“ಭಾರತದೊಂದಿಗೆ ಯುದ್ಧ ನಡೆಯುವ ಸಾಧ್ಯತೆಯಿರುವುದು ನಿಜ” ಎಂದು ಹೇಳಿಕೊಂಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್, “ಭವಿಷ್ಯದಲ್ಲಿ ಯಾವುದೇ ಶಸ್ತ್ರಾಸ್ತ್ರ ಸಂಘರ್ಷ ನಡೆದರೆ ಪಾಕಿಸ್ತಾನವೇ ಮೇಲುಗೈ ಸಾಧಿಸಲಿದೆ” ಎಂದಿದ್ದಾರೆ.
ಮಂಗಳವಾರ ಸಮಾ ಟಿವಿಯಲ್ಲಿ ನಡೆದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಪಾಕ್ ರಕ್ಷಣಾ ಸಚಿವರು, “ಭಾರತದೊಂದಿಗೆ ಮತ್ತೆ ಸಂಘರ್ಷದ ಬೆದರಿಕೆಯಿದೆ, ಆದ್ದರಿಂದ ಪಾಕಿಸ್ತಾನ ಎಲ್ಲಾ ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತ, ಪಾಕಿಸ್ತಾನ ನಾಯಕರು ಈಗ ಜೊತೆಯಾಗಿ ಭೋಜನಕ್ಕೆ ಹೋಗಬಹುದು: ಡೊನಾಲ್ಡ್ ಟ್ರಂಪ್
“ನಾನು ಈ ವಿಚಾರದಲ್ಲಿ ಉತ್ಪ್ರೇಕ್ಷೆ ಮಾಡಲು ಬಯಸಲ್ಲ. ಆದರೆ ಅಪಾಯ ಇರುವುದು ನಿಜ, ಅದನ್ನು ನಾನು ಅಲ್ಲಗಳೆಯಲಾರೆ. ಯುದ್ಧವೇ ನಡೆಯುವುದಾದರೆ ಅದು ದೇವರ ಇಚ್ಛೆ. ನಾವು ಈ ಹಿಂದಿಗಿಂತ ಉತ್ತಮ ಯಶಸ್ಸನ್ನು ಕಾಣುತ್ತೇವೆ” ಎಂದು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲೇ, “ಆರು ತಿಂಗಳಿಗೂ ಮುನ್ನ ನಮಗಿದ್ದ ಬೆಂಬಲಕ್ಕಿಂತ ಅಧಿಕ ಬೆಂಬಲ ಈಗ ಇದೆ. ಮೇ ಸಂಘರ್ಷದ ಬಳಿಕ ಭಾರತ ಹಲವು ದೇಶಗಳ ಬೆಂಬಲವನ್ನು ಕಳೆದುಕೊಂಡಿದೆ” ಎಂದು ಹೇಳಿರುವ ಪಾಕ್ ರಕ್ಷಣಾ ಸಚಿವ ಯಾವುದೇ ದೇಶದ ಹೆಸರನ್ನು ಉಲ್ಲೇಖಿಸಿಲ್ಲ.
“ವಿಶ್ವದ ನಕ್ಷೆಯಲ್ಲಿ ಉಳಿಯಬೇಕಾದರೆ ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು” ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಕೆ ನೀಡಿದ ಪಾಕಿಸ್ತಾನ ರಕ್ಷಣಾ ಸಚಿವರು ಯುದ್ಧ ಸಾಧ್ಯತೆಯ ಹೇಳಿಕೆಯನ್ನು ನೀಡಿದ್ದಾರೆ.





