ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ, ಸಿದ್ದರಾಮಯ್ಯನವರು ಇಸ್ರೊ ಇರುವ ರಾಜ್ಯದ ಮುಖ್ಯಮಂತ್ರಿಯಾಗಿ ಚಂದ್ರಯಾನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳಲಿ, ಸಂತೋಷ. ಆದರೆ ಈ ವಿಜ್ಞಾನಿಗಳ ಶ್ರಮಕ್ಕೆ, ಬುದ್ಧಿವಂತಿಕೆಗೆ ತಕ್ಕ ಪ್ರತಿಫಲ ಅವರು ನೀಡುತ್ತಾರಾ?
ಚಂದ್ರಯಾನ 3 ಐತಿಹಾಸಿಕ ಸಾಧನೆಯ ಮೂಲಕ ನನ್ನಂತಹ ಕೋಟ್ಯಂತರ ಭಾರತೀಯರಲ್ಲಿ ಸಂತೋಷ ಮತ್ತು ಹೆಮ್ಮೆ ಉಕ್ಕಿಸಿದ ಇಸ್ರೋ ವಿಜ್ಞಾನಿಗಳ ಪೂರ್ಣ ತಂಡಕ್ಕೆ ಅಭಿನಂದನೆಗಳು.
ಭಾರತೀಯ ವಿಜ್ಞಾನಿಗಳ ಈ ಮಹತ್ವದ ಸಾಧನೆಯ ಪ್ರಚಾರ ಲಾಭ ಪಡೆಯಲು ರಾಜಕಾರಣಿಗಳಲ್ಲಿ ಈಗಾಗಲೆ ಪೈಪೋಟಿ ಶುರುವಾಗಿದೆ. ವಿಶ್ವದಾದ್ಯಂತ ಕೋಟ್ಯಂತರ ಭಾರತೀಯರು ಚಂದ್ರಯಾನದ ರನ್ನಿಂಗ್ ಕಾಮೆಂಟ್ರಿಯ ಕ್ಲೈಮ್ಯಾಕ್ಸನ್ನು ಕಣ್ತುಂಬಿಕೊಳ್ಳುತ್ತಿರುವ ಹೊತ್ತಲ್ಲೇ, ದೂರದ ದಕ್ಷಿಣ ಆಫ್ರಿಕಾದಲ್ಲಿದ್ದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹಠಾತ್ತಾಗಿ ತೆರೆಯಲ್ಲಿ ಕಾಣಿಸಿಕೊಂಡು ಪರಿವಾರ್ ವಾಲೋಗಳನ್ನು ಉದ್ದೇಶಿಸಿ ಮಿಂಚಿನ ಭಾಷಣವೊಂದನ್ನು ಒಗೆದು, ರಾಜಕೀಯ ವಿರೋಧಿಗಳ ಹೊಟ್ಟೆನೋವು ಹೆಚ್ಚಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲೇ ಇರುವ ಇಸ್ರೋ ಕಚೇರಿಗೆ ಖುದ್ದು ದಾಳಿ ಮಾಡಿದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯಶಸ್ಸಿನ ಖುಷಿಯಲ್ಲಿದ್ದ ವಿಜ್ಞಾನಿಗಳಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದ್ದಾರೆ. ಮಾತ್ರವಲ್ಲ ಇಬ್ಬರೂ ಮರುದಿನದ ಪತ್ರಿಕೆಗಳ ಪೂರ್ಣ ಮುಖಪುಟದ ಜಾಹೀರಾತಿನಲ್ಲಿ ಜವಾಹರಲಾಲ್ ನೆಹರೂ, ವಿಕ್ರಮ್ ಸಾರಾಭಾಯ್ ಮತ್ತು ಎಪಿಜೆ ಕಲಾಂ ಅವರ ಫೋಟೊಗಳ ಜೊತೆಗೆ ತಮ್ಮ ಫೋಟೊಗಳನ್ನೂ ಮುದ್ರಿಸಿ, ತಾವೇ ಚಂದ್ರಲೋಕಕ್ಕೆ ಹೋಗಿ ಬಂದವರಂತೆ ಮಿಂಚಿದ್ದಾರೆ.
