ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭಾರಿ ಸಂಭ್ರಮದಿಂದ ಪ್ರಾರಂಭಿಸಿದ್ದ ಮಹತ್ವಾಕಾಂಕ್ಷೆಯ ಮಹಿಳಾ ಕೇಂದ್ರಿತ ಯೋಜನೆ ‘ಮಹಾತಾರಿ ವಂದನ’ ಯೋಜನೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಯೋಜನೆಯ ಫಲಾನುಭವ ಪಡೆಯಲು ನೋಂದಾಯಿಸಿಕೊಂಡಿದ್ದ ಲಕ್ಷಾಂತರ ಮಹಿಳೆಯರನ್ನು ಸರ್ಕಾರ ಯೋಜನೆಯಿಂದ ಹೊಗಿಟ್ಟಿದೆ. ರಾಜಕೀಯದಲ್ಲಿ ಭಾರೀ ಚರ್ಚೆಗೆ ಗುರಿಯಾಗಿದ್ದು, ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಕಳೆದ ವರ್ಷ (2024) ಯೋಜನೆಯನ್ನು ಆರಂಭಿದಾಗ ಈ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಜೀವನಾಡಿಯಾಗಲಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ಫಲಾನುಭವಿಗಳಲ್ಲಿ ಬರೋಬ್ಬರಿ 5 ಲಕ್ಷ ಮಹಿಳೆಯರನ್ನು ಸರ್ಕಾರ ಹೊರಹಾಕಿದೆ.
2023ರ ಅಂತ್ಯದಲ್ಲಿ ನಡೆದ ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ‘ಮಹಾತಾರಿ ವಂದನ’ ಯೋಜನೆಯ ಭರವಸೆ ನೀಡಿತ್ತು. ಯೋಜನೆಯಡಿ 21 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಮಾಸಿಕ 1,000 ರೂ.ಗಳನ್ನು ಒದಗಿಸುವುದಾಗಿ ಹೇಳಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, 2024ರಲ್ಲಿ ಸರ್ಕಾರವು ಯೋಜನೆಯನ್ನು ಘೋಷಿಸಿತು. ಅದೇ ವರ್ಷ, ಪ್ರಧಾನಿ ಮೋದಿ ಅವರು ಯೋಜನೆಗೆ ಚಾಲನೆಯನ್ನೂ ನೀಡಿದರು. ಯೋಜನೆಯಡಿ ರಾಜ್ಯಾದ್ಯಂತ 70.12 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗಳಿಗೆ ನೇರವಾಗಿ 655.57 ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ವರ್ಗಾಯಿಸಲಾಗಿತ್ತು.
ಆದರೆ, ಇದೀಗ, ಅಕ್ಟೋಬರ್ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚಿನ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ, ಕೇವಲ 64.94 ಲಕ್ಷ ಮಹಿಳೆಯರು ಮಾತ್ರವೇ ಯೋಜನೆಯಡಿ ಹಣ ಪಡೆದಿದ್ದಾರೆ ಎಂದು ಸರ್ಕಾರಿ ದತ್ತಾಂಶಗಳು ತಳಿಸಿವೆ. ಅಂದರೆ, ಸುಮಾರು ಐದು ಲಕ್ಷ ಫಲಾನುಭವಿಗಳಿಗೆ ಹಣ ಸಂದಾಯವಾಗಿಲ್ಲ. ಅವರೆಲ್ಲರೂ ಯೋಜನೆಯಿಂದ ಹೊರಗುಳಿದಿದ್ದಾರೆ.
ಫಲಾನುಭವಿಗಳನ್ನು ಹೊರಗಿಟ್ಟ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ತಮ್ಮನ್ನು ಅಧಿಕಾರಕ್ಕೆ ತರಲು ಸಹಾಯ ಮಾಡಿದ ಮಹಿಳಾ ಮತದಾರರಿಗೆ ಆಡಳಿತಾರೂಢ ಬಿಜೆಪಿ ನಂಬಿಕೆ ದ್ರೋಹ ಬಗೆದಿದೆ ಎಂದು ಆರೋಪಿಸಿದೆ.
“ಪ್ರಧಾನಿ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದಾಗ, 70 ಲಕ್ಷ ಮಹಿಳೆಯರು ಮೊದಲ ಕಂತಿನ ಹಣ ಪಡೆದರು. ಆದರೆ, 20ನೇ ಕಂತಿನ ಹಣ ಬಿಡುಗಡೆ ಸಮಯದಲ್ಲಿ, ಐದು ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಹೊರಗಿಡಲಾಗಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಈ ಯೋಜನೆಯ ಪ್ರಯೋಜನ ಪಡೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಈಗ ಫಲಾನುಭವಿಗಳನ್ನು ಹೊರಗಿಡುತ್ತಿದೆ. ಇದು ಛತ್ತೀಸ್ಗಢದ ಮಹಿಳೆಯರಿಗೆ ಮಾಡಿದ ದ್ರೋಹ” ಎಂದು ಕಾಂಗ್ರೆಸ್ ವಕ್ತಾರ ಧನಂಜಯ್ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.
