ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (ಹಿಂದೆ ಟ್ವಿಟರ್) ಕೆಲವು ಖಾತೆಗಳು ಮತ್ತು ಪೋಸ್ಟ್ಗಳನ್ನು ತಡೆಹಿಡಿಯಲು ಭಾರತ ಸರ್ಕಾರವು ಆದೇಶ ಹೊರಡಿಸಿದೆ ಎಂದು ಎಲೋನ್ ಮಸ್ಕ್ ನೇತೃತ್ವದ ‘ಎಕ್ಸ್’ ಸಂಸ್ಥೆ ತಿಳಿಸಿದೆ.
ಎಕ್ಸ್ನ ‘ಗ್ಲೋಬಲ್ ಗವರ್ನಮೆಂಟ್ ಅಫೇರ್ಸ್’ ತಂಡವು ಮಾಹಿತಿ ಹಂಚಿಕೊಂಡಿದೆ. “‘ಭಾರತದಲ್ಲಿ ಮಾತ್ರ’ ಆ ಖಾತೆಗಳು ಮತ್ತು ಪೋಸ್ಟ್ಗಳನ್ನು ತಡೆಹಿಡಿದಿದ್ದೇವೆ. ಆದರೆ, ಈ ಕ್ರಮಗಳನ್ನು ನಾವು ಒಪ್ಪುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಪೋಸ್ಟ್ಗಳನ್ನು ತಡೆಹಿಡಿಯಬಾರದು. ಈ ಪೋಸ್ಟ್ಗಳು ಮತ್ತು ಖಾತೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸಬೇಕೆಂದು ನಾವು ಸಮರ್ಥಿಸುತ್ತೇವೆ” ಎಂದು ಸಂಸ್ಥೆ ಒತ್ತಿಹೇಳಿದೆ.
“ಭಾರತ ಸರ್ಕಾರದ ಖಾತೆಗಳನ್ನು ತಡೆಯುವ ಆದೇಶಗಳನ್ನು ನಮ್ಮ ನಿಲುವಿಗೆ ಅನುಗುಣವಾಗಿ ಪ್ರಶ್ನಿಸುವ ರಿಟ್ ಮೇಲ್ಮನವಿಯು ವಿಚಾರಣೆಗೆ ಬಾಕಿ ಉಳಿದಿದೆ. ನಮ್ಮ ನೀತಿಗಳಿಗೆ ಅನುಸಾರವಾಗಿ ಸರ್ಕಾರದ ಆದೇಶವನ್ನು ಸಾರ್ವಜನಿಕರಿಗೆ ತಿಳಿಸುವುದು ಪಾರದರ್ಶಕತೆಗೆ ಅತ್ಯಗತ್ಯ ಎಂದು ನಾವು ನಂಬುತ್ತೇವೆ” ಎಂದು ಹೇಳಿದೆ.
ರೈತರ ಪ್ರತಿಭಟನೆಗೆ ಸಂಬಂಧಿಸಿದ ಸುಮಾರು 177 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್ ಲಿಂಕ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಕೇಂದ್ರ ಸರ್ಕಾರವು ಸಾಮಾಜಿಕ ಮಾಧ್ಯಮಗಳಿಗೆ ಆದೇಶಿಸಿದೆ. ಈ ಬಳಿಕ ‘ಎಕ್ಸ್’ ತನ್ನ ಹೇಳಿಕೆಯನ್ನು ಪೋಸ್ಟ್ ಮಾಡಿದೆ.
ಐಟಿ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಫೆಬ್ರವರಿ 14 ಮತ್ತು 19 ರಂದು ಆದೇಶಗಳನ್ನು ಹೊರಡಿಸಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್, ಸ್ನ್ಯಾಪ್ಚಾಟ್ ಮತ್ತು ಇತರ ಕೆಲವು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿನ ಲಿಂಕ್ಗಳು ಮತ್ತು ಖಾತೆಗಳನ್ನು ನಿರ್ಬಂಧಿಸಲು ಆದೇಶಿಸಿದೆ. ರೈತರ ಹೋರಾಟ ಮುಗಿದ ನಂತರ ಈ ಖಾತೆಗಳನ್ನು ಮರುಸ್ಥಾಪಿಸಬಹುದು ಎಂದು ಸಚಿವಾಲಯ ಹೇಳಿರುವುದಾಗಿ ವರದಿಯಾಗಿದೆ.
ಸರ್ಕಾರಗಳ ಆದೇಶ ಪಾಲಿಸುವುದನ್ನು ಬಿಟ್ಟು ಬೇರೆ ದಾರಿ ಇಲ್ಲ
ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಕಳೆದ ವರ್ಷ ಜೂನ್ನಲ್ಲಿ, “ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗೆ ಯಾವುದೇ ದೇಶದಲ್ಲಿ ಸ್ಥಳೀಯ ಕಾನೂನುಗಳನ್ನು ಅನುಸರಿಸುವುದನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ” ಎಂದು ಹೇಳಿದ್ದರು.
“ಸ್ಥಳೀಯ ಸರ್ಕಾರಗಳ ಆದೇಶಗಳನ್ನು ಪಾಲಿಸುವುದನ್ನು ಬಿಟ್ಟು ಟ್ವಿಟರ್ಗೆ ಬೇರೆ ಆಯ್ಕೆ ಇಲ್ಲ. ನಾವು ಸ್ಥಳೀಯ ಸರ್ಕಾರದ ಕಾನೂನುಗಳನ್ನು ಪಾಲಿಸದಿದ್ದರೆ ನಾವು ನಮ್ಮ ಪ್ಲಾಟ್ಫಾರ್ಮ್ಗಳನ್ನು ಮುಚ್ಚಬೇಕಾಗುತ್ತದೆ” ಎಂದು ಅವರು ಹೇಳಿದ್ದರು.
2021 ರಲ್ಲಿ ಟ್ವಿಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಡಾರ್ಸೆ ಅವರು ಸಿಇಒ ಆಗಿದ್ದಾಗ, “2020-2021ರ ರೈತರ ಪ್ರತಿಭಟನೆಗಳನ್ನು ಬೆಂಬಲಿಸುವ ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರವು ಟ್ವಿಟರ್ಗೆ ಆದೇಶಿಸಿತ್ತು” ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
“ನಾವು ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚಬೇಕಾಗುತ್ತದೆ. ಭಾರತವು ನಮಗೆ ಬಹಳ ದೊಡ್ಡ ಮಾರುಕಟ್ಟೆಯಾಗಿದೆ; ‘ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ನಾವು ದಾಳಿ ಮಾಡುತ್ತೇವೆ’ ಎಂದು ಅವರು (ಕೇಂದ್ರ ಸರ್ಕಾರ) ಹೇಳಿದ್ದರು; ಇದು ಭಾರತ, ಪ್ರಜಾಪ್ರಭುತ್ವ ದೇಶ” ಡಾರ್ಸೆ ಅಸಮಾಧಾನದ ಮಾತುಗಳನ್ನಾಡಿದ್ದರು.




