ಸಚಿವ ಪ್ರಲ್ಹಾದ್ ಜೋಶಿ ಅವರು ‘ದಲಿತರು ಹಿಂದುಗಳಲ್ಲ’ ಎಂಬ ಆರ್ಎಸ್ಎಸ್ ಮತ್ತು ಬಿಜೆಪಿಯ ಒಳಮನಸಿನ ಸತ್ಯವನ್ನು ಸ್ಪಷ್ಟಪಡಿಸಿದ್ದಾರೆ. ಈ ಸ್ಪಷ್ಟನೆಗಾಗಿ ಅವರಿಗೆ ಧನ್ಯವಾದಗಳು ಎಂದು ರಾಜ್ಯ ಸಚಿವ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನಲ್ಲಿ ಮಾತನಾಡಿದ್ದ ಜೋಶಿ, “ಕಾಂಗ್ರೆಸ್ ಕೇವಲ ಹಿಂದುಗಳಿಗೆ ಮಾತ್ರವಲ್ಲ, ದಲಿತರಿಗೂ ವಿರೋಧಿಗಳು” ಎಂದು ಹೇಳಿದ್ದರು. ಅವರ ಹೇಳಿಕೆಯು ಹಿಂದುಗಳೇ ಬೇರೆ – ದಲಿತರೇ ಬೇರೆ ಎಂಬುದನ್ನು ಪ್ರತಿಧ್ವನಿಸಿತ್ತು.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ-ಆರ್ಎಸ್ಎಸ್ನವರು ದಲಿತರು ಹಿಂದುಗಳಲ್ಲ ಎಂಬ ಧೋರಣೆ ಹೊಂದಿದ್ದಾರೆ. ಅದನ್ನು ಜೋಶಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
“ಹಿಂದುಗಳೇ ಬೇರೆ, ದಲಿತರೇ ಬೇರೆ ಮತ್ತು ಸನಾತನದವರೇ ಬೇರೆ ಎನ್ನುವ ಆರ್ಎಸ್ಎಸ್ ಹಾಗೂ ಬಿಜೆಪಿಯ ವಿಭಜನಾತ್ಮಕ ಧೋರಣೆಯನ್ನು ಜೋಶಿಯವರು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿದ್ದಾರೆ. ಸನಾತನದಲ್ಲಿ ಹಿಂದುಗಳಿಲ್ಲ, ಹಿಂದುಗಳಲ್ಲಿ ದಲಿತರಿಲ್ಲ ಎನ್ನುವುದು ಸಂಘ ಪರಿವಾರದೊಳಗಿನ ಸತ್ಯ. ಈ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಕ್ಕೆ ಅಭಿನಂದನೆಗಳು!” ಎಂದು ಖರ್ಗ ಹೇಳಿದ್ದಾರೆ.
“ಜೋಶಿಯವರೇ, ನಿಮ್ಮ ಈ ಪ್ರತ್ಯೇಕತಾ ಧೋರಣೆಗಾಗಿಯೇ, ಈ ತಾರತಮ್ಯಕ್ಕಾಗಿಯೇ ಬಾಬಾ ಸಾಹೇಬರು ‘ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ’ ಎಂದು ಬೌದ್ಧ ದಮ್ಮ ದೀಕ್ಷೆ ಪಡೆದರು. ಬಿಜೆಪಿ ನಾಯಕರಿಗೆ ಬಾಬಾ ಸಾಹೇಬರ ಸಿದ್ಧಾಂತದ ಮೇಲೆ ನೈಜ ಗೌರವ ಇರುವುದೇ ಆದರೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಿ, ತಾರತಮ್ಯದ ಬಗೆಗಿನ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಓದಲಿ” ಎಂದಿದ್ದಾರೆ.




