ಮನರೇಗಾ ಯೋಜನೆಯನ್ನು ರದ್ದು ಮಾಡಿ, ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮವನ್ನು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಗುರುವಾರ ಟೀಕಿಸಿದ್ದಾರೆ. “ಕೃಷಿ ಕಾನೂನು ಜಾರಿ ಮೂಲಕ ಮಾಡಿದ ತಪ್ಪನ್ನು ಈಗ ಕೇಂದ್ರ ಸರ್ಕಾರ ಮನರೇಗಾ ರದ್ಧು ಮೂಲಕ ಪುನರಾವರ್ತಿಸಲು ಯತ್ನಿಸುತ್ತಿದೆ” ಎಂದು ರಾಹುಲ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಮನರೇಗಾ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಶಾಸನದ ವಿರುದ್ಧ ಕಾರ್ಮಿಕರು ಮತ್ತು ಬಡ ನಾಗರಿಕರು ಒಗ್ಗೂಡುವಂತೆ ಒತ್ತಾಯಿಸಿದರು. “ಪಂಚಾಯತಿ ರಾಜ್ ವ್ಯವಸ್ಥೆಯ ಮೂಲಕ ಬಡವರಿಗೆ ಉದ್ಯೋಗದ ಹಕ್ಕನ್ನು ಒದಗಿಸಲು ಮನರೇಗಾ ಅನ್ನು ವಿನ್ಯಾಸಗೊಳಿಸಲಾಗಿದೆ. ಬಡವರನ್ನು ಸಬಲೀಕರಣಗೊಳಿಸುವುದೇ ಇದರ ಉದ್ದೇಶವಾಗಿತ್ತು. ಆದರೆ ಬಿಜೆಪಿ ಆ ಪರಿಕಲ್ಪನೆಯನ್ನು ಅಂತ್ಯ ಮಾಡಲು ಬಯಸುತ್ತದೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಗುಳೆ ತಪ್ಪಿಸಲು ಮನರೇಗಾ ಯೋಜನೆ ನೆರವು
ಇನ್ನು ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “ನಾವೆಲ್ಲರೂ ಒಗ್ಗೂಡಿ ಆ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ. ಸರ್ಕಾರವು ಈಗ ಕಾರ್ಮಿಕರ ವಿಷಯದಲ್ಲೂ ಅದೇ ರೀತಿ ತಪ್ಪನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.
ಇನ್ನು ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮನರೇಗಾ ಯೋಜನೆಯನ್ನು ಮರುಸ್ಥಾಪಿಸಬೇಕು, ಪಂಚಾಯತ್ಗಳ ಅಧಿಕಾರವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಜನವರಿ 10ರಿಂದ ‘ಮನರೇಗಾ ಬಚಾವೊ ಸಂಗ್ರಾಮ’ ಎಂಬ 45 ದಿನಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.