ಯೋಜನೆಯಿಂದ ಹೊರಹಾಕಲಾದ ಮಹಿಳೆಯರ ಹೆಸರುಗಳು ಮತ್ತು ಹೊರಗಿಡುವಿಕೆಗೆ ಕಾರಣಗಳ ಸಂಪೂರ್ಣ ಪಟ್ಟಿಯನ್ನು ಸರ್ಕಾರ ಪ್ರಕಟಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ತಮ್ಮನ್ನು ಯೋಜನೆಯಿಂದ ಹೊರಗಿಡಲಾದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಯ್ಪುರದ ಫಲಾನುಭವಿ ಸಂಗೀತಾ ದುಬೆ, “ಪ್ರತಿ ತಿಂಗಳು ಹಣ ಬರುತ್ತಿತ್ತು. ಆದರೆ, ಈ ಬಾರಿ ಯಾವುದೇ ಹಣ ಬಂದಿಲ್ಲ. ಪ್ರಸ್ತುತ ದೀಪಾವಳಿ ಹಬ್ಬವಿದೆ. ಇದೇ ಸಮಯದಲ್ಲಿ ಹಣ ಬಂದಿದ್ದರೆ, ನಾವು ಹಬ್ಬವನ್ನು ಚೆನ್ನಾಗಿ ಆಚರಿಸಬಹುದಿತ್ತು” ಎಂದು ಹೇಳಿದ್ದಾರೆ.
ಮತ್ತೊಬ್ಬ ಮಹಿಳೆ, ಧಮತರಿ ಮೂಲದ ರೇಣು ಕುಮಾರಿ, “ಈ ಹಿಂದೆಯೂ ನಮಗೆ ಕೆಲವು ತಿಂಗಳುಗಳ ಕಾಲ ಹಣ ಪಾವತಿ ಮಾಡುವುದನ್ನು ಸರ್ಕಾರ ನಿಲ್ಲಿಸಿತ್ತು. ಆಗ, ನಾವು ನಮ್ಮ ದಾಖಲೆಗಳನ್ನು ಮತ್ತೊಮ್ಮೆ ಸಲ್ಲಿಸಿದ್ದೆವು. ಅದಾದ ಬಳಿಕ, ಹಣ ಪಾವತಿ ಪುನರಾರಂಭವಾಗಿತ್ತು. ಈಗ, ಮತ್ತೆ ಸ್ಥಗಿತಗೊಂಡಿದೆ” ಎಂದು ಹೇಳಿದ್ದಾರೆ. ಇದೇ ರೀತಿ, ಬಿಲಾಸ್ಪುರ, ರಾಯ್ಪುರ, ದುರ್ಗ್, ಕೊರ್ಬಾ ಹಾಗೂ ಸುರ್ಗುಜಾದಂತಹ ಜಿಲ್ಲೆಗಳಲ್ಲಿ ಸಾವಿರಾರು ಮಹಿಳೆಯರಿಗೆ ಹಣ ಪಾವತಿ ಆಗಿಲ್ಲವೆಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ರಾಜ್ಯ ಸರ್ಕಾರವು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಪರಿಶೀಲನೆ ಮತ್ತು ಡೇಟಾ ತಿದ್ದುಪಡಿಯಿಂದಾಗಿ ಹೆಸರುಗಳು ಬಿಟ್ಟುಹೋಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ರಾಜ್ವಾಡೆ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
“ಮಾಸಿಕ ಪರಿಶೀಲನೆಯಲ್ಲಿ ಸುಮಾರು 64,858 ಮಹಿಳಾ ಫಲಾನುಭವಿಗಳು ಸಾವನ್ನಪ್ಪಿದ್ದಾರೆ. 707 ಮಹಿಳೆಯರು ಸ್ವಯಂಪ್ರೇರಣೆಯಿಂದ ಹೊರಗುಳಿದಿದ್ದಾರೆ ಹಾಗೂ 40,728 ನಕಲಿ ನಮೂದುಗಳನ್ನು ಗುರುತಿಸಿ ತೆಗೆದುಹಾಕಲಾಗಿದೆ. ಸುಮಾರು 4 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳ ಇ-ಕೆವೈಸಿ ಅಪ್ಡೇಟ್ ಮಾಡುವುದು ಇನ್ನೂ ಬಾಕಿ ಇದೆ. ಆ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಅವರಿಗೆ ಯೋಜನೆಯಡಿ ಹಣದ ಪಾವತಿ ಪುನರಾರಂಭಗೊಳ್ಳುತ್ತದೆ. ಹೊಸ ಫಲಾನುಭವಿಗಳನ್ನು ಸೇರಿಸಲು ಶೀಘ್ರದಲ್ಲೇ ಪೋರ್ಟಲ್ ಮತ್ತೆ ತೆರೆಯಲಿದೆ” ಎಂದು ಹೇಳಿದ್ದಾರೆ.
ಸರ್ಕಾರದ ಸಮರ್ಥನೆಯನ್ನು ಅಲ್ಲಗಳೆದಿರುವ ವಿಮರ್ಶಕರು, “ಪರಿಶೀಲನೆ ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ಸರ್ಕಾರವು ಪೂರ್ಣಗೊಳಿಸಿಲ್ಲ. ಇದು ಈ ಮಾಸಿಕ ನೆರವನ್ನು ಅವಲಂಬಿಸಿರುವ ಲಕ್ಷಾಂತರ ಮಹಿಳೆಯರ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಇಂತಹ ಪರಿಣಾಮಗಳು ಎದುರಾಗುವಾಗ ಇಂತಹ ಪ್ರಕ್ರಿಯೆಗಳನ್ನು ಯಾಕೆ ಮಾಡಬೇಕು. ಸರ್ಕಾರದ ‘ಪರಿಶೀಲನೆ’ ಎಂಬುದು ವಾಸ್ತವವಾಗಿ ಹೊರಗಿಡುವಿಕೆಯಾಗಿದೆ” ಎಂದು ಹೇಳಿದ್ದಾರೆ.




