ಬಿಹಾರ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಎನ್ಡಿಎ ಮುನ್ನಡೆ ಸಾಧಿಸಿದೆ. ಈ ನಡುವೆ “ನಮ್ಮ ಮತಗಳ ಕಳವು ನಡೆದಿದೆ” ಎಂದು ಬಿಹಾರ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ರಾಮ್ ಹೇಳಿದ್ದಾರೆ. ಹಾಗೆಯೇ ಮತ ಎಣಿಕೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ 180ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಮಹಾಘಟಬಂಧನ 56ಕ್ಕೂ ಕಡಿಮೆ ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಒಟ್ಟಾರೆ ಚುನಾವಣೆಯು ಎನ್ಡಿಎ ಕಡೆ ವಾಲುವಂತಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ನಾಯಕರು ಮತಗಳ್ಳತನದ ಆರೋಪ ಮಾಡಿದೆ.
ಇದನ್ನು ಓದಿದ್ದೀರಾ? SIR ಮೂಲಕ ಬಿಹಾರ ಚುನಾವಣೆಯಲ್ಲಿ ಮತ ಕಳವು ನಡೆಸುವ ಪಿತೂರಿ ಯಶಸ್ಸಾಗಲು ಬಿಡಲ್ಲ: ರಾಹುಲ್ ಗಾಂಧಿ
“ಆಡಳಿತ ಪಕ್ಷವು ಮತಗಳನ್ನು ಕದಿಯುವ ಯತ್ನವನ್ನು ಮಾಡುತ್ತಲೇ ಇದೆ. ಎಣಿಕೆ ಕೇಂದ್ರಗಳ ಸುತ್ತಲೂ ಸರ್ವರ್ ವ್ಯಾನ್ಗಳು ಸುಳಿದಾಡುತ್ತಿವೆ. ಬೂತ್ಗಳಲ್ಲಿ ಅಕ್ರಮ ನಡೆಯುತ್ತಿವೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತ ಕಳ್ಳತನ ನಡೆದಿದೆ. ಇಲ್ಲಿನ ಜನರು ಅದೇ ಅನುಮಾನವನ್ನು ಹೊಂದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಿಹಾರದ ಮತದಾರರು ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ಆರೋಗ್ಯ ಸೇವೆಯ ಕೊರತೆ ಮತ್ತು ನಿರಂತರ ವಲಸೆಯ ಸಂಕಷ್ಟದ ಬಗ್ಗೆ ಅಸಮಾಧಾನವನ್ನು ತೋರಿಸುತ್ತಿದ್ದಾರೆ. ತಮ್ಮ ಗಂಡಂದಿರು ರಾಜ್ಯದಿಂದ ಹೊರ ಹೋಗಿ ಹಣ ಗಳಿಸುವುದನ್ನು ಮಹಿಳೆಯರು ಬಯಸಲ್ಲ. ಯುವಕರು ಹತಾಶೆಗೊಂಡಿದ್ದಾರೆ. ಬಿಜೆಪಿ ಬೆಂಬಲದ 20 ವರ್ಷಗಳ ಆಡಳಿತವು ಜನರೇ ವಿಫಲವಾಗುವಂತೆ ಮಾಡಿದೆ” ಎಂದಿದ್ದಾರೆ.
ಇನ್ನು ಮತ ಎಣಿಕೆಯಲ್ಲಿ ಅಕ್ರಮ ನಡೆದರೆ ನೇಪಾಳ ಮಾದರಿ ಪ್ರತಿಭಟನೆಯ ಎಚ್ಚರಿಕೆಯನ್ನು ಆರ್ಜೆಡಿ ನಾಯಕರು ನೀಡಿದ್ದು, ಕಾಂಗ್ರೆಸ್ ನಾಯಕರೂ ಈ ಆತಂಕ ವ್ಯಕ್ತಪಡಿಸಿದ್ದಾರೆ. “ನಾವು ಯಾರಿಗೆ ಮತ ಹಾಕಿದ್ದೇವೆ ಎಂಬುದು ಜನರಿಗೆ ತಿಳಿದಿದೆ. ತಮ್ಮ ನಿರೀಕ್ಷೆಗೆ ಸರಿಯಾಗಿ ಫಲಿತಾಂಶ ಬರದಿದ್ದರೆ ಜನರು ಕೋಪಗೊಳ್ಳುವುದು ಸಹಜ” ಎಂದು ಅಭಿಪ್ರಾಯಿಸಿದ್ದಾರೆ.
ಬಿಹಾರದಲ್ಲಿ ಎರಡು ಹಂತದಲ್ಲಿ ನವೆಂಬರ್ 6 ಮತ್ತು 11ರಂದು ಚುನಾವಣೆ ನಡೆದಿದ್ದು ಇಂದು ಮತ ಎಣಿಕೆ ನಡೆಯುತ್ತಿದೆ. ಈ ಬಾರಿ ಬಿಹಾರದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಅರ್ಹ ಮತದಾರರಲ್ಲಿ ಸುಮಾರು ಶೇಕಡ 67ರಷ್ಟು ಮತ ಚಲಾಯಿಸಿದ್ದಾರೆ. ಇಂದು(ನ.14) ಮತ ಎಣಿಕೆ ನಡೆಯುತ್ತಿದೆ.





