- ಗೃಹಮಂಡಳಿ ಬಡಾವಣೆಗಳಲ್ಲಿ ಬಲ್ಕ್ ಅಲಾಟ್ ಮೆಂಟ್ಗೆ ಕ್ರಮ
- ಜಿಲ್ಲಾಮಟ್ಟದಲ್ಲಿ ಜನತಾದರ್ಶನ ಮಾಡಿ ಸಮಸ್ಯೆ ಆಲಿಸುವೆ
ಕರ್ನಾಟಕ ಗೃಹ ಮಂಡಳಿ ಯೋಜನೆಗಳ ಜಮೀನು ವ್ಯಾಜ್ಯ ಬಗೆಹರಿಸಿ ಕಾಮಗಾರಿ ತ್ವರಿತಗೊಳಿಸಲು ಜಮೀನು ಮಾಲೀಕರ ಜತೆ ʼಸಮಾಲೋಚನಾ ಅದಾಲತ್ʼ ನಡೆಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದರು.
ಕರ್ನಾಟಕ ಗೃಹ ಮಂಡಳಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹ ಮಂಡಳಿ ಯೋಜನೆಗಳ ಜಮೀನು ವ್ಯಾಜ್ಯ ಪರಿಹಾರಕ್ಕೆ ಲೋಕ್ ಅದಾಲತ್ ಮಾದರಿ ಸಮಾಲೋಚನಾ ಅದಾಲತ್ ಮಾಡಲು ನಿರ್ಧರಿಸಿರುವುದಾಗಿ ಹೇಳಿದರು.
ಸೂರ್ಯ ನಗರ ಯೋಜನೆ ಸೇರಿದಂತೆ ಗೃಹಮಂಡಳಿಯ ಹತ್ತು ಯೋಜನೆಗಳಿಗೆ 4,615 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಪೈಕಿ ಸೂರ್ಯ ನಗರ ನಾಲ್ಕನೇ ಹಂತದ 700 ಎಕರೆ ಸೇರಿದಂತೆ ಒಟ್ಟು ಒಂದು ಸಾವಿರ ಎಕರೆಗೆ ಸಂಬಂಧಿಸಿದ ವ್ಯಾಜ್ಯದಿಂದ ಉಳಿದ ಹತ್ತು ಯೋಜನೆಗಳಿಗೂ ಗ್ರಹಣ ಹಿಡಿದಂತಾಗಿದೆ ಎಂದವರು ಹೇಳಿದರು.
ಇಂತಹ ಸಮಸ್ಯೆ ಪರಿಹಾರಕ್ಕಾಗಿ ರೈತರು ಹಾಗೂ ಜಮೀನು ಮಾಲೀಕರ ಜತೆ ಸಮಾಲೋಚನೆ ನಡೆಸಿ ವಿವಾದ ಇತ್ಯರ್ಥಪಡಿಸಿ ಯೋಜನೆಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವರು ತಿಳಿಸಿದರು.
ಜಮೀನು ಸ್ವಾಧೀನ ಸೇರಿ ನ್ಯಾಯಾಲಯಗಳಲ್ಲಿ ಇರುವ ಪ್ರಕರಣ ವರ್ಷಗಟ್ಟಲೆ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಎಲ್ಲಿ ಲೋಪ ಆಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಕಾನೂನು ವಿಭಾಗದ ಜತೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಬಿಜೆಪಿ ಕಾಲದ ಎಪಿಎಂಸಿ ಕಾಯ್ದೆ ರದ್ದು, ಹಳೆ ಕಾಯ್ದೆ ಜಾರಿ: ಸಚಿವ ಶಿವಾನಂದ ಪಾಟೀಲ್
ಬಲ್ಕ್ ಅಲಾಟ್ ಮೆಂಟ್
ರಾಜ್ಯದ ಹಲವೆಡೆ ಗೃಹ ಮಂಡಳಿ ವತಿಯಿಂದ ರಚಿಸಿರುವ ಬಡಾವಣೆಗಳಲ್ಲಿ ಮನೆ ಹಾಗೂ ನಿವೇಶನಗಳಿಗೆ ಬೇಡಿಕೆ ಇಲ್ಲದಿರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಬಡಾವಣೆಗಳ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಜಿಲ್ಲಾ ಮಟ್ಟದ ಜನತಾ ದರ್ಶನ ವೇಳೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಸಮಸ್ಯೆ ಬಗ್ಗೆ ಅಧ್ಯಯನ ಮಾಡಿ ಮೂಲ ಸೌಕರ್ಯ ಕೊರತೆ ಮತ್ತಿತರ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲಾಗುತ್ತದೆ. ಅಗತ್ಯವಾದರೆ ಕೆಲವು ರಿಯಾಯಿತಿ ನೀಡಿ ಗೃಹ ಮಂಡಳಿ ನಿವೇಶನ, ಮನೆಗಳಿಗೆ ಬೇಡಿಕೆ ಬರುವಂತೆ ಮಾಡಲಾಗುವುದು ಎಂದು ಜಮೀರ್ ಅಹ್ಮದ್ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಸರ್ಕಾರಿ ನೌಕರರ ಸಂಘ ಸೇರಿದಂತೆ ಸಂಘ ಸಂಸ್ಥೆಗಳಿಗೆ ವಸತಿ, ಭೂಮಿಯನ್ನು ಸಗಟು ಹಂಚಿಕೆ (ಬಲ್ಕ್ ಅಲಾಟ್ ಮೆಂಟ್) ಮಾಡುವುದರ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.




