- ಇಲ್ಲಿಯವರೆಗೂ ಕಪ್ಪುಚುಕ್ಕೆ ಇಲ್ಲದಂತೆ ಎಸ್ಎಸ್ಎಫ್ ಕೆಲಸ ಮಾಡಿದೆ
- ಸುನ್ನಿ ಸ್ಟೂಡೆಂಟ್ ಫೆಡರೇಷನ್ನಿಂದ ಬೆಂಗಳೂರಿನಲ್ಲಿ ‘ಗೋಲ್ಡನ್ 50’ ಸಮಾವೇಶ
ದೇಶದ ಐಕ್ಯತೆ, ಸಂವಿಧಾನ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಎಸ್ಎಸ್ಎಫ್ ಕೆಲಸ ಮಾಡಬೇಕು. ಇದಕ್ಕಾಗಿ ತಮ್ಮ ಶಕ್ತಿ, ಸಂಘಟನೆಯನ್ನು ಮುಡಿಪಾಗಿ ಇಟ್ಟು ಅಭಿವೃದ್ಧಿ ದಿಕ್ಕಿನಲ್ಲಿ ದೇಶವನ್ನು ವೇಗವಾಗಿ ಮುನ್ನಡೆಸುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ‘ಗೋಲ್ಡನ್ 50’ ಸಮಾವೇಶದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮರಸ್ಯ ಭಾರತದ ಮಣ್ಣಿನ ಗುಣ. 50 ವರ್ಷಗಳಿಂದ ದೇಶದ ಸೌಹಾರ್ದ ಮತ್ತು ಸಾಮರಸ್ಯದ ಸಂಸ್ಕೃತಿ ರಕ್ಷಿಸಲು ಹೋರಾಡುತ್ತಿರುವ ಸಂಘಟನೆ ಎಂದು ಕೇಳಿದ್ದೇನೆ. ದೇಶದ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸಬೇಕು. ಸಂವಿಧಾನದ ಮೌಲ್ಯಗಳು ಉಳಿದರೆ ದೇಶ ಉಳಿಯುತ್ತದೆ ಎಂದರು.

ಭಾರತ ಪ್ರತಿಯೊಬ್ಬ ಭಾರತೀಯರಿಗೂ ಸೇರಿದ್ದು. ನಮ್ಮ ನಾಡು ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಸೂಫಿ-ಸಂತರ ತಪಸ್ಸು ಮತ್ತು ಮೌಲ್ಯಗಳಿಂದ ರೂಪುಗೊಂಡಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನಬದ್ದವಾದ ರಕ್ಷಣೆ ಇದೆ. ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯಕ್ಕೆ, ಕಾನೂನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು
ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಶೇಖ್ ಅಬೂಬಕರ್ ಅಹಮದ್ ಅವರು ಅಧ್ಯಕ್ಷತೆ ವಹಿಸಿದ್ದ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಝಮೀರ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಾಸಿರ್ ಅಹಮದ್ ಸೇರಿ ಎಸ್ಎಸ್ಎಫ್ನ ರಾಜ್ಯ ಮುಖಂಡರುಗಳು ಮತ್ತು ಹಲವು ಪ್ರಮುಖರು ವೇದಿಕೆಯಲ್ಲಿದ್ದರು.







