ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಕಚೇರಿ (CMO) ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ರಾಜ್ಯದ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ವರ್ಗಾವಣೆ ಮಾಡುವುದಕ್ಕಿಂತಲೂ ಮಿಗಿಲಾದ ಮಹತ್ವದ ಜನಪರ ಕೆಲಸಗಳಿವೆ” ಎಂದು ನ್ಯಾಯಾಲಯ ಮಾರ್ಮಿಕವಾಗಿ ಹೇಳಿದೆ.
ಬೆಸ್ಕಾಂನ ವೈಟ್ಫೀಲ್ಡ್ ವಿಭಾಗದ ಸಹಾಯಕ ಎಂಜಿನಿಯರ್ ಎಸ್. ಚೇತನ್ ಎಂಬುವರು ತಮ್ಮ ವರ್ಗಾವಣೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿಗಳ ಕಚೇರಿಯ ಶಿಫಾರಸ್ಸಿನ ಹೊರತಾಗಿಯೂ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. ಸಿಎಂಒ ಸೂಚಿಸಿದ ನಿರ್ದಿಷ್ಟ ಉಪವಿಭಾಗಕ್ಕೆ ನನ್ನನ್ನು ನಿಯೋಜಿಸಿಲ್ಲ. ತಮ್ಮನ್ನು ಮುಖ್ಯಮಂತ್ರಿ ಸೂಚಿಸಿದಂತೆ ನಿಯೋಜನೆ ಮಾಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ಹಿಂದೆ ಈ ಏಕಸದಸ್ಯ ಪೀಠವು ವಿಚಾರಣೆ ನಡೆಸಿತ್ತು. “ಸಿಎಂ ಕಚೇರಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಯಾಂತ್ರಿಕವಾಗಿ ವರ್ಗಾವಣೆ ಪತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೆ ಇದೆಯೇ ಎಂಬ ಸಂಶಯ ಮೂಡುತ್ತಿದೆ” ಎಂದು ಹೇಳಿತ್ತು. ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಎದುರು ಚೇತನ್ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಏಕಸದಸ್ಯ ಪೀಠದ ನಿಲುವನ್ನು ಎತ್ತಿ ಹಿಡಿದಿದೆ.
“ವರ್ಗಾವಣೆ ಅಥವಾ ಸ್ಥಳ ನಿಯುಕ್ತಿಯ ಮನವಿಗಳನ್ನು ಮುಖ್ಯಮಂತ್ರಿಗಳ ಕಚೇರಿ ನೇರವಾಗಿ ಪರಿಗಣಿಸಬಾರದು. ಇವುಗಳನ್ನು ಆಯಾ ಇಲಾಖಾ ಮಟ್ಟದಲ್ಲೇ ನಿಯಮಾನುಸಾರ ಇತ್ಯರ್ಥಪಡಿಸಬೇಕು. ನೌಕರರ ವರ್ಗಾವಣೆ ಮತ್ತು ನೇಮಕಾತಿಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ಬಿಡಬೇಕು” ಎಂದು ಕೋರ್ಟ್ ಹೇಳಿದೆ.
“ಸರ್ಕಾರಿ ಇಲಾಳೆಗಳ ಅಧಿಕಾರಿಗಳ ವರ್ಗಾವಣೆಗಿಂತಲೂ ಉತ್ತಮವಾದ ಮತ್ತು ಮಹತ್ವದ ಕೆಲಸಗಳನ್ನು ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ರಾಜ್ಯದ ಅತ್ಯುನ್ನತ ಕಚೇರಿಯು ವರ್ಗಾವಣೆಯಂತಹ ವಿಷಯಗಳಲ್ಲಿ ತನ್ನ ಸಮಯವನ್ನು ವ್ಯರ್ಥ ಮಾಡಬಾರದು. ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ವರ್ಗಾವಣೆ ಮತ್ತು ನೇಮಕಾತಿಗಳಲ್ಲಿ ಹಸ್ತಕ್ಷೇಪ ಮಾಡಬಾರದು. ತಮ್ಮ ಕಚೇರಿಯ ಅಧಿಕಾರಿಗಳಿಗೆ ಈ ಕುರಿತು ಅಗತ್ಯ ನಿರ್ದೇಶನ ನೀಡಲು ಈ ಆದೇಶವನ್ನು ಮುಖ್ಯಮಂತ್ರಿಗಳ ಮುಂದೆಯೇ ಇಡಬೇಕು” ಎಂದು ಪೀಠ ಸೂಚಿಸಿದೆ.
“ಸಿಎಂ ಕಚೇರಿಯಿಂದ ಬರುವ ‘ನೋಟ್ಸ್’ ಕೇವಲ ಶಿಫಾರಸ್ಸು ಮಾತ್ರ. ಅದು ಅಂತಿಮ ವರ್ಗಾವಣೆ ಆದೇಶವಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಮಾರ್ಗಸೂಚಿಗಳ ಅನ್ವಯವೇ ವರ್ಗಾವಣೆಗಳು ನಡೆಯಬೇಕು” ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವರ್ಗಾವಣೆಯನ್ನು ಪ್ರಶ್ನಿಸಿದ್ದ ಚೇತನ್ ಅವರ ಅರ್ಜಿಯನ್ನು ವಜಾಗೊಳಿಸಿದೆ.




