ಕೋಮುದ್ವೇಷ ಮತ್ತು ಮನುವಾದಿ ಸಿದ್ಧಾಂತ ಹೊಂದಿರುವ ಆರ್ಎಸ್ಎಸ್ನ ಅಂಗಸಂಘಟನೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನ ಬದಲಿಸುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಉತ್ತರಕನ್ನಡದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಸೇರಿದಂತೆ ಹಲವರು ಸಂವಿಧಾನ ಬದಲಿಸುವ ಹೇಳಿಕೆಗಳನ್ನು ಆಗ್ಗಾಗ್ಗೆ ನೀಡುತ್ತಲೇ ಇದ್ದಾರೆ. ಆದರೆ, ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್, “ಸಂವಿಧಾನ ಬದಲಾವಣೆ ಆದರೆ, ನನ್ನ ತಲೆ ಕತ್ತರಿಸಿ” ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. “ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡುತ್ತೇನೆ. ನಮ್ಮ ಬಿಜೆಪಿ ಸರ್ಕಾರ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಒಂದು ವೇಳೆ, ಸಂವಿಧಾನ ಬದಲಾವಣೆ ಆದರೆ, ನನ್ನ ತಲೆ ಕತ್ತರಿಸಿ ರಾಮಲಿಂಗೇಶ್ವರನಿಗೆ ಅರ್ಪಿಸಿ” ಎಂದು ಹೇಳಿದ್ದಾರೆ.
“ಬಿಜೆಪಿ ಅಧಿಕಾರಕ್ಕೆ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತಾರೆ ಅಂತ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಪ್ರಧಾನಿ ಮೋದಿ ಅವರು ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ, ಸಂವಿಧಾನ ಬದಲಾವಣೆ ಮಾಡಿದ್ದಾರಾ” ಎಂದು ಹೇಳಿದ್ದಾರೆ.




