ಒಡಿಶಾದ ವಿಧಾನಸಭೆ ಮಳೆಗಾಲದ ಅಧಿವೇಶನದಲ್ಲಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿದೆ.
ವಿಶೇಷವಾಗಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು ಮತ್ತು ರಸಗೊಬ್ಬರ ಕೊರತೆಯನ್ನು ನಿಯಂತ್ರಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕಾರಣಗಳೂ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟು, ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಸಜ್ಜಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ವಿಷಯವನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿಯೂ ಕಾಂಗ್ರೆಸ್ ಎತ್ತಿತ್ತು. ಆದರೆ, ಈ ವಿಷಯವನ್ನು ಚರ್ಚಿಸುವ ಬದಲು, ಪಕ್ಷದ ಎಲ್ಲ 14 ಶಾಸಕರನ್ನು ಸದನದಿಂದ ಅಮಾನತುಗೊಳಿಸಿ, ವಿಷಯವನ್ನು ಚರ್ಚೆಯಿಂದ ಹೊರಗಿಡಲಾಯಿತು ಎಂದು ವಿಪಕ್ಷ ನಾಯಕ ರಾಮಚಂದ್ರ ಕದಮ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಎಥೆನಾಲ್ ಪೆಟ್ರೋಲ್ ಬಳಕೆ ಮೈಲೇಜ್ ಡ್ರಾಪ್ ಎಷ್ಟು? ಕೇಂದ್ರ ಸಚಿವ ಗಡ್ಕರಿಯ ಲೂಟಿ ಎಷ್ಟು…?
ಕಿಯೋಂಝಾರ್ನ ಘಟಗಾಂವ್ ಅರಣ್ಯ ಪ್ರದೇಶದಲ್ಲಿ ಮಹಿಳಾ ಟ್ರಾಫಿಕ್ ಕಾನ್ಸ್ಟೆಬಲ್ ಮೃತದೇಹ ಪತ್ತೆಯಾಗಿದೆ. ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಹತ್ಯೆಯನ್ನು ಖಂಡಿಸಿದ ಕದಮ್, “ಈ ಘಟನೆಯು ಸರ್ಕಾರದ ವೈಫಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ” ಎಂದು ಹೇಳಿದ್ದಾರೆ.
ಈ ಘಟನೆಗೆ ಗೃಹ ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ಅವರು ಉತ್ತರ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
“ಮಹಿಳೆಯರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಕಾಪಾಡುವುದು, ರೈತರು, ದಲಿತರು, ಬುಡಕಟ್ಟು ಜನಾಂಗದವರು ಹಾಗೂ ಒಬಿಸಿಗಳು ಎದುರಿಸುತ್ತಿರುವ ಸಮಸ್ಯೆಗಳಂತಹ ಗಂಭೀರ ವಿಚಾರಗಳನ್ನು ನಿಭಾಯಿಸಲು ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದ್ದರಿಂದ, ಈ ವಿಧಾನಸಭಾ ಅಧಿವೇಶನದಲ್ಲಿ ಈ ರಾಜ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಾವು ನಿರ್ಧರಿಸಿದ್ದೇವೆ” ಎಂದು ರಾಮಚಂದ್ರ ಕದಮ್ ತಿಳಿಸಿದ್ದಾರೆ.




