ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಸಮರ್ಥನೀಯವಲ್ಲ. ಅವುಗಳು ಮಹಿಳೆಯರನ್ನು ಸಬಲೀಕರಣ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
“ಕಾಂಗ್ರೆಸ್ ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆಯ ಜೊತೆ ಆಟವಾಡುತ್ತಿದ್ದಾರೆ. ಯುವಕರ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ. ಕೇವಲ ಅಧಿಕಾರ ಪಡೆಯಲು, ಸ್ವಾರ್ಥಿಗಳಾಗಬಾರದು. ಜನರನ್ನು ದಾರಿ ತಪ್ಪಿಸಬಾರದು. ಗ್ಯಾರಂಟಿಗಳಿಂದ ಮಹಿಳೆಯರ ಸಬಲೀಕರಣ ಆಗುವುದಿಲ್ಲ. ಆರ್ಥಿಕತೆಯಲ್ಲಿ ಟ್ರಿಲಿಯನ್ ಡಾಲರ್ಗಳನ್ನು ಹೊಂದಿರುವ ಅಮೆರಿಕದಂತಹ ದೇಶದಲ್ಲಿ ಅವರು ಅಲ್ಲಿನ ನಿರಾಶ್ರಿತರಿಗೆ ಮತ್ತು ಬಡವರಿಗೆ ಏಕೆ ಉಚಿತ ಯೋಜನೆಗಳನ್ನು ನೀಡುತ್ತಿಲ್ಲ? ಯಾವ ದೇಶವೂ ಈ ರೀತಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ನಂತರ ಯಾವ ರೀತಿ ಆಡಳಿತ ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು” ‘ಟಿಎನ್ಐಇ’ ಸಂದರ್ಶನದಲ್ಲಿ ಹೇಳಿದ್ದಾರೆ.
“ಸ್ಪರ್ಧೆಗೆ ಟಿಕೆಟ್ ನೀಡದ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ರಾಜಕೀಯದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷ ತೊರೆಯುತ್ತಾರೆ. ಆದರೆ, ನಾನು ಮೋದಿ ಅವರ ಕೆಲಸವನ್ನು ನೋಡಿ, ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟು ಬಿಜೆಪಿಗೆ ಸೇರಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
“ಮೋದಿ ದೇಶಕ್ಕಾಗಿ ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಈಗ ನನ್ನ ಭವಿಷ್ಯದ ಬಗ್ಗೆ ಯೋಚಿಸಬಾರದು ಅಥವಾ ನನಗೆ ಏನು ಸಿಗುತ್ತದೆ ಅಂತ ಯೋಚಿಸಬಾರದು. ನಾನು ಅಂತಹ ವ್ಯಕ್ತಿಯಲ್ಲ. ಮೋದಿ ಅವರ ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದ ಬಗ್ಗೆ ಮಾತನಾಡಿದ ಸುಮಲತಾ “ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದು ತಮಾಷೆಯಲ್ಲ. ನಾನು ಕರ್ನಾಟಕದಲ್ಲಿ 52 ವರ್ಷಗಳ ನಂತರ ಸ್ವತಂತ್ರ ಸಂಸದೆಯಾಗಿ ಗೆದ್ದಿದ್ದೇನೆ. ಇದು ಐದು ವರ್ಷಗಳಿಗೊಮ್ಮೆ ಮರುಕಳಿಸುವುದಿಲ್ಲ. ಕಳೆದ ಚುನಾವಣೆಯ ರಾಜಕೀಯ ಸನ್ನಿವೇಶವೇ ಬೇರೆ ಇತ್ತು. ಆ ಬಾರಿ ಬಿಜೆಪಿ ನನಗೆ ಬೆಂಬಲ ನೀಡಿತ್ತು, ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಿದರು. ಆದರೆ, ಕಾಂಗ್ರೆಸ್ ನಾಯಕತ್ವ ಬೆಂಬಲಿಸಲಿಲ್ಲ. ಹೀಗಾಗಿಯೇ ನಾನು ಗೆದ್ದೆ. ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿದ್ದು, ಟಿಕೆಟ್ ದೊರೆತಿಲ್ಲ. ನನಗೆ ಸರಿಯಾದ ಗೌರವ ಸಿಗದ ಕಾರಣ ಕಾಂಗ್ರೆಸ್ಗೆ ಹೋಗಲು ನನಗೆ ಇಷ್ಟವಿರಲಿಲ್ಲ” ಎಂದು ಹೇಳಿದ್ದಾರೆ.
“ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ ಮಂಡ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಕೆಲಸ ಮಾಡುತ್ತೇನೆ. ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸಲು ನನ್ನ ಉಪಸ್ಥಿತಿಯ ಅಗತ್ಯವಿದೆ. ಕನಿಷ್ಠ ಪಕ್ಷ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡಬೇಕೆಂದಿದ್ದೇನೆ” ಎಂದು ಸುಮಲತಾ ಹೇಳಿದ್ದಾರೆ.




