್ಕೆ ಒಳಗಾಗಿದ್ದಾರೆ” ಎಂದರು.
2020ರಲ್ಲಿ ಅಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿ ಅಮರಾವತಿಯನ್ನು ರದ್ದುಗೊಳಿಸಿ. ವಿಶಾಖಪಟ್ಟಣವನ್ನು ಆಡಳಿತಾತ್ಮಕ ರಾಜಧಾನಿಯಾಗಿ, ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಿ ಹೊಂದಿರುವ ಮೂರು ರಾಜಧಾನಿ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಮೂರು ರಾಜಧಾನಿಗಳ ಯೋಜನೆಯನ್ನು ರದ್ದುಗೊಳಿಸಿ, ಅಮರಾವತಿಯನ್ನೇ ಏಕೈಕ ರಾಜಧಾನಿಯಾಗಿಸಲಾಗಿದೆ.
ಈ ಪ್ರತಿಭಟನೆಯನ್ನು ನ್ಯಾಯಮೂರ್ತಿ ರಮಣ ಉಲ್ಲೇಖಿಸಿದ್ದಾರೆ. “ಅನೇಕ ರಾಜಕೀಯ ನಾಯಕರು ನಿಲುವು ತೆಗೆದುಕೊಳ್ಳಲು ಹಿಂಜರಿದರು ಅಥವಾ ಮೌನವಾಗಿರಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ದೇಶದ ನ್ಯಾಯಶಾಸ್ತ್ರಜ್ಞರು, ವಕೀಲರು ಮತ್ತು ನ್ಯಾಯಾಲಯಗಳು ತಮ್ಮ ಸಾಂವಿಧಾನಿಕ ಭರವಸೆಗೆ ಬದ್ಧವಾಗಿತ್ತು” ಎಂದು ಹೇಳಿದರು.
ಇದನ್ನು ಓದಿದ್ದೀರಾ? 6 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 1,267 ರೈತರ ಆತ್ಮಹತ್ಯೆ
“ಸರ್ಕಾರಗಳು ಬದಲಾಗಬಹುದು. ಆದರೆ ನ್ಯಾಯಾಲಯಗಳು ಮತ್ತು ಕಾನೂನಿನ ನಿಯಮವು ಸ್ಥಿರವಾಗಿರುತ್ತದೆ. ಜನರು ನಂಬಿಕೆಯನ್ನು ಇರಿಸಿದಾಗ ಮಾತ್ರ ಕಾನೂನಿನ ನಿಯಮವು ಉಳಿಯುತ್ತದೆ. ಸರ್ಕಾರದ ಪ್ರಬಲ ಶಕ್ತಿಯನ್ನು ಧೈರ್ಯದಿಂದ ತಡೆದುಕೊಂಡ ಅಮರಾವತಿಯ ರೈತರ ಮನೋಭಾವಕ್ಕೆ ನಾನು ವಂದಿಸುತ್ತೇನೆ. ರೈತರ ಹೋರಾಟದಿಂದ ನಾನು ಬಹಳಷ್ಟು ಸ್ಫೂರ್ತಿಯನ್ನು ಪಡೆಯುತ್ತೇನೆ. ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ನಂಬಿಕೆಯನ್ನು ಇಟ್ಟಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದೂ ಮಾಜಿ ಸಿಜೆಐ ತಿಳಿಸಿದ್ದಾರೆ.
ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ಘೋಷಿಸುವ ಮೊದಲೇ, ಅದರ ಬಗ್ಗೆ ತಿಳಿದಿದ್ದ ನ್ಯಾಯಮೂರ್ತಿ ಎನ್ವಿ ರಮಣ ಅವರ ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರು ಅಧಿಕಾರದ ದುರುಪಯೋಗಪಡಿಸಿಕೊಂಡು ಭೂಮಿಯನ್ನು ಖರೀದಿಸಿದ್ದಾರೆ ಎಂದು ವೈಎಸ್ಆರ್ಸಿಪಿ ಸರ್ಕಾರ ಆರೋಪಿಸಿತ್ತು. ಈ ಆರೋಪದಡಿ ಪ್ರಕರಣ ದಾಖಲಾಗಿತ್ತು. ಆದರೆ, 2020ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಎಫ್ಐಆರ್ನಲ್ಲಿರುವ ವಿಷಯಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುವುದಕ್ಕೂ ಹೈಕೋರ್ಟ್ ನಿರ್ಬಂಧ ಹೇರಿತ್ತು.
ಅಂದಿನ ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಅಂದಿನ ಸಿಜೆಐ ಎಸ್.ಎ. ಬೋಬ್ಡೆ ಅವರಿಗೆ ಪತ್ರ ಬರೆದು, ನ್ಯಾಯಮೂರ್ತಿ ರಮಣ ಅವರು ಹೈಕೋರ್ಟ್ನ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನೂ ಮಾಡಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ಆಂತರಿಕ ವಿಚಾರಣೆ ನಡೆಸಿ, ಜಗನ್ ಮೋಹನ್ ರೆಡ್ಡಿ ಅವರ ದೂರಿನಲ್ಲಿರುವ ಆರೋಪಗಳನ್ನು 2021ರ ಮಾರ್ಚ್ನಲ್ಲಿ ವಜಾಗೊಳಿಸಿತ್ತು.





