ಮತಗಳವು ವಿರುದ್ಧವಾಗಿ ಡಿಸೆಂಬರ್ 14ರಂದು ರಾಮಲೀಲಾ ಮೈದಾನದ ಬಳಿ ಕಾಂಗ್ರೆಸ್ ರ್ಯಾಲಿ ನಡೆಸುವುದಾಗಿ ಶುಕ್ರವಾರ ಘೋಷಿಸಿದೆ. ಹಾಗೆಯೇ ಭಾರತೀಯ ಚುನಾವಣಾ ಆಯೋಗ (ಇಸಿಐ) ಈಗ ಖಂಡಿತವಾಗಿ ಪಕ್ಷಪಾತಿಯಾಗಿದ್ದು ಚುನಾವಣೆ ವೇಳೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಮಾನ ಸ್ಪರ್ಧೆ ಎಂಬ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ನಾಶಪಡಿಸುತ್ತಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, “ಮತಗಳವು ಎಂಬ ಭೂತವು ಇಂದು ನಮ್ಮ ಪ್ರಜಾಪ್ರಭುತ್ವದ ಮೇಲೆ ಎದುರಾಗಿರುವ ದೊಡ್ಡ ಅಪಾಯವಾಗಿದೆ. ನಮ್ಮ ಸಂವಿಧಾನವನ್ನು ನಾಶಮಾಡುವ ಈ ಪ್ರಯತ್ನಗಳ ವಿರುದ್ಧ ದೇಶಾದ್ಯಂತ ಮಾಹಿತಿ ನೀಡಲು ಡಿಸೆಂಬರ್ 14ರಂದು ಮಧ್ಯಾಹ್ನ 1.30ರಿಂದ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ‘ವೋಟ್ ಚೋರ್ ಗಡ್ಡಿ ಛೋಡ್’ ಮಹಾ ರ್ಯಾಲಿಯನ್ನು ಕಾಂಗ್ರೆಸ್ ನಡೆಸಲಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮತಗಳವು ಗಂಭೀರ ಆರೋಪಕ್ಕೆ ರಾಹುಲ್ ಗಾಂಧಿ ಮಾತ್ರ ಉತ್ತರದಾಯಿಯೇ?
“ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಸೇರಿಸುವುದು, ವಿರೋಧ ಪಕ್ಷಗಳ ಮೇಲೆ ಒಲವು ಹೊಂದಿರುವ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕುವುದು ಮತ್ತು ಸಾಮೂಹಿಕವಾಗಿ ಮತದಾರರ ಪಟ್ಟಿಯನ್ನೇ ಬದಲಾಯಿಸುವಂತಹ ಬಿಜೆಪಿ-ಇಸಿಐನ ದುಷ್ಟ ತಂತ್ರಗಳನ್ನು ತಿರಸ್ಕರಿಸಿ, ವಿರೋಧಿಸಿ ದೇಶದ ಮೂಲೆ ಮೂಲೆಗಳಿಂದ ನಮಗೆ ಕೋಟ್ಯಂತರ ಸಹಿ ಸಂಗ್ರಹವಾಗಿದೆ” ಎಂದೂ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
“ಇಸಿಐ ಹೇಗೆ ನಿಯಮಗಳನ್ನು ತಿರುಚುತ್ತದೆ, ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಹೇಗೆ ನಿರ್ಲಕ್ಷಿಸುತ್ತದೆ ಮತ್ತು ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ನೋಡಿದ್ದಾನೆ. ಒಂದು ಕಾಲದಲ್ಲಿ ತಟಸ್ಥ ‘ಅಂಪೈರ್’ ಆಗಿದ್ದ ಇಸಿಐ ಈಗ ಸ್ಪಷ್ಟವಾಗಿ ಪಕ್ಷಪಾತಿಯಾಗಿದೆ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
“ಚುನಾವಣಾ ವ್ಯವಸ್ಥೆಯ ಮೇಲಿನ ಈ ದಾಳಿ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ನಾವು ಮೌನವಾಗಿರುವುದಿಲ್ಲ. ಈ ಮಹಾ ರ್ಯಾಲಿಯು ಭಾರತೀಯ ಪ್ರಜಾಪ್ರಭುತ್ವವನ್ನು ಮತಗಳ ಹಿಡಿತದಿಂದ ಮರಳಿ ಪಡೆಯುವ ನಮ್ಮ ಹೋರಾಟದ ಆರಂಭ ಮಾತ್ರ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಈಗಾಗಲೇ ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ನಡೆಸಿದ್ದು ಬರೋಬ್ಬರಿ 47 ಲಕ್ಷ ಮಂದಿಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ ಬಹುತೇಕರು ಮತದಾನ ಮಾಡಲು ಅರ್ಹರಾದರೂ ಹಕ್ಕು ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಆಳಂದ ಮತಗಳವು | ಮತದಾರರ ಹೆಸರು ಅಳಿಸುವ ಪ್ರತಿ ಅರ್ಜಿಗೆ 80 ರೂ. ಪಾವತಿ: ವರದಿ
ಈ ಪರಿಷ್ಕರಣೆ ಬೆನ್ನಲ್ಲೇ ನಡೆದ ಬಿಹಾರ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟ ಪರಾಭವಗೊಂಡಿದ್ದು ಎಸ್ಐಆರ್ ಮೂಲಕ ಮತಗಳವು ನಡೆಸಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಮಂಗಳವಾರ ಎಸ್ಐಆರ್ ನಡೆಯುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಮುಖ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಬಿಜೆಪಿ ಮತಗಳವು ಮಾಡಲು ಎಸ್ಐಆರ್ ಪ್ರಕ್ರಿಯೆಯನ್ನು ಆಯುಧವಾಗಿ ಬಳಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದ್ದಾರೆ.
ಸದ್ಯ ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯಲಿದೆ. ಈ ಪೈಕಿ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ.





