ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಭೇಟಿ ನೀಡಿದ ಎರಡು ದಿನದಲ್ಲೇ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಸೇರಿ ದಾಳಿ ನಡೆಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿ ಅವರನ್ನು ಟೀಕಿಸಿದೆ. ಪಿಎಂ ಇಸ್ರೇಲ್ ಭೇಟಿಯನ್ನು ಕಾಂಗ್ರೆಸ್ ನಾಚಿಕೆಗೇಡು ಎಂದು ಕರೆದಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮೋದಿ ಅವರು ಇಸ್ರೇಲ್ ಭೇಟಿ ನೀಡಿದ ಎರಡು ದಿನಗಳ ನಂತರ, ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿ ದಾಳಿಯನ್ನು ಪ್ರಾರಂಭಿಸಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರ ಮಿಲಿಟರಿ ಜಮಾವಣೆಯನ್ನು ನೋಡಿಯೇ ಈ ನಿರೀಕ್ಷೆ ಇತ್ತು. ಆದರೂ ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದರು. ಈ ಮೂಲಕ ನೈತಿಕ ಹೇಡಿತನವನ್ನು ಪ್ರದರ್ಶಿಸಿದರು” ಎಂದು ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ: 28 ವಿಮಾನಗಳ ಹಾರಾಟ ರದ್ದುಗೊಳಿಸಿದ ಏರ್ ಇಂಡಿಯಾ
“ಭಾರತವು ಇಸ್ರೇಲ್ನೊಂದಿಗಿದೆ ಎಂದು ಘೋಷಿಸಿದ ಕಾರಣಕ್ಕಾಗಿಯೇ ಪ್ರಧಾನಿ ಸ್ವತಃ ಪ್ರಶಸ್ತಿಯನ್ನು ಪಡೆದುಕೊಂಡರು. ಇಸ್ರೇಲ್ ಭೇಟಿ ನಾಚಿಕೆಗೇಡಿನ ಸಂಗತಿ ಮತ್ತು ಮೋದಿ ಅವರ ಇಬ್ಬರು ‘ಒಳ್ಳೆಯ ಸ್ನೇಹಿತರು’ ಪ್ರಾರಂಭಿಸಿದ ಯುದ್ಧಕ್ಕಿಂತ ಅತಿಯಾಗಿದ್ದು” ಎಂದು ಟೀಕಿಸಿದ್ದಾರೆ.
ಇನ್ನು ಕಾಂಗ್ರೆಸ್ ವಿದೇಶಾಂಗ ವ್ಯವಹಾರಗಳ ಅಧ್ಯಕ್ಷ ಸಲ್ಮಾನ್ ಖುರ್ಷಿದ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಭಾರತವು ಇಸ್ರೇಲ್ನೊಂದಿಗೆ ಮಾತ್ರವಲ್ಲದೆ ಇರಾನ್, ಪ್ಯಾಲೇಸ್ತೀನ್ನೊಂದಿಗೆ ನಾಗರಿಕ, ಆರ್ಥಿಕ, ಭೌಗೋಳಿಕ ಸಂಬಂಧವನ್ನು ಹೊಂದಿದೆ ಎಂಬುದನ್ನು ಬಿಜೆಪಿ ಸರ್ಕಾರವು ಗಮನದಲ್ಲಿಟ್ಟುಕೊಳ್ಳಬೇಕು” ಎಚ್ಚರಿಸಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಸೇನಾ ದಾಳಿ ನಡೆಸಿವೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಈ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಜತೆಗೆ ಅವರ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ನ ಟೆಲ್ ಅವಿವ್ ಮತ್ತು ಮಧ್ಯಪ್ರಾಚ್ಯ ಕತಾರ್, ಯುಎಇ, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ಬೇಸ್ಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.
ಪ್ರಧಾನಿ ತಮ್ಮ ದ್ವಂದ್ವ ನಿಲುವಿನಿಂದ ಈ ಹಿಂದೆಯೂ ಹಲವು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಭಾರತ ಪ್ಯಾಲೇಸ್ತೀನ್ ವಿಷಯದಲ್ಲಿ ದಶಕಗಳ ಕಾಲದ ತಟಸ್ಥ ನಿಲುವನ್ನು ಹೊಂದಿದೆ. ಆದರೆ ಇತ್ತೀಚೆಗೆ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಸ್ರೇಲ್ಗೆ ಪೂರ್ಣ ಬೆಂಬಲ ನೀಡಿರುವುದು ಭಾರತದ ನೈತಿಕ ನಿಲುವನ್ನು ಕುಗ್ಗಿಸಿದೆ ಎಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಟೀಕಿಸಿವೆ.
ಇಷ್ಟು ಮಾತ್ರವಲ್ಲದೆ ಇದೀಗ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿಯನ್ನು ಪ್ರಧಾನಿ ಮೋದಿ ಖಂಡಿಸದಿರುವುದು ಭಾರತದ ಅಲಿಪ್ತ ನೀತಿಗೆ (Non-Alignment) ವಿರುದ್ಧವಾಗಿದೆ. ಇದು ಗಲ್ಫ್ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ತರಬಹುದು ಎಂಬ ಕಳವಳ ವ್ಯಕ್ತವಾಗಿದೆ.





