ಇನ್ನು ಆರು ತಿಂಗಳಲ್ಲಿ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, “ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ತಮ್ಮ ಪಕ್ಷದ ಬಗ್ಗೆ ಯೋಚಿಸಬೇಕು” ಎಂದು ಹೇಳಿದ್ದಾರೆ.
“ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಹೇಳಿಕೆ ವಾರದ ಅತ್ಯುತ್ತಮ ಹಾಸ್ಯವಾಗಿದೆ. ಅವರು ನಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಈಗಾಗಲೇ ಜನರ ಮನಸ್ಸಿನಿಂದ ಹೊರಹೋಗಿರುವ ಅವರ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ” ಎಂದು ಗುಂಡೂರಾವ್ ಹೇಳಿದ್ದಾರೆ.
“‘ಅಧಿಕಾರವಿಲ್ಲದೆ ಅತೃಪ್ತ ಆತ್ಮವಾಗಿರೋ ಎಚ್.ಡಿ ಕುಮಾರಸ್ವಾಮಿ ಹತಾಶೆಯಿಂದ ಸರ್ಕಾರ ಬೀಳುವ ಕನಸು ಕಾಣುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“ಸ್ಥಾಪಿತ ಸರ್ಕಾರವನ್ನು ಕೆಡವುವ ಕೆಟ್ಟ ಚಾಳಿ ಆರಂಭಿಸಿದ್ದೇ ಬಿಜೆಪಿ. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ತಕ್ಷಣವೆ ಕುಮಾರಸ್ವಾಮಿ ಅವರಿಗೂ ಆ ಚಾಳಿ ಅಂಟಿಕೊಂಡಂತಿದೆ. ಹೀಗಾಗಿ ಸರ್ಕಾರ ಬೀಳಿಸುವ ಮಾತನಾಡುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ ಮಾತು. ಇದು ಕೊನೆಗೆ, ಸಿಗದ ದ್ರಾಕ್ಷಿ ಹುಳಿ ಎಂಬ ನರಿಯ ಕಥೆಯಂತಾಗುತ್ತದೆ” ಎಂದಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 30, 2023
6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂಬ @hd_kumaraswamy ಹೇಳಿಕೆ ಈ ವಾರದ ಅತ್ಯುತ್ತಮ ಜೋಕ್.
HDKಯವರು ನಮ್ಮ ಸರ್ಕಾರದ ಭವಿಷ್ಯದ ಬಗ್ಗೆ ಚಿಂತಿಸುವುದು ಬಿಟ್ಟು, ಈಗಾಗಲೇ ಜನರ ಮನಸ್ಸಿನಿಂದ ಗೇಟ್ಪಾಸ್ ಆಗಿರುವ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಲಿ.
ಅಧಿಕಾರವಿಲ್ಲದೆ ಅತೃಪ್ತ ಆತ್ಮವಾಗಿರೋ HDK ಹತಾಶೆಯಿಂದ ಸರ್ಕಾರ ಬೀಳುವ ಕನಸು…
“ಮುಂದಿನ ಲೋಕಸಭೆ ಚುನಾವಣೆಗ ಮುನ್ನ ಕಾಂಗ್ರೆಸ್ ನಾಯಕರನ್ನು ಭಯಭೀತಗೊಳಿಸಲು ಐಟಿ, ಇಡಿ, ಸಿಬಿಐ ಬಳಸಿಕೊಳ್ಳಲು ಕುಮಾರಸ್ವಾಮಿ ಅವರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರಬಹುದು” ಎಂದು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
“ಕಾಂಗ್ರೆಸ್ ಶಾಸಕರನ್ನು ಬೇಟೆಯಾಡಲು ‘ಆಪರೇಷನ್ ಕಮಲ’ ನಡೆಸಲು ಕುಮಾರಸ್ವಾಮಿ ಮತ್ತು ಬಿಜೆಪಿ ಚಿಂತನೆ ನಡೆಸುತ್ತಿದೆ” ಎಂದು ಪ್ರಿಯಾಂಕ್ ದೂರಿದ್ದಾರೆ.
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, “ಚುನಾಯಿತ ಸರ್ಕಾರಗಳ ದೀರ್ಘಾಯುಷ್ಯದ ಬಗ್ಗೆ ಭವಿಷ್ಯ ನುಡಿಯುವುದು ಕುಮಾರಸ್ವಾಮಿ ಅವರಿಗೆ ಹೊಸದೇನಲ್ಲ. ಏಕೆಂದರೆ ಯಾವುದೇ ಸರ್ಕಾರ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಅವರು ಬಯಸುವುದಿಲ್ಲ” ಎಂದು ಟೀಕಿಸಿದ್ದಾರೆ.




