ದೇಶದಲ್ಲಿರುವ 22 ಕೋಟಿ ಮುಸ್ಲಿಮರಲ್ಲಿ ಒಂದು ಅಥವಾ ಎರಡು ಕೋಟಿ ಜನರು ಸತ್ತರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮುಸ್ಲಿಮರು ಭಯದ ನೆರಳಿನಲ್ಲಿ ಬದುಕುತ್ತಿದ್ದು, ಈ ಸಮುದಾಯವನ್ನು ಕಳೆದ 10 ವರ್ಷಗಳಿಂದ ಬೆದರಿಸಲಾಗುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರಾದ ಅಜೀಜ್ ಖುರೇಷಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ತಮಗೆ ಅನ್ಯಾಯವಾದರೆ ಸಿಡಿದೇಳದೆ ವಿಧಿಯಿಲ್ಲ. ಇತ್ತೀಚಿಗೆ ಕಾಂಗ್ರೆಸ್ನಲ್ಲಿ ಧರ್ಮದ ಬಗ್ಗೆ ಹೆಚ್ಚು ಒಲವು ಕಾಣುತ್ತಿದೆ. ಈ ಹೇಳಿಕೆಯ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನನ್ನನ್ನು ಪಕ್ಷದಿಂದ ಬೇಕಾದರೆ ಉಚ್ಚಾಟಿಸಲಿ ಎಂದು ಅಜೀಜ್ ಖುರೇಷಿ ಸವಾಲು ಹಾಕಿದರು.
“ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರೆ ನನಗೆ ಯಾವುದೇ ಭಯವಿಲ್ಲ. ಇಂದು ಕಾಂಗ್ರೆಸಿಗರು ಜೈ ಗಂಗಾ ಮಾಯಿ, ಜೈ ನರ್ಮದಾ ಮಾಯಿ ಎಂಬ ಘೋಷಣೆಗಳನ್ನು ಕೂಗಿ ಧಾರ್ಮಿಕ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಕಾಂಗ್ರೆಸಿನಲ್ಲಿ ನೆಹರು ಅವರ ಜಾತ್ಯತೀತ ಪರಿಕಲ್ಪನೆಯನ್ನು ನಾಶ ಮಾಡಲಾಗುತ್ತಿದೆ. ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವು ತಮ್ಮ ಗುಲಾಮರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ: ಮಲ್ಲಿಕಾರ್ಜುನ ಖರ್ಗೆ
“ದೇಶದ ಪ್ರಧಾನಿ ಹಾಗೂ ಗೃಹ ಸಚಿವರ ತಮ್ಮ ಭಾಷಣಗಳ ಮೂಲಕ ಮುಸ್ಲಿಂ ಸಮುದಾಯವನ್ನು ಬೆದರಿಸುತ್ತಿದ್ದಾರೆ. ಸಮುದಾಯವು ಇಂದು ಭಯದ ನರಳಿನಲ್ಲಿ ಬದುಕುವ ಸ್ಥಿತಿ ಎದುರಾಗಿದೆ. ಬುಲ್ಡೋಜರ್ಗಳು ಮತ್ತು ಎನ್ಕೌಂಟರ್ಗಳು ಮುಸ್ಲಿಮರ ಮೇಲೆ ಮಾತ್ರ ನಡೆಸಲಾಗುತ್ತಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಖುರೇಷಿ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅಜೀಜ್ ಖುರೇಷಿ, ನೀವು ಕೆಲಸ ಕೊಡುವುದಿಲ್ಲ. ನೀವು ಅವರನ್ನು ಪೊಲೀಸ್, ಸೇನೆ ಅಥವಾ ನೌಕಾಪಡೆಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾದರೆ ನಿಮಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಮಧ್ಯಪ್ರದೇಶದವರಾದ ಅಜೀಜ್ ಖುರೇಷಿ ಈ ಹಿಂದೆ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು 2020 ರಲ್ಲಿ ಅಂದಿನ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ರಾಜ್ಯ ಉರ್ದು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತ್ತು.
ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಗಳಲ್ಲಿ ಸಚಿವರಾಗಿದ್ದರು. 1984ರ ಲೋಕಸಭೆ ಚುನಾವಣೆಯಲ್ಲಿ ಸತ್ನಾದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.





