ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದರೂ ಸ್ಥಳೀಯ ಮೂಡಿಗೆರೆ ವಿದಾನಸಭಾ ಕ್ಷೇತ್ರದ ಅಭಿವೃದ್ಧಿ ಮಾತ್ರ ನಿಂತ ನೀರಿನಂತಾಗಿದೆ. ಶಾಸಕರು ಕೇವಲ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಜ್ವಲಂತ ಸಮಸ್ಯೆಗಳಾವುದಕ್ಕೂ ಪರಿಹಾರ ಸಿಕ್ಕಿಲ್ಲ. ಹೊಸ ಯೋಜನೆಗಳಾಗಲಿ, ಅಭಿವೃದ್ಧಿ ಕಾರ್ಯಗಳ ಪ್ರಸ್ತಾವನೆ ಸಹ ಇಲ್ಲದಂತಾಗಿದೆ. ನಾಮಕಾವಸ್ತೆಗೆ ರಸ್ತೆ ಗುಂಡಿ ಮುಚ್ಚುವ ಸಣ್ಣ, ಪುಟ್ಟ ಕೆಲಸಗಳು ನಡೆಯುತ್ತಿದ್ದರೂ ಅವೈಜ್ಞಾನಿಕ ಹಾಗೂ ಸಂಪೂರ್ಣ ಕಳಪೆಯಿಂದ ಕೂಡಿವೆ ಎಂದು ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ತಿಳಿಸಿದರು.
ಭೀಕರ ಅತೀವೃಷ್ಠಿಯಿಂದ ಸಂತ್ರಸ್ತರಾಗಿರುವ ಮಲೆಮನೆ, ಮಧುಗುಂಡಿ ಇನ್ನಿತರೆ ಗ್ರಾಮಗಳ ಜನರಿಗೆ ಯಾವುದೇ ಪರಿಹಾರ ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗೆದ್ದು ಬಂದು ಈಗ ನಿರ್ಲಕ್ಷ್ಯ ವಹಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂತ್ರಸ್ತರಿಗೆ ಬದಲಿ ಭೂಮಿ ಗುರುತಿಸುವ ಪ್ರಕ್ರಿಯೆ ನಡೆದಿತ್ತು. ಅದನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ಶಾಸಕರು ಮಾಡಲಿಲ್ಲ.
ಆನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿದ್ದ ದಿನವೇ ಓರ್ವ ವ್ಯಕ್ತಿ ಆನೆ ದಾಳಿಯಿಂದ ಸಾವಪ್ಪಿದ ಘಟನೆಯೂ ನಡೆದಿತ್ತು. ಆದರೂ ಸರ್ಕಾರ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಶಾಸಕರು ಈ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಪರಿಹಾರ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆಂದು ಮೂಡಿಗೆರೆ ಕ್ಷೇತ್ರದ ಶಾಸಕರ ವಿರುದ್ಧ ದೀಪಕ್ ದೊಡ್ಡಯ್ಯ ಕಿಡಿಕಾರಿದರು.
ಸಾವು-ನೋವು ಸಂಭವಿಸಿದಾಗ ಮಾತ್ರ ಅರಣ್ಯ ಸಚಿವರು ತಕ್ಷಣ ಆದೇಶ ಮಾಡುತ್ತಾರೆ. ಆದರೆ ಅದಾವುದೂ ಕಾರ್ಯರೂಪಕ್ಕೆ ಬರುವುದೇ ಇಲ್ಲ. ಆನೆ ಹಾವಳಿ ತಡೆಗೆ ಬೇಲಿ ನಿರ್ಮಿಸುವುದು, ಆನೆ ಶಿಬಿರ ಸ್ಥಾಪಿಸುವುದು ಸೇರಿದಂತೆ ಹಲವು ಆದೇಶಗಳು ಈ ರೀತಿ ನೆನೆಗುದಿಗೆ ಬಿದ್ದಿವೆ. ಹಿಂದಿನ ಸರ್ಕಾರದಲ್ಲೇ ಕಳಸ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷ ಕಳೆದರೂ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿರುವುದಾಗಿ ಹೇಳಲಾಗುತ್ತಿದ್ದರೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ತಾಲ್ಲೂಕಿನ ಜನರು ಯಥಾ ಪ್ರಕಾರ ಮೂಡಿಗೆರೆಗೆ ಅಲೆಯುವುದು ತಪ್ಪಿಲ್ಲ. ತೀವು ಹಾಳಾಗಿದ್ದ ಕ್ಷೇತ್ರದ ಕ್ಷೇತ್ರದ ರಸ್ತೆಗಳನ್ನು ದುರಸ್ಥಿಪಡಿಸಬೇಕೆಂಬ ಸಾರ್ವಜನಿಕರ ಒತ್ತಡದಿಂದಾಗಿ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದ್ದರೂ ತೇಪೆ ಹಚ್ಚುವ ಕೆಲಸ ಮಾತ್ರ ನಡೆದಿದೆ. ಅವೈಜ್ಞಾನಿಕ ಹಾಗೂ ಕಳಪೆ ಕೆಲಸ ನಡೆದಿದ್ದು, ಅಪಾರ ಪ್ರಮಾಣದ ಅಕ್ರಮಗಳು ನಡೆದಿದ್ದರೂ ಶಾಸಕರು ಚಕಾರವೆತ್ತದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಳಸದ ಸಂಸೆ ಗ್ರಾಮದಲ್ಲಿ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ವಿಫಲವಾಗಿದೆ ಎಂದು ದೀಪಕ್ ದೊಡ್ಡಯ್ಯ ಅಣುಕಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಚಾಲನಾ ತರಬೇತಿ ಸಂಘ; ಶಾಲಾ, ಕಾಲೇಜು, ಸಾರ್ವಜನಿಕರ ಸುರಕ್ಷತೆಗಾಗಿ ಜನಜಾಗೃತಿ
ಈ ವರೆಗೆ ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ ಎರಡು ವರ್ಷಗಳಲ್ಲಾದರೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿಗೆ ಒತ್ತುಕೊಟ್ಟಿಲ್ಲ ಎಂದು ಆರೋಪಿಸಿದರು. ಈ ವೇಳೆ ಮಂಜುನಾಥ್, ಲಿಖಿತ್, ಉಪಸ್ಥಿತರಿದ್ದರು.





