ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ ಮುಂಗಟ್ಟು, ಮಳಿಗೆಗಳನ್ನು ಕಾನೂನಿನ ಆದೇಶದಂತೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸುತ್ತಿದ್ದರೂ, ಇದನ್ನು ವಿರೋಧಿಸಿ ಮಾಲೀಕರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ನಡೆದಿದೆ.
ಮಲೆನಾಡಿನಲ್ಲಿ ವಿಪರೀತ ಮಳೆಯಾಗುವ ಕಾರಣ, ತುಂಗಾ ಹೊಳೆ ತುಂಬಿ ಗಾಂಧಿ ಮೈದಾನದ ಸುತ್ತ ಆವರಿಸಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ತುಂಗಾ ನದಿ ಆವರಿಸಿಕೊಳ್ಳುವುದರಿಂದ ಸಮಸ್ಯೆಯಾಗುತ್ತದೆ. ಹಾಗೆಯೇ, ಸರ್ಕಾರದ ಜಾಗದಲ್ಲಿ ಅನಧಿಕೃತವಾಗಿ 26 ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು.

ಸುಮಾರು 2007ರಲ್ಲಿ ನಿರ್ಮಿಸಿಕೊಂಡಿದ್ದ ಮಳಿಗೆಗಳು ಹಾಗೂ ಅಂಗಡಿ ಮುಂಗಟ್ಟುಗಳ ಕುರಿತು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಬೇಕಾಯಿತು. ನಂತರ 2022ರಲ್ಲಿ ತಾರ್ಕಿಕ ಅಂತ್ಯಕ್ಕೆ ಹೋಗಿ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಕೋರ್ಟ್ ಆದೇಶ ಹೊರಡಿಸಿತ್ತು. ಹಾಗಾಗಿ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅನೂಪ್ ಸಂಜು ತಿಳಿಸಿದ್ದಾರೆ.

ಈ ವಿಚಾರವಾಗಿ ಅಧಿಕಾರಿಗಳು ತಹಶೀಲ್ದಾರ್ ಸಮ್ಮುಖದಲ್ಲಿ ಪ್ರತಿ ಮಳಿಗೆಯ ಮಾಲೀಕರನ್ನು ಭೇಟಿ ಮಾಡಿ ಮಾತನಾಡಿಸಿ, ಅಧಿಕಾರಿಗಳ ಕಚೇರಿಗೆ ಕರೆಸಿಕೊಂಡು ಕೋರ್ಟ್ ಆದೇಶವನ್ನು ಹೇಳಿದರೂ 10 ವಾರಗಳ ಗಡವು ಕೊಟ್ಟರೂ ಕೂಡ ಗಾಂಧಿ ಮೈದಾನದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದ ಮಾಲೀಕರು ತೆರವುಗೊಳಿಸದೇ ಇದ್ದ ಕಾರಣ ಅಧಿಕಾರಿಗಳು ಹಾಗೂ ಮಾಲೀಕರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಚಿಕ್ಕಮಗಳೂರಿನ ಎ ಸಿ ಸುದರ್ಶನ್ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಂವಿಧಾನ, ನ್ಯಾಯ ಮೂರ್ತಿ ಬಿ.ಆರ್ ಗವಾಯಿ ಮೇಲಿನ ಅವಮಾನ ಖಂಡಿಸಿ; ಎದ್ದೇಳು ಕರ್ನಾಟಕ ಪ್ರತಿಭಟನೆ
26 ಮಳಿಗೆಗಳ ಮಾಲೀಕರು ಹಾಗೂ ಕುಟುಂಬಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲವೆಂದು ಪಟ್ಟುಹಿಡಿದಿದ್ದರು. ಬಳಿಕ ಅಧಿಕಾರಿಗಳು ಗಲಬೆಯನ್ನು ಸಡಿಲಗೊಳಿಸಿದ್ದಾರೆ ಎನ್ನಲಾಗಿದೆ.