ಇರಲಿ, ರಾಜಕಾರಣಿಗಳೆಂದ ಮೇಲೆ ಇದೆಲ್ಲ ಇದ್ದದ್ದೇ.
ನಾವೀಗ ಅಭಿನಂದಿಸಬೇಕಿರುವುದು ಈ ಯಶಸ್ಸಿನ ರೂವಾರಿಗಳಾದ ಟೀಮ್ ಲೀಡರ್ ಗಳನ್ನು ಮತ್ತು ಅವರ ಪೋಷಕರು ಮತ್ತು ಮನೆಯವರನ್ನು. ವರ್ಷಾನುಗಟ್ಟಳೆ ಮನೆಮಂದಿಯನ್ನು ಮರೆತು ಸಂಶೋಧನೆಯಲ್ಲಿ ತೊಡಗುವ ಆ ಮಹಾತಪಸ್ವಿಗಳನ್ನು ಮತ್ತು ಅವರನ್ನು ಹೆತ್ತವರು ಹಾಗೂ ಸಲಹಿದವರನ್ನು.
ಇದನ್ನು ಓದಿದ್ದೀರಾ?: ರೈತರಿಗೆ ಬರಗಾಲದ ದಿಗಿಲು; ಅಧಿಕಾರಿಗಳಿಗೆ ಪರಿಹಾರದ ಫಸಲು!
ಎರಡು ದಿನಗಳ ಪತ್ರಿಕೆಗಳು ಮತ್ತು ಅಂತರ್ಜಾಲವನ್ನು ಜಾಲಾಡಿದ ಬಳಿಕ ನನಗೆ ಕುತೂಹಲ ಉಂಟು ಮಾಡಿರುವುದು- ಈ ವಿಜ್ಞಾನಿಗಳಲ್ಲಿ ಹೆಚ್ಚಿನವರ ಸಾಧನೆಯ ವಿವರಗಳು ಸಿಗುತ್ತವೆಯೇ ಹೊರತು ಕುಟುಂಬದ ಸದಸ್ಯರ ವಿವರಗಳು ಸಿಗುವುದಿಲ್ಲ ಎನ್ನುವುದು! ಮಕ್ಕಳನ್ನು ಓದಿಸಿ, ಬೆಳೆಸುವುದಕ್ಕೆ ಹೆತ್ತವರು ಪಟ್ಟ ಶ್ರಮವೂ ಗೊತ್ತಾಗುವುದಿಲ್ಲ. ನಮ್ಮ ಸಿನಿಮಾ ಮತ್ತು ಕ್ರೀಡಾ ತಾರೆಯರ ಕುಟುಂಬದ ಇಂಚಿಂಚೂ ಗೊತ್ತಿರುವ ನಮಗೆ ಈ ವಿಜ್ಞಾನಿಗಳ ಬಗ್ಗೆ ಏನೇನೂ ಗೊತ್ತಿರುವುದಿಲ್ಲ.
ನಾನಂತೂ ಈ ಕೆಳಗಿನ ಟೀಮ್ ಕ್ಯಾಪ್ಟನ್ ಗಳಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ಇವರಲ್ಲಿ ಹಲವರ ಪಾಲಕರ ಹೆಸರು ಗೊತ್ತಿಲ್ಲದ್ದಕ್ಕೆ ಕ್ಷಮೆ ಇರಲಿ.
