ಕೇಂದ್ರದ ಬಿಜೆಪಿ ಸರ್ಕಾರ 2014ರ ಹಿಂದಿನ ಅರ್ಥವ್ಯವಸ್ಥೆಗೆ ಸಂಬಂಧಿಸಿ ಶ್ವೇತಪತ್ರ ಬಿಡುಗಡೆ ಮಾಡುತ್ತಿರುವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ (ಫೆಬ್ರವರಿ 8) ಕಾಂಗ್ರೆಸ್ ಕಾಳಪತ್ರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿರುವ ಕಾಳಪತ್ರಕ್ಕೆ ’10 ವರ್ಷಗಳ ಅನ್ಯಾಯ ಕಾಲ’ ಎಂದು ಶೀರ್ಷಿಕೆ ನೀಡಲಾಗಿದ್ದು, ನಿರುದ್ಯೋಗ, ಬೆಲೆ ಏರಿಕೆ ಹಾಗೂ ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವೈಫಲ್ಯವನ್ನು ವಿವರಿಸಲಾಗಿದೆ.
LIVE: Press Briefing by Congress President Shri @kharge in New Delhi.https://t.co/at9dgShAmo
— Congress (@INCIndia) February 8, 2024
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಕಾಳಪತ್ರವನ್ನು ಬಿಡುಗಡೆ ಮಾಡಿದರು.
ಕೇಂದ್ರ ಸರ್ಕಾರ ಬಿಜೆಪಿಯೇತರ ರಾಜ್ಯಗಳಿಗೆ ತಾರತಮ್ಯ ಧೋರಣೆ ತೋರಿ ಪ್ರಜಾಪ್ರಭುತ್ವವನ್ನು ಮುಗಿಸುತ್ತಿದ್ದಾರೆ ಎನ್ನುವ ಸಂದೇಶವನ್ನು ಕಾಳಪತ್ರದಲ್ಲಿ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ”ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಅಭಿಪ್ರಾಯಪಟ್ಟರು. ಜೊತೆಗೆ, ಕೇಂದ್ರ ಸರ್ಕಾರ ಕಳೆದೊಂದು ದಶಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ವಿಫಲವಾಗಿದೆ ಮತ್ತು ಬಿಜೆಪಿಯೇತರ ರಾಜ್ಯಗಳ ವಿರುದ್ಧ ತಾರತಮ್ಯ ತೋರಿಸಿದೆ ಎಂದು ತಿಳಿಸಿದರು.
”ಬಿಜೆಪಿ ಎಂದಿಗೂ ಸೊಲ್ಲೆತ್ತದೆ ಇರುವ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದೇವೆ. ಕೇರಳ, ಕರ್ನಾಟಕ, ತೆಲಂಗಾಣದಂತಹ ಬಿಜೆಪಿಯೇತರ ರಾಷ್ಟ್ರಗಳಿಗೆ ತಾರತಮ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ವಿಪಕ್ಷಗಳಿಂದ 411 ಶಾಸಕರನ್ನು ಬಿಜೆಪಿ ಖರೀದಿಸಿದೆ. ಅನೇಕ ಕಾಂಗ್ರೆಸ್ ಸರ್ಕಾರಗಳನ್ನು ಮುರಿದು ತನ್ನ ಸರ್ಕಾರ ರಚಿಸಿಕೊಂಡಿದೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಮುಗಿಸಲು ಯತ್ನಿಸುತ್ತಿದೆ” ಎಂದು ಖರ್ಗೆ ಆರೋಪಿಸಿದರು.
”ಬೆಲೆ ಏರಿಕೆಯ ಪ್ರಶ್ನೆಗಳನ್ನು ಮುಂದಿಟ್ಟಾಗ ಇತಿಹಾಸ ಕೆದಕುವ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅದು ತನ್ನ ಕೆಲಸದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು” ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಗುವಂತೆ ಮಾಡಿದೆ. ಇದೀಗ 2024ರಲ್ಲಿ ಬಿಜೆಪಿಯ ಕರಾಳ ಅನ್ಯಾಯದಿಂದ ದೇಶವನ್ನು ಕಾಪಾಡಲಿದೆ ಎಂದು ಅವರು ಹೇಳಿದ್ದಾರೆ.




