ಕರ್ನಾಟಕದಲ್ಲಿ ನಾನಾ ರೀತಿಯ ಚುನಾವಣಾ ಸೂತ್ರಗಳನ್ನು ಎಣೆದು ಬಿಜೆಪಿಯನ್ನು ಮಣಿಸಿದ ಕಾಂಗ್ರೆಸ್, ಈಗ ಅದೇ ಸೂತ್ರವನ್ನು ಮಧ್ಯಪ್ರದೇಶದಲ್ಲೂ ಬಳಸಲು ಪ್ರಯತ್ನಿಸುತ್ತಿದೆ. ಆ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ. ಅಲ್ಲದೆ, ಉಚಿತ ಯೋಜನೆಗಳ ಭರವಸೆ ನೀಡಲು ಮುಂದಾಗಿದೆ. ಕಾಂಗ್ರೆಸ್ನ ದಾಳಿಯನ್ನು ಎದುರಿಸಲು ಬಿಜೆಪಿ ಕೂಡ ತನ್ನ ತಂತ್ರವನ್ನು ಬದಲಾಯಿಸುತ್ತಿದೆ.
“ನಾವು ಜನರಗೆ ನೀಡುವ ಭರವಸೆಗಳು ಮತ್ತು ಗ್ಯಾರಂಟಿಗಳನ್ನು 100% ಈಡೇರಿಸುತ್ತಿದ್ದೇವೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನಾವು ನೀಡಿದ್ದ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿದೆ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
“ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಮಾಸಿತ 1,500 ರೂ. ನೀಡಲಾಗುತ್ತದೆ. 500 ರೂ.ಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗುತ್ತದೆ. 100 ಯೂನಿಟ್ ವಿದ್ಯುತ್ ಉಚಿತ. ಮಧ್ಯಪ್ರದೇಶದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು. ಬಡ ರೈತರ ಸಾಲದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ’’ ಎಂದು ಅವರು ಐದು ಭರವಸೆಗಳನ್ನು ನೀಡಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸುರ್ಜೆವಾಲಾ ಅವರನ್ನು ಪಕ್ಷವು ನೇಮಿಸಿದೆ. ಅವರು ಈ ಹಿಂದೆ ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿಯಾಗಿದ್ದರು. ಕರ್ನಾಟಕದಲ್ಲಿ ಭಾರೀ ಗೆಲುವು ಕಂಡ ಬಳಿಕ, ಅವನ್ನು ಮಧ್ಯಪ್ರದೇಶದ ಉಸ್ತುವಾರಿ ಮಾಡಲಾಗಿದೆ. ಜೊತೆಗೆ, ಮಧ್ಯಪ್ರದೇಶದಲ್ಲೂ ರಾಜಕೀಯ ತಂತ್ರಗಳನ್ನು ರೂಪಿಸಲು ದಕ್ಷಿಣ ರಾಜ್ಯಗಳ ಕಾಂಗ್ರೆಸ್ ತಂತ್ರಜ್ಞ ಸುನಿಲ್ ಕಾನುಗೋಲು ಅವರಿಗೆ ಜವಬ್ದಾರಿ ನೀಡಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ವಿರುದ್ಧ ಕಾಂಗ್ರೆಸ್ ‘40% ಕಮಿಷನ್’ ಅಸ್ತ್ರವನ್ನು ಬಳಸಿತ್ತು. ‘ಪೇಸಿಎಂ’ ಅಭಿಯಾನ ನಡೆಸಿ ಬಿಜೆಪಿ ಭಷ್ಟ ಪಕ್ಷವೆಂದು ಸಾರಿ ಹೇಳಿತ್ತು. ಅದೇ ರೀತಿ, ಮಧ್ಯಪ್ರದೇಶದಲ್ಲಿಯೂ ಬಿಜೆಪಿ ಸರ್ಕಾರ ‘50% ಕಮಿಷನ್’ ಆಡಳಿತ ನಡೆಸುತ್ತಿದೆ. ಕಮಿಷನ್ನಲ್ಲಿ ಕರ್ನಾಟಕಕ್ಕಿಂತ 10% ಹೆಚ್ಚು ಪಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
“ಕುಂಭಮೇಳದಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಮಹಾಕಾಲ್ ಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ” ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಜೀವ ಸಂಪತ್ತಿಗೆ ಸಂಚಕಾರ ತಂದಿದೆ ಜೀವ ವೈವಿಧ್ಯ ತಿದ್ದುಪಡಿ ಮಸೂದೆ
ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖ್ಯಸ್ಥ ವಿ.ಡಿ ಶರ್ಮಾ ಕಿಡಿಕಾರಿದ್ದು, “ಕಾಂಗ್ರೆಸ್ ನಕಲಿ ಆರೋಪಗಳ ಮೂಲಕ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಪ್ರತಿಯೊಬ್ಬ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿಗೆ ಉತ್ತರಿಸುತ್ತಾರೆ. ಅವರು ಮಾನನಷ್ಟ ಅಪರಾಧ ಮಾಡಿದ್ದಾರೆ” ಎಂದು ಹೇಳಿದ್ದಾರೆ.
“ನಾವು 39 ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ನಮ್ಮ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಿಸಲು ಹೆದರುತ್ತಿದೆ. ನಮ್ಮ ಅಭ್ಯರ್ಥಿಗಳು ಈಗ ಕ್ಷೇತ್ರದಲ್ಲಿದ್ದಾರೆ” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.




