ಅದಾನಿ ಕುರಿತು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪ್ರಸಾರ ಮಾಡಲಾಗಿರುವ 138 ವಿಡಿಯೋಗಳು ಮತ್ತು 83 ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ದೇಶದ ಪ್ರಮುಖ ಪತ್ರಕರ್ತರು ಮತ್ತು ಸುದ್ದಿಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ತಾವು ಪ್ರಸಾರ ಮಾಡಿರುವ ವಿಡಿಯೋಗಳನ್ನು ತೆಗೆದುಹಾಕಬೇಕೆಂದು ರವೀಶ್ ಕುಮಾರ್, ಧ್ರುವ್ ರಥೀ, ನ್ಯೂಸ್ಲಾಂಡ್ರಿ, ದಿ ವೈರ್, ಹೆಚ್ಡಬ್ಲ್ಯೂ ನ್ಯೂಸ್ ಹಾಗೂ ಆಕಾಶ್ ಬ್ಯಾನರ್ಜಿ ಅವರ ದಿ ದೇಶಭಕ್ತ್ ಸೇರಿದಂತೆ ಹಲವಾರು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಟೇಕ್ಡೌನ್ ನೋಟಿಸ್ಗಳನ್ನು ನೀಡಿದೆ.
ಗೌತಮ್ ಅದಾನಿಯ ಒಡೆತನದ ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (ಎಇಎಲ್) ರೋಹಿಣಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿತ್ತು. ಮೊಕದ್ದಮೆಯ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಸೆಪ್ಟೆಂಬರ್ 6ರಂದು ಗ್ಯಾಗ್ ಆದೇಶವನ್ನು ಹೊರಡಿಸಿದ್ದರು. ಇದೇ ಆದೇಶವನ್ನು ಉಲ್ಲೇಖಿಸಿ, ಎಂಐಬಿ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಮಾಧ್ಯಮ ಸಂಸ್ಥೆಗಳು ತಮ್ಮ ಯೂಟ್ಯೂಬ್ ಚಾನೆಲ್ಗಳಿಂದ ಅದಾನಿಗೆ ಸಂಬಂಧಿಸಿದ ವಿಡಿಯೋಗಳನ್ನು ತೆಗೆದುಹಾಕಿಲ್ಲ ಎಂದು ಹೇಳಿದೆ.
ನೋಟಿಸ್ನಲ್ಲಿ; 138 ಯೂಟ್ಯೂಬ್ ಲಿಂಕ್ಗಳು ಮತ್ತು 83 ಇನ್ಸ್ಟಾಗ್ರಾಮ್ ಪೋಸ್ಟ್ಗಳ ಪಟ್ಟಿ ನೀಡಲಾಗಿದೆ. ಅವುಗಳ ಪೈಕಿ ನ್ಯೂಸ್ಲಾಂಡ್ರಿ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಿರುವ 42 ವೀಡಿಯೊಗಳು ಸೇರಿವೆ.
ಎಂಐಬಿ ಪಟ್ಟಿ ಮಾಡಿರುವ ವಿಡಿಯೋಗಳಲ್ಲಿನ ವಿಷಯವು ತನಿಖಾ ವರದಿಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ವಿಡಂಬನೆ ಮತ್ತು ಪ್ರಾಸಂಗಿಕ ಉಲ್ಲೇಖಗಳನ್ನೂ ಒಳಗೊಂಡಿವೆ.
