- ಧರ್ಮಾಧಾರಿತ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿದೆ ಎಂದಿದ್ದ ತೇಜಸ್ವಿ ಸೂರ್ಯ
- ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ? ಎಂದು ಕೇಳಿದ ಕಾಂಗ್ರೆಸ್
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಸ್ಲಿಮರನ್ನು ಓಲೈಸಲು ‘ಧರ್ಮಾಧಾರಿತ ಯೋಜನೆ’ಗಳನ್ನು ಜಾರಿಗೆ ತರುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಸುಳ್ಳು ಮಾಹಿತಿ ಹರಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, “ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ? ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ? ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ?” ಎಂದು ಕೇಳಿದೆ.
ದಲಿತರ ಏಳಿಗೆಗೂ ಆಕ್ಷೇಪ, ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೂ ಆಕ್ಷೇಪ ಮಾಡುವ ನಿಮ್ಮ ಉದ್ದೇಶವಾದರೂ ಏನು? ದೇವಾಲಯಗಳ ಅರ್ಚಕರ ತಸ್ತಿಕ್ ಹಣವನ್ನೂ ಏರಿಸಿದೆ ನಮ್ಮ ಸರ್ಕಾರ, ಇದಕ್ಕೂ ನಿಮ್ಮ ಆಕ್ಷೇಪ ಇದೆಯೇ? ಎಂದು ಕಾಂಗ್ರೆಸ್, ಬಿಜೆಪಿ ಸಂಸದರನ್ನು ಪ್ರಶ್ನಿಸಿದೆ.
ಹಾಲಿನ ದರ ಏರಿಕೆಯ ಲಾಭ ರೈತರ ಕೈ ಸೇರುವುದು ಇಷ್ಟವಿಲ್ಲವೇ? ವಿದ್ಯುತ್ ದರ ಏರಿಸಿದ್ದು ಹಿಂದಿನ ಬಿಜೆಪಿ ಸರ್ಕಾರ ಎನ್ನುವುದು ತಿಳಿದಿಲ್ಲವೇ? ಗ್ಯಾಸ್ ಬೆಲೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತಾಡುವುದಿಲ್ಲವೇಕೆ? ದುಬಾರಿ ಜಿಎಸ್ಟಿ ಬಗ್ಗೆ ನೀವು ತುಟಿ ಬಿಚ್ಚುವುದಿಲ್ಲವೇಕೆ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ.
ಜನರ ಹಣವನ್ನು ಜನರಿಗೇ ಕೊಡುವ ಬಗ್ಗೆ ಇಷ್ಟೊಂದು ಅಸಹನೆ ತೋರುವ ಬಿಜೆಪಿಗರ ಪ್ರಕಾರ ಜನರ ಹಣವನ್ನು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಸುವುದು ಅಭಿವೃದ್ಧಿಯೇ? ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ ಸಮುದಾಯದ ಅಭ್ಯರ್ಥಿಗಳಿಂದ ದುಡಿಯುವ ಉದ್ದೇಶಕ್ಕಾಗಿ ವಾಹನಗಳನ್ನು ಖರೀದಿಸಲು ₹3 ಲಕ್ಷಗಳನ್ನು ಸಬ್ಸಿಡಿ ನೀಡುವ ಯೋಜನೆಯನ್ನು ಪ್ರಕಟಿಸಿತ್ತು. ಈ ಯೋಜನೆಯು ಮುಸ್ಲಿಮರಿಗಾಗಿ ಇರುವ ಯೋಜನೆ ಎಂದು ಉಲ್ಲೇಖಿಸುತ್ತಾ ‘ಧರ್ಮಾಧಾರಿತ ಯೋಜನೆ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಪ್ಪು ಮಾಹಿತಿ ಹರಡಿದ್ದರು.





