ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ (MSCB) 25,000 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಮುಂಬೈ ನ್ಯಾಯಾಲಯವು ಅಂಗೀಕರಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ದಿ. ಅಜಿತ್ ಪವಾರ್ ಸೇರಿದಂತೆ ಹಲವರನ್ನು ಖುಲಾಸೆಗೊಳಿಸಲಾಗಿದೆ.
ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು (EOW) ಇತ್ತೀಚೆಗೆ ಪ್ರಕರಣದ ಮುಕ್ತಾಯ ವರದಿ ಸಲ್ಲಿಸಿತ್ತು. ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ಕಂಡುಬಂದಿಲ್ಲ. ಬ್ಯಾಂಕ್ನ ಸಾಲಗಳು ಮತ್ತು ವಸೂಲಿಗಳಲ್ಲಿಯೂ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಹೇಳಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಜಿಲ್ಲಾ ಬ್ಯಾಂಕ್ಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಮಾಜಿ ಉಪಮುಖ್ಯಮಂತ್ರಿ ದಿ. ಅಜಿತ್ ಪವಾರ್, ಅವರ ಪತ್ನಿ – ಹಾಲಿ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಹಾಗೂ ಇತರ ವ್ಯಕ್ತಿಗಳ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲು ಶಿಫಾರಸು ಮಾಡಿತ್ತು.
ಇದೀಗ, ಇಒಡಬ್ಲ್ಯೂ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಮುಂಬೈನ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಮುಕ್ತಾಯ ವರದಿಯನ್ನು ಪ್ರಶ್ನಿಸಿ ಮತ್ತು ಆಪಾದಿತ ಹಗರಣದ ತನಿಖೆ ಮುಂದುವರೆಸಬೇಕೆಂದು ಕೋರಿ ಅಣ್ಣಾ ಹಜಾರೆ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಈ ಲೇಖನ ಓದಿದ್ದೀರಾ?: ಎಪ್ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
ಜಿಲ್ಲಾ ಮತ್ತು ಸಹಕಾರಿ ಬ್ಯಾಂಕುಗಳು ಸಹಕಾರಿ ಸಕ್ಕರೆ ಕಾರ್ಖಾನೆಗಳು, ನೂಲುವ ಗಿರಣಿಗಳು ಹಾಗೂ ಇತರ ಸಂಸ್ಥೆಗಳಿಗೆ ನಿಯಮಗಳನ್ನು ಉಲ್ಲಂಘಿಸಿ ಸಾಲಗಳನ್ನು ನೀಡಿವೆ. ಇಲ್ಲಿ ಬೃಹತ್ ಹಗರಣ ನಡೆದಿದೆ. ಸಾಲ ವಿತರಣೆಯಲ್ಲಿನ ಅಕ್ರಮಗಳಿಂದಾಗಿ ಜನವರಿ 2007 ಮತ್ತು ಡಿಸೆಂಬರ್ 2017 ರ ನಡುವೆ ರಾಜ್ಯವು 25,000 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಆರೋಪಿಸಲಾಗಿತ್ತು. ಬಾಂಬೆ ಹೈಕೋರ್ಟ್ ನಿರ್ದೇಶನದಂತೆ 2019ರಲ್ಲಿ ಹಗರಣದ ಕುರಿತು ತನಿಖೆ ಪ್ರಾರಂಭಿಸಲಾಗಿತ್ತು. ಆಗ ಜಿಲ್ಲಾ ಬ್ಯಾಂಕುಗಳಲ್ಲಿ ಅಜಿತ್ ಪವಾರ್ ನಿರ್ದೇಶಕಾಗಿದ್ದರು. ಪವಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು, MSCBಯ ಅಂದಿನ ನಿರ್ದೇಶಕರ ವಿರುದ್ಧ ಎಫ್ಐಆರ್ಅನ್ನೂ ದಾಖಲಿಸಲಾಗಿತ್ತು.
ಆದರೆ, 2020ರಲ್ಲಿ ಪ್ರಕರಣದ ತನಿಖೆಯು ಹಲವು ತಿರುವುಗಳನ್ನು ಪಡೆದುಕೊಂಡಿತು. ಯಾವುದೇ ಕ್ರಿಮಿನಲ್ ಅಪರಾಧವಿಲ್ಲ ಎಂದು ಇಒಡಬ್ಲ್ಯೂ ಮುಕ್ತಾರ ವರದಿ ಸಲ್ಲಿಸಿತು. ಆ ನಂತರ, 2022ರಲ್ಲಿ, ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿ, ಎನ್ಸಿಪಿಯನ್ನು ವಿಭಜಿಸಿ ಅಜಿತ್ ಪವಾರ್ ಅವರು ತಮ್ಮ ಬಣದೊಂದಿಗೆ ಬಿಜೆಪಿ ಜೊತೆ ಸೇರಿ ‘ಮಹಾಯುತಿ’ ಸರ್ಕಾರ ರಚಿಸಿದರು. ಆ ನಂತರ, ಅಜಿತ್ ವಿರುದ್ಧದ ಹಲವು ಪ್ರಕರಣಗಳು ದುರ್ಬಲಗೊಂಡವು ಎಂಬುದು ಗಮನಾರ್ಹ ಸಂಗತಿ.
ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದ ಒಂದು ತಿಂಗಳ ನಂತರ ಮುಕ್ತಾಯ ವರದಿ ಅಂಗೀಕಾರಗೊಂಡಿದೆ.