- ಎಸ್. ಸೋಮನಾಥ್, (ಇಸ್ರೊ ಅಧ್ಯಕ್ಷ), ಪತ್ನಿ ವಲ್ಸಲ ಕುಮಾರಿ. ತಂದೆ ಶ್ರೀಧರ ಪಣಿಕ್ಕರ್ ಮತ್ತು ತಾಯಿ ತಂಗಮ್ಮ. (ಶ್ರೀಧರ ಪಣಿಕ್ಕರ್ ಜನಪ್ರಿಯ ಹಿಂದಿ ಶಿಕ್ಷಕರಾಗಿದ್ದರು)
- ಡಾ.ಪಿ.ವೀರಮುತ್ತುವೇಲ್ (ಪ್ರಾಜೆಕ್ಟ್ ಡೈರೆಕ್ಟರ್), ತಂದೆ ಪಳನಿವೇಲು (ಇವರು ರೈಲ್ವೆ ಟೆಕ್ನಿಷಿಯನ್ ಆಗಿದ್ದರು) ಮತ್ತು ತಾಯಿ.
- ಎಸ್.ಮೋಹನ್ ಕುಮಾರ್ (ಮಿಷನ್ ಡೈರೆಕ್ಟರ್) ಮತ್ತು ಅವರ ತಂದೆ- ತಾಯಿ.
- ಎಸ್. ಉಣ್ಣಿಕೃಷ್ಣನ್ ನಾಯರ್ (ಡೈರೆಕ್ಟರ್), ತಂದೆ ಶ್ರೀಧರನ್ ನಾಯರ್ (ಇವರು ಸರ್ವೇಯರ್ ಕಚೇರಿಯಲ್ಲಿ ನೌಕರರಾಗಿದ್ದರು) ಮತ್ತು ತಾಯಿ ಜಯಾ ನಾಯರ್ (ಕಂಪ್ಯೂಟರ್ ಎಂಜಿನಿಯರ್).
- ಎಂ.ಶಂಕರನ್ (ಯುಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ), ಅವರ ತಂದೆ ಮುತ್ತುಸ್ವಾಮಿ ಮತ್ತು ತಾಯಿ.
- ಎ.ರಾಜರಾಜನ್ (ಲಾಂಚ್ ಬೋರ್ಡ್ ಮುಖ್ಯಸ್ಥ) ಅವರ ತಂದೆ ಮತ್ತು ತಾಯಿ.
- ನೀಲೇಶ್ ಎಂ. ದೇಸಾಯಿ (ಅಹ್ಮದಾಬಾದ್ ನ ಸ್ಪೇಸ್ ಸೆಂಟರ್ ನಿರ್ದೇಶಕ) ಅವರ ತಂದೆ ಮತ್ತು ತಾಯಿ.
- ಕೆ.ಕಲ್ಪನಾ (ಸಹ ಯೋಜನಾ ನಿರ್ದೇಶಕಿ) ಅವರ ತಂದೆ, ತಾಯಿ ಮತ್ತು ಗಂಡ ಕಾರ್ತಿಕ್ ರಾಮನ್ (ಸಾಫ್ಟ್ ವೇರ್ ಎಂಜಿನಿಯರ್)
ಇವರಲ್ಲಿ ಹೆಚ್ಚಿನವರು ಕೇರಳ ಮತ್ತು ತಮಿಳುನಾಡಿನವರು ಎನ್ನುವುದು ವಿಶೇಷ. ಒಬ್ಬರು ಗುಜರಾತಿ. ಕೆ.ಕಲ್ಪನಾ ನಮ್ಮ ಬೆಂಗಳೂರಿನವರೇ. ಹಾಗೆಯೇ ಮೋಹನ್ ಕುಮಾರ್ ಮತ್ತು ಉಣ್ಣಿಕೃಷ್ಣನ್ ನಮ್ಮ ಬೆಂಗಳೂರಿನ ಐಐಎಸ್ಸಿಯಲ್ಲಿ ಕಲಿತವರು ಎಂಬುದು ಕನ್ನಡಿಗರ ಹೆಮ್ಮೆ.
