ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಶುರುವಾಗಿದೆ. “ಅಯೋಗ್ಯ ಕರ್ನಾಟಕ ಕಾಂಗ್ರೆಸ್ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ” ಎಂದ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷವು “ಕನ್ನಡಿಗರ ಎದುರು ಮೋದಿಯ ಹೆಸರನ್ನು ಹೇಳುವ ಮುಂಚೆ ನೂರು ಬಾರಿ ಯೋಚಿಸಿ” ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ, “ಅಯೋಗ್ಯ ಕಾಂಗ್ರೆಸ್ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹಿಡಿದು ನಾಲಾಯಕ್ ಕೈ ಶಾಸಕರು ನಾಲಿಗೆ ಹರಿಬಿಡುತ್ತಿದ್ದಾರೆ” ಎಂದು ಹೇಳಿದೆ.
“ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಹತಾಶೆಗೊಂಡು ತಮ್ಮ ವ್ಯಕ್ತಿತ್ವವನ್ನು ಬೆತ್ತಲಾಗಿಸಿಕೊಂಡಿದ್ದಾರೆ. ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವರ ಕಪಾಳಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ಬಾರಿಸುವುದು ಶತಸಿದ್ಧ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ಬರ ಪರಿಹಾರ ಕೊಡದೆ, ಅಭಿವೃದ್ಧಿಯೂ ಮಾಡದೆ, ಕುಡಿಯುವುದಕ್ಕೆ ನೀರು ಕೊಡಲಾಗದೆ ಇರುವ ಅಯೋಗ್ಯರು, ಜನರಿಂದ ಆಯ್ಕೆಯಾದ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ” ಎಂದು ಬಿಜೆಪಿ ಹೇಳಿದೆ.
ಅಯೋಗ್ಯತನವನ್ನೇ ಮೈಗೂಡಿಸಿಕೊಂಡಿರುವ @BJP4Karnataka, ವಿಧಾನಸಭೆ ಚುನಾವಣೆಯಲ್ಲಿ ಮೋದಿಯನ್ನು ಗಲ್ಲಿ ಗಲ್ಲಿಯಲ್ಲಿ ಅಲೆಸಿದಿರಿ, ಆದರೆ ಕನ್ನಡಿಗರು ಮೋದಿಯನ್ನು ಹಾಗೂ ಬಿಜೆಪಿಯನ್ನು ತಿರಸ್ಕರಿಸಿ ಕಪಾಳಮೋಕ್ಷ ಮಾಡಿ ಕಳಿಸಿದ್ದಾರೆ.
ಸ್ಮಾರ್ಟ್ ಸಿಟಿಯಾಗಲಿಲ್ಲ,
2 ಕೋಟಿ ಉದ್ಯೋಗ ನೀಡಲಿಲ್ಲ,
ಕಪ್ಪು ಹಣ ತರಲಿಲ್ಲ,
15 ಲಕ್ಷ ಬರಲಿಲ್ಲ,
ಹೇಳಿದ ಯಾವ… pic.twitter.com/5xiO5981Cy— Karnataka Congress (@INCKarnataka) March 25, 2024
ಬಿಜೆಪಿಯ ಈ ಟ್ವೀಟ್ಗೆ ತಿರುಗೇಟು ನೀಡಿರುವ ಕಾಂಗ್ರೆಸ್, “ಅಯೋಗ್ಯತನವನ್ನೇ ಮೈಗೂಡಿಸಿಕೊಂಡಿರುವ ಕರ್ನಾಟಕ ಬಿಜೆಪಿಗರೇ ವಿಧಾನಸಭೆ ಚುನಾವಣೆಯಲ್ಲಿ ಮೋದಿಯನ್ನು ಗಲ್ಲಿ ಗಲ್ಲಿಯಲ್ಲಿ ಅಲೆಸಿದಿರಿ, ಆದರೆ ಕನ್ನಡಿಗರು ಮೋದಿಯನ್ನು ಹಾಗೂ ಬಿಜೆಪಿಯನ್ನು ತಿರಸ್ಕರಿಸಿ ಕಪಾಳಮೋಕ್ಷ ಮಾಡಿ ಕಳಿಸಿದ್ದಾರೆ” ಎಂದು ಛೇಡಿಸಿದೆ.
“ಸ್ಮಾರ್ಟ್ ಸಿಟಿಯಾಗಲಿಲ್ಲ, 2 ಕೋಟಿ ಉದ್ಯೋಗ ನೀಡಲಿಲ್ಲ, ಕಪ್ಪು ಹಣ ತರಲಿಲ್ಲ,
15 ಲಕ್ಷ ಬರಲಿಲ್ಲ, ಹೇಳಿದ ಯಾವ ಭರವಸೆಗಳನ್ನೂ ಈಡೇರಿಸದೆ ಮೋದಿ ಮೋದಿ ಎನ್ನುತ್ತಾ ಮತದಾರರೆದುರು ಹೋದರೆ ಬಿಜೆಪಿಗರು ಜನರಿಂದ ತಿರಸ್ಕಾರದ ಕಪಾಳಮೋಕ್ಷ ಎದುರಿಸುವುದು ನಿಶ್ಚಿತ” ಎಂದು ಕಾಂಗ್ರೆಸ್ ಹೇಳಿದೆ.
“ಮೋದಿ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲಿಲ್ಲ, ಜಿಎಸ್ಟಿ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ. ಬರ ಪರಿಹಾರ ನೀಡದೆ ವಂಚಿಸಿದ್ದಾರೆ. ಮೋದಿ ವಂಚನೆಗಳಿಂದ ಬೇಸತ್ತಿರುವ ಕನ್ನಡಿಗರ ಎದುರು ಮೋದಿಯ ಹೆಸರನ್ನು ಹೇಳುವ ಮುಂಚೆ ನೂರು ಬಾರಿ ಯೋಚಿಸಬೇಕು ಬಿಜೆಪಿಗರು” ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.





