ಆದಾಯ ತೆರಿಗೆ ಇಲಾಖೆಯಿಂದ ಹಲವಾರು ಐಟಿ ನೋಟಿಸ್ಗಳನ್ನು ಪಡೆದಿರುವ ಕಾಂಗ್ರೆಸ್, ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಹಣದ ಕೊರತೆ ಎದುರಿಸುತ್ತಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತನ್ನ ಜಾಹೀರಾತು ವೆಚ್ಚವನ್ನು ಕಡಿತಗೊಳಿಸಿದೆ. ಜೊತೆಗೆ, ಚುನಾವಣಾ ನಿಧಿ ಸಂಗ್ರಹಿಸಲು ರಾಜ್ಯ ಘಟಕಗಳಿಗೆ ಕಾಂಗ್ರೆಸ್ ಸೂಚಿಸಿದೆ.
ಪಕ್ಷದ ಹೈಕಮಾಂಡ್ ಈಗಾಗಲೇ ಎಲ್ಲ ರಾಜ್ಯ ಘಟಕಗಳಿಗೆ ಮನೆ ಮನೆಗೆ ಪ್ರಚಾರದ ಮೂಲಕ ಅಥವಾ ಜನರನ್ನು ತಲುಪುವ ಮೂಲಕ ನಿಧಿ ಸಂಗ್ರಹಿಸಲು ತಿಳಿಸಿದೆ. ಹಾಗೆಯೇ ಸಾಮಾಜಿಕ ಮಾಧ್ಯಮ, ಪ್ರಭಾವಿಗಳಿಂದ ಭಾಷಣ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ಮೂಲಕ ತನ್ನ ಚುನಾವಣಾ ಪ್ರಚಾರವನ್ನು ಮಾಡಿಕೊಳ್ಳುತ್ತಿದೆ.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಪಕ್ಷದ ಖಾತೆಗಳನ್ನು ನಿರ್ಬಂಧಿಸಿರುವ ಕಾರಣದಿಂದಾಗಿ ಪ್ರಚಾರಕ್ಕೆ 2 ರೂಪಾಯಿ ಖರ್ಚು ಮಾಡಲು ಕೂಡಾ ಹಿಂದೆ ಮುಂದೆ ನೋಡುವಂತಾಗಿದೆ” ಎಂದು ಹೇಳಿದ್ದಾರೆ. “ಕೇಂದ್ರದ ಬಿಜೆಪಿ ಸರ್ಕಾರವು ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ಗೆ ಮತ್ತೆ ಐಟಿ ನೋಟಿಸ್; ಒಟ್ಟು 3,567 ಕೋಟಿ ರೂ. ತೆರಿಗೆ ಪಾವತಿ ಬೇಡಿಕೆ!
“ತಮಿಳುನಾಡಿನಲ್ಲಿ ಕಾಂಗ್ರೆಸ್ ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ನಿಧಿ ಸಂಗ್ರಹಿಸಲು ಪ್ರಾರಂಭಿಸಿದೆ” ಎಂದು ವಿರುದುನಗರದಿಂದ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಸಂಸದ ಬಿ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ.
“ಬಿಜೆಪಿಯು ಪ್ರತಿಪಕ್ಷಗಳನ್ನು ನಾಶ ಮಾಡಲು ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನು ನಾವು ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ವೆಚ್ಚವನ್ನು ಆದಷ್ಟು ಕಡಿಮೆ ಮಾಡುತ್ತಿದ್ದೇವೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಒಂದು ದಿನದ ಪ್ರಚಾರಕ್ಕೆ 50 ಕೋಟಿ ರೂಪಾಯಿ ವೆಚ್ಚವಾಗಬಹುದು. ನಮ್ಮ ಬಳಿ ಅಷ್ಟೊಂದು ಹಣವಿಲ್ಲ” ಎಂದು ತಿಳಿಸಿದರು.
“ನಾವು ಜನರ ಬಳಿಗೆ ಹೋಗಿ ದೇಣಿಗೆ ನೀಡುವಂತೆ ಕೇಳುತ್ತಿದ್ದೇವೆ. ರಾಜ್ಯ ಘಟಕವು ಈಗಾಗಲೇ ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸುತ್ತಿದೆ. ಚುನಾವಣೆ ಸಂದರ್ಭದಲ್ಲೇ ಐಟಿ ಕ್ರಮವು ಕಾಂಗ್ರೆಸ್ಗೆ ದೊಡ್ಡ ಹಿನ್ನಡೆಯಾಗಿದೆ. ಆರು ತಿಂಗಳ ಹಿಂದೆಯೇ ನಮಗೆ ತಿಳಿದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿತ್ತು” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ಗೆ ನೀಡಿರುವ ಐಟಿ ನೋಟಿಸ್ ಎಲ್ಲ ವಿಪಕ್ಷಗಳಿಗೆ ಎಚ್ಚರಿಕೆ ಸಂದೇಶ: ಪಿ ಚಿದಂಬರಂ
ಇನ್ನು ಲೋಕಸಭೆ ಚುನಾವಣೆಯ ಕಾಂಗ್ರೆಸ್ ವಾರ್ ರೂಮ್ ಅಧ್ಯಕ್ಷ ವೈಭವ್ ವಾಲಿಯಾ ಮಾತನಾಡಿ, “ಹಣದ ಕೊರತೆಯಿಂದಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ವೆಚ್ಚದಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹಿಂದುಳಿದಿದೆ. ಮೊದಲ ಹಂತದ ಚುನಾವಣೆಗೆ ಕೇವಲ 19 ದಿನಗಳು ಬಾಕಿಯಿದೆ, ಆದರೆ ನಾವು ಈವರೆಗೂ ಪತ್ರಿಕೆ ಅಥವಾ ಟಿವಿಯಲ್ಲಿ ಪ್ರಚಾರ ಆರಂಭಿಸಿಲ್ಲ. ನಾವೀಗ ಸಾಮಾಜಿಕ ಜಾಲತಾಣವನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆ. ನಾವು ಚುನಾವಣಾ ಬಾಂಡ್ಗಳ ಕುರಿತು ಜಾಹೀರಾತು ನೀಡಲು ಪ್ರಯತ್ನಿಸಿದರೂ, ಹೆಚ್ಚಿನ ಪತ್ರಿಕೆಗಳು ಅದನ್ನು ಪ್ರಕಟಿಸಲು ನಿರಾಕರಿಸಿದವು” ಎಂದು ಆರೋಪಿಸಿದರು.
ಇನ್ನು ಕೇರಳದಲ್ಲಿ ಚುನಾವಣಾ ನಿಧಿ ಸಂಗ್ರಹಕ್ಕಾಗಿ ಕೇಂದ್ರ ನಾಯಕತ್ವವು ಸೂಚಿಸಿದ ಬೆನ್ನಲ್ಲೇ ಕೂಪನ್ಗಳನ್ನು ಮುದ್ರಿಸಲು ಮತ್ತು ಅವುಗಳನ್ನು ಬೂತ್ ಮಟ್ಟದಲ್ಲಿ ವಿತರಿಸಲು ಕೇರಳ ಕಾಂಗ್ರೆಸ್ ನಿರ್ಧರಿಸಿದೆ. ಇನ್ನು ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳಿಂದ ತಲಾ 50,000 ರೂಪಾಯಿ ಸಂಗ್ರಹಿಸಲಾಗುತ್ತಿದೆ.