ಉದಾಹರಣೆಗೆ, ನ್ಯೂಸ್ಲ್ಯಾಂಡ್ರಿ ತನ್ನ ಚಾನೆಲ್ನ ಚಂದಾದಾರಿಕೆಗಾಗಿ ಮನವಿ ಮಾಡಿ ಮಾಡಲಾಗಿದ್ದ ವಿಡಿಯೋದಲ್ಲಿ, ‘ಅದಾನಿ ಸ್ಟೋರಿ’ಯ (ವಿಡಿಯೋ) ಸ್ಕ್ರೀನ್ಶಾಟ್ಅನ್ನು ಬಳಸಿರುವ ಕಾರಣಕ್ಕಾಗಿ, ಆ ವಿಡಿಯೋವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತೆಯೇ, ಹಾಸ್ಯನಟ ಕುನಾಲ್ ಕಮ್ರಾ ಅವರೊಂದಿಗಿನ ಸಂದರ್ಶನದಲ್ಲಿ ಸೆನ್ಸಾರ್ಶಿಪ್ ಬಗ್ಗೆ ತಮಾಷೆ ಮಾಡುವಾಗ ಅದಾನಿ ಹೆಸರು ಬಳಸಿದ್ದ ಕಾರಣಕ್ಕೆ, ಆ ವಿಡಿಯೋವನ್ನೂ ಎಂಐಬಿ ಗುರುತಿಸಿದೆ. ಆ ವಿಡಿಯೋದಲ್ಲಿ ಕುನಾಲ್ ಅವರು, “ಅದಾನಿ ನಮ್ಮ ಕಲ್ಲಿದ್ದಲು ಸಚಿವರು ಎಂದು ನಾನು ಪೋಸ್ಟ್ ಮಾಡಿದರೆ, ನನ್ನ ಮತ್ತು ನೋಡುಗರ ಭಾವನೆಯಲ್ಲಿ ಅದೊಂದು ವಿಡಂಬೆ. ಆದರೆ, ನಮ್ಮ ಸರ್ಕಾರವು ಅದನ್ನು ಸುಳ್ಳು ಎನ್ನಬಹುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಬಹುದು” ಎಂದು ಹೇಳಿದ್ದರು.
ಇನ್ನು, ಅದಾನಿ ಅವರು ಎನ್ಡಿಟಿವಿಯನ್ನು ಖರೀದಿಸಿದ ಬಳಿಕ, ಆ ಚಾನೆಲ್ನ ಮಾಜಿ ಮಾಲೀಕರಾದ ಪ್ರಯಣ್ ಮತ್ತು ರಾಧಿಕ ರಾಯ್ ವಿರುದ್ಧದ ಪ್ರಕರಣಗಳನ್ನು ಯಾವ ರೀತಿಯಲ್ಲಿ ಮುಚ್ಚಿಹಾಕಲಾಯಿತು ಎಂಬುದರ ಕುರಿತು ಟಿವಿ ನ್ಯೂಸಾನ್ಸ್ ಪ್ರಕಟಿಸಿದ್ದ ವಿಡಿಯೋಗಳೂ ಕೂಡ ಪಟ್ಟಿಯಲ್ಲಿವೆ. ಮುಂಬೈನ ಧಾರಾವಿ ಅಭಿವೃದ್ಧಿ ಯೋಜನೆಯ ವರದಿಗಳು ಮತ್ತು ನ್ಯೂಸ್ಲಾಂಡ್ರಿಯ ಸಾಪ್ತಾಹಿಕ ಪಾಡ್ಕ್ಯಾಸ್ಟ್ಗಳನ್ನು ಎಂಐಬಿ ಪಟ್ಟಿ ಮಾಡಿದೆ.
ಪತ್ರಕರ್ತ ಅತುಲ್ ಚೌರಾಸಿಯಾ ಅವರು ಅಮೆರಿಕದಲ್ಲಿ ಅದಾನಿ ವಿರುದ್ಧದ ಪ್ರಕರಣದ ಬಗ್ಗೆ ಪ್ರಕಟಿಸಿದ್ದ ಮೂರು ವಿಡಿಯೋಗಳು, ನ್ಯೂಸ್ ಮಿನಿಟ್ ಪಬ್ಲಿಷ್ ಮಾಡಿರುವ ಮೂರು ವಿಡಿಯೋಗಳು, ಪತ್ರಕರ್ತ ಶ್ರೀನಿವಾಸನ್ ಜೈನ್ ಅವರ ನಡೆಸಿದ್ದ ಎನ್ಸಿಪಿ ನಾಯಕ ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರು ಸಂದರ್ಶನದ ವಿಡಿಯೋಗಳನ್ನು ಕೂಡ ಡಿಲೀಟ್ ಮಾಡುವಂತೆ ಸೂಚಿಸಲಾಗಿದೆ. ಈ ಸಂದರ್ಶನಗಳಲ್ಲಿ, ಗೌತಮ್ ಅದಾನಿ 2019ರಲ್ಲಿ ಬಿಜೆಪಿ ಪರವಾದ ಒಂದು ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದ್ದರು. ಆ ಸಭೆಯಲ್ಲಿ ಬಿಜೆಪಿಯನ್ನು ಎನ್ಸಿಪಿ ಬೆಂಬಲಿಸಬೇಕೆಂಬ ಚರ್ಚೆಗಳು ನಡೆದಿದ್ದವು ಎಂಬುದನ್ನು ಇಬ್ಬರೂ ನಾಯಕರು ದೃಢಪಡಿಸಿದ್ದರು.