ಈ ಅಭಿನಂದನಾ ಪತ್ರದ ಜೊತೆಗೆ ಇಸ್ರೊದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಅವರ ಪತ್ರಿಕಾ ಹೇಳಿಕೆಯೊಂದನ್ನೂ ಲಗತ್ತಿಸಿದ್ದೇನೆ. ‘ನಮ್ಮ ವಿಜ್ಞಾನಿಗಳಲ್ಲಿ ಯಾರೂ ಲಕ್ಷಾಧೀಶರಿಲ್ಲ. ಅಮೆರಿಕ, ರಷ್ಯಾ, ಚೀನಾದ ವಿಜ್ಞಾನಿಗಳು ಪಡೆಯುತ್ತಿರುವ ಸಂಬಳದ 20% ನಷ್ಟು ಸಂಬಳವನ್ನೂ ಪಡೆಯುತ್ತಿಲ್ಲ. ಆದರೆ ಅವರ ಆಸಕ್ತಿ ಮತ್ತು ಶ್ರದ್ಧೆ ಅನನ್ಯ’ ಎಂದು ಈ ಹೇಳಿಕೆಯಲ್ಲಿ ಮಾಧವನ್ ಶ್ಲಾಘಿಸಿದ್ದಾರೆ. (ನಾನು ಕುತೂಹಲಕ್ಕೆ ಟೀಂ ಕ್ಯಾಪ್ಟನ್ ಗಳ ಪೈಕಿ ಒಬ್ಬರ ಸಂಬಳದ ವಿವರ ಹುಡುಕಾಡಿದೆ. ತಿಂಗಳಿಗೆ 1.23 ಲಕ್ಷ ರೂಪಾಯಿ ಎಂಬ ವಿವರ ಕಾಣಿಸಿತು!)

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ, ಸಿದ್ದರಾಮಯ್ಯನವರು ಇಸ್ರೊ ಇರುವ ರಾಜ್ಯದ ಮುಖ್ಯಮಂತ್ರಿಯಾಗಿ ಚಂದ್ರಯಾನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳಲಿ, ಸಂತೋಷ. ಆದರೆ ಈ ವಿಜ್ಞಾನಿಗಳ ಶ್ರಮಕ್ಕೆ, ಬುದ್ಧಿವಂತಿಕೆಗೆ ತಕ್ಕ ಪ್ರತಿಫಲ ಅವರು ನೀಡುತ್ತಾರಾ?
ಬಾಹ್ಯಾಕಾಶ ಇಲಾಖೆಗೆ 2023-24ರ ಬಜೆಟ್ ನಲ್ಲಿ ಕೇಂದ್ರ ಸರಕಾರ ಕೊಟ್ಟದ್ದು 12,500 ಕೋಟಿ ರೂಪಾಯಿ. ಅನುದಾನದಲ್ಲಿ ಕಳೆದ ವರ್ಷಕ್ಕಿಂತ 8% ಕಡಿತ ಮಾಡಿದ್ದು ಈ ವರ್ಷದ ವಿಶೇಷ. ಇದರಲ್ಲೂ ಚಂದ್ರಯಾನ 3 ಮತ್ತು ಆದಿತ್ಯ L-1 ಯೋಜನೆಗೆ ನಿಗದಿಪಡಿಸಿದ್ದ ಮೊತ್ತವನ್ನು ಶೇ 32ರಷ್ಟು ಕಡಿತ ಮಾಡಲಾಗಿದೆ!
ಇಸ್ರೊ ವಿಜ್ಞಾನಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲು ಸಿದ್ದರಾಮಯ್ಯ ಸರಕಾರ ನಿರ್ಧರಿಸಿದೆಯಂತೆ, ಸಂತೋಷ. ದಿನಪತ್ರಿಕೆಗಳ ಮುಖಪುಟಗಳ ಜಾಹೀರಾತಿಗೆ ಖರ್ಚು ಮಾಡಿರುವ ಹಣದಷ್ಟೇ ಮೊತ್ತವನ್ನು ಪ್ರತಿಯೊಬ್ಬ ವಿಜ್ಞಾನಿಗೂ ರಾಜ್ಯ ಸರಕಾರ ಬಹುಮಾನವಾಗಿ ನೀಡಬಹುದೇ?

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ




