ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರ ಮತ್ತೆ ರಾಜ್ಯದ ಗಮನ ಸೆಳೆಯುತ್ತಿದೆ. ಬಿಜೆಪಿ ಟಿಕೆಟ್ ದೊರೆಯದ ಸಂಸದೆ ಸುಮಲತಾ ನಡೆ ಕುರಿತು ಭಾರೀ ಚರ್ಚೆಗಳು ನಡೆದಿದ್ದವು. ಸದ್ಯ, ಅವರು ಬಿಜೆಪಿ ಸೇರಿ, ಸ್ಪರ್ಧೆಯಿಂದ ದೂರ ಉಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕಣದಲ್ಲಿದ್ದು, ಅವರ ಗೆಲುವು-ಸೋಲಿನ ವಿಚಾರವಾಗಿ ಕ್ಷೇತ್ರ ಚರ್ಚೆಯಲ್ಲಿಯೇ ಉಳಿದಿದೆ. ಈ ನಡುವೆ, ಕುಮಾರಸ್ವಾಮಿ ಅವರನ್ನು ಮಣಿಸಿ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಲು ಕಾಂಗ್ರೆಸ್ ನಾನಾ ರೀತಿಯಲ್ಲಿ ತಂತ್ರ ಎಣೆಯುತ್ತಿದೆ.
ಕಾಂಗ್ರೆಸ್ ಪರ ಮತಯಾಚನೆಗೆ ಸ್ಟಾರ್ ಪ್ರಚಾರಕರು ಮಂಡ್ಯ ಕಣಕ್ಕೆ ಇಳಿಯಲಿದ್ದಾರೆ. ಮಾಜಿ ಸಂಸದೆ, ನಟಿ ರಮ್ಯಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ರಮ್ಯಾ ಅವರು ಅವರು ಏಪ್ರಿಲ್ 14 ಮತ್ತು 15ರಂದು ಮಂಡ್ಯದಲ್ಲಿ ಪ್ರಚಾರ ಮತ್ತು ರೋಡ್ ಶೋ ನಡೆಸಲಿದ್ದಾರೆ. ಏಪ್ರಿಲ್ 17ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಬರಲಿದ್ದು, ಅಂದು ಬೃಹತ್ ಸಮಾವೇಶ ನಡೆಯಲಿದೆ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಆರ್ ಪೇಟೆ, ನಾಗಮಂಗಲದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಂಡ್ಯ ಜಿಲ್ಲೆಯವರೇ ಆದ ಸಚಿವ ಚಲುವರಾಯಸ್ವಾಮಿ ಕೂಡ ಜಿಲ್ಲೆ ನಾನಾ ಭಾಗಗಳಲ್ಲಿ ನಿರಂತರ ಪ್ರಚಾರ ನಡೆಸಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಬಂಡೆದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಚಲುವರಾಯಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕ್ಷೇತ್ರವಾಗಿದೆ. ತಮ್ಮ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರನ್ನು ಮಣಿಸಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಚಲುವರಾಯಸ್ವಾಮಿ ಪಣತೊಟ್ಟಿದ್ದಾರೆ. ಜಿಲ್ಲೆಯ ಎಲ್ಲ ಭಾಗಗಳಲ್ಲಿಯೂ ನಾನಾ ಸಭೆಯಗಳನ್ನು ನಡೆಸುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಚಲುವರಾಯಸ್ವಾಮಿ, “ಬಿಜೆಪಿ-ಜೆಡಿಎಸ್ ಮೈತ್ರಿಗೆ ಜನರ ಸಮ್ಮತಿ ಇಲ್ಲ. ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಯಾವ ರೀತಿ ಅಸಮಾಧಾನ ಇತ್ತೋ, ಅದೇ ರೀತಿ ಈಗಲೂ ಅಸಮಾಧಾನವಿದೆ” ಎಂದು ಹೇಳಿದ್ದಾರೆ.
“ಈಗಾಗಲೇ ಕ್ಷೇತ್ರದಲ್ಲಿ ನಾಲ್ಕು ಸುತ್ತಿನ ಪ್ರಚಾರ ಮಾಡಿದ್ದೇವೆ. ಜನರ ಉತ್ಸಹ ಕೂಡ ಕಾಂಗ್ರೆಸ್ ಪರವಾಗಿದೆ. ಜೆಡಿಎಸ್-ಬಿಜೆಪಿಯಿಂದ ಸಾಕಷ್ಟು ಮಂದಿ ಕಾಂಗ್ರೆಸ್ಗೆ ಬರುತ್ತಿದ್ದಾರೆ. ನಮಗೆ ಜನ ಬೆಂಬಲವಿದೆ” ಎಂದು ಹೇಳಿದ್ದಾರೆ.