ನೋಟಿಸ್ನಲ್ಲಿ; “ನ್ಯಾಯಾಲಯವು ಅದಾನಿ ವಿರುದ್ಧದ ಲೇಖನಗಳು/ಸಾಮಾಜಿಕ ಮಾಧ್ಯಮ ಪೋಸ್ಟ್ಗಳು/ಟ್ವೀಟ್ಗಳನ್ನು 5 ದಿನಗಳಲ್ಲಿ ಡಿಲೀಟ್ ಮಾಡುವಂತೆ ಸೂಚಿಸಿತ್ತು. ಆದರೆ, ವಿಡಿಯೋಗಳ ಪ್ರಕಾಶಕರು ನಿಗದಿತ ಸಮಯದೊಳಗೆ ವಿಡಿಯೋಗಳನ್ನು ಡಿಲೀಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗ ನೋಟಿಸ್ನಲ್ಲಿ ತಿಳಿಸಲಾಗಿರುವಂತೆ ಆದೇಶದ ಅನುಸರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೋಟಿಸ್ ದೊರೆತ 36 ಗಂಟೆಗಳ ಒಳಗೆ ತಾವು ತೆಗೆದುಕೊಂಡ ಕ್ರಮಗಳ ಕುರಿತು ಸಚಿವಾಲಯಕ್ಕೆ ವಿವರಣೆ ನೀಡಬೇಕೆಂದು ನಿಮಗೆ ನಿರ್ದೇಶಿಸಲಾಗಿದೆ” ಎಂದು ಹೇಳಿದೆ.
ನೋಟಿಸ್ನ ಪ್ರತಿಗಳನ್ನು ಮೆಟಾ ಪ್ಲಾಟ್ಫಾರ್ಮ್ಗಳಾದ ಇಂಕ್ ಮತ್ತು ಗೂಗಲ್ ಇಂಕ್ಗೆ ಸಹ ಕಳಿಸಲಾಗಿದೆ. ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು-2021ರ ಅಡಿಯಲ್ಲಿ ಅದಾನಿಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಪೋಸ್ಟ್ಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳುವಲ್ಲಿ ಈ ಪ್ಲಾಟ್ಫಾರ್ಮ್ಗಳಿಗೂ ಜವಾಬ್ದಾರಿ ವಹಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಕ್ರೀಡಾಸ್ಫೂರ್ತಿ ಮರೆತು ಹಣಕ್ಕಾಗಿ ಜಗತ್ತಿನ ಮುಂದೆ ಬೆತ್ತಲಾದ ಬಿಸಿಸಿಐ, ಕೇಂದ್ರ ಸರ್ಕಾರ
ಸರ್ಕಾರ ಹೊರಡಿಸಿರುವ ನೋಟಿಸ್ಅನ್ನು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಪ್ರಶ್ನಿಸಿದ್ದಾರೆ. “ಇದು ಸಿವಿಲ್ ಮೊಕದ್ದಮೆಯಾಗಿದ್ದು, ಇದರಲ್ಲಿ ನ್ಯಾಯಾಲಯವು ಮಧ್ಯವರ್ತಿಗಳಿಗೆ (ಸಾಮಾಜಿಕ ಜಾಲತಾಣ ಪ್ಲಾಟ್ಫಾರ್ಮ್ಗಳು) ಸೂಚನೆಗಳನ್ನು ನೀಡಿದೆ. ಮಧ್ಯವರ್ತಿಗಳು ನ್ಯಾಯಾಲಯದ ಆದೇಶದ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಏಕೆ ಮಧ್ಯಪ್ರವೇಶಿಸುತ್ತಿದೆ? ಅಲ್ಲದೆ, ಪ್ರತಿವಾದಿಗಳು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು ಅವರಿಗೆ ಹಕ್ಕಿದೆ. ನ್ಯಾಯಾಲಯಕ್ಕೆ ತಮ್ಮ ಆದೇಶಗಳನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ತಿಳಿದಿದೆ. ಆ ಆದೇಶಗಳನ್ನು ಜಾರಿಗೊಳಿಸುವ ಕೆಲಸವನ್ನು ಸಚಿವಾಲಯ ಮಾಡುವ ಅಗತ್ಯವಿಲ್ಲ. ಸಚಿವಾಲಯವು ನ್ಯಾಯಾಂಗ ಪ್ರಕ್ರಿಯೆಯನ್ನು ಪೂರ್ವಭಾವಿಯಾಗಿ ತಡೆಯುತ್ತಿದೆ” ಎಂದು ಕಿಡಿಕಾರಿದ್ದಾರೆ.
ಪರಂಜಯ್ ಗುಹಾ ಠಾಕುರ್ತಾ ಅವರು ತಮ್ಮ ವೆಬ್ಸೈಟ್ paranjoy.inನಲ್ಲಿ ಅದಾನಿ ಮತ್ತು ಅದಾನಿ ಒಡೆತನದ adaniwatch.org ಹಾಗೂ adanifiles.com.au ವೆಬ್ಸೈಟ್ನಲ್ಲಿನ ಗುಂಪು ಯೋಜನೆಗಳನ್ನು ಟೀಕಿಸುವ ಪುನರಾವರ್ತಿತ ವರದಿಗಳನ್ನು ಪ್ರಕಟಿಸಿದ್ದಾರೆ ಎಂದು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ (AEL) ತನ್ನ ದೂರಿನಲ್ಲಿ ಆರೋಪಿಸಿದೆ.
ಪರಂಜಯ್ ಅವರು ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. “ನನ್ನ ವರದಿಯು ಪರಿಶೀಲಿಸಲ್ಪಟ್ಟ, ವಾಸ್ತವವನ್ನು ಒಳಗೊಂಡ, ನ್ಯಾಯಯುತವಾದ, ಸಮತೋಲಿತವಾದ, ಪಕ್ಷಪಾತವಿಲ್ಲದ ವರದಿಯಾಗಿದೆ. ನನ್ನ ವರದಿಗೆ ನಾನು ಬದ್ಧನಾಗಿರುತ್ತೇನೆ. ಭಾರತದ ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಬರೆದಿರುವ ಅಥವಾ ಸಹ-ಲೇಖಕರಾಗಿರುವ ಎಲ್ಲ ಲೇಖನಗಳು ಮತ್ತು ನಾನು ಮಾಡಿದ ಎಲ್ಲ ಹೇಳಿಕೆಗಳು ಕೇವಲ ಸತ್ಯ ಮತ್ತು ನಿಖರವಲ್ಲ. ಜೊತೆಗೆ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿವೆ ಎಂಬ ವಿಶ್ವಸ ನನ್ನಲ್ಲಿದೆ” ಎಂದು ಹೇಳಿದ್ದಾರೆ.
2017ರಿಂದ ಅದಾನಿ ಸಮೂಹ ಕಂಪನಿಗಳು ತಮ್ಮ ವಿರುದ್ಧ ದಾಖಲಿಸಿದ ಏಳನೇ ಮಾನನಷ್ಟ ಮೊಕದ್ದಮೆ ಇದಾಗಿದೆ ಎಂದು ಪರಂಜಯ್ ಹೇಳಿಕೊಂಡಿದ್ದಾರೆ.




