“ಸರ್ಕಾರಿ ಶಾಲೆಯ 13,500 ಶಿಕ್ಷಕರು, ಅನುದಾನಿತ ಶಾಲೆಯ 5000 ಶಿಕ್ಷಕರು ಸೇರಿ ಒಟ್ಟು 18,500 ಶಿಕ್ಷಕರ ನೇಮಕಾತಿ ನಡೆಯಲಿದೆ. ನೇಮಕಾತಿ ನಂತರ ಶಿಕ್ಷಣ ಇಲಾಖೆಗೆ ಶಕ್ತಿ ಬರಲಿದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರುವರೆ ವರ್ಷಕ್ಕೆ 3500 ಶಿಕ್ಷಕರ ನೇಮಕಾತಿ ಮಾಡಿದ್ದರು. ಮುಖ್ಯಮಂತ್ರಿಗಳು ಅಪಾರ ಸಹಕಾರ ನೀಡುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಉತ್ತಮ ಕೆಲಸ ಮಾಡಲಿದ್ದೇವೆ” ಎಂದು ದಾವಣಗೆರೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
“ನ್ಯಾ.ನಾಗಮೋಹನ್ ದಾಸ್ ಒಳಮೀಸಲಾತಿ ವರದಿ ಬಂದಿದೆ, ಶಿಕ್ಷಕರ ನೇಮಕ ಮಾಡುತ್ತೇವೆ. ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿ ಪ್ರಕ್ರಿಯೆ ಆರಂಭ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.

ದಾವಣಗೆರೆ ನಗರದಲ್ಲಿ ಇಂದು ಬಿಐಇಟಿ ಕಾಲೇಜ್ನ ಆವರಣದ ಎಸ್.ಎಸ್.ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ನಲ್ಲಿ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಎರಡನೇ ರಾಜ್ಯ ಮಟ್ಟದ ಪದವಿ ಪೂರ್ವ ಶಿಕ್ಷಣ ಸಮಾವೇಶದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿ, “ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎರಡು ಮತ್ತು ಮೂರು ಬಾರಿ ಪರೀಕ್ಷಾ ನೀತಿ ಜಾರಿಗೊಳಿಸುವ ಮೂಲಕ ಅನುತ್ತೀರ್ಣರಾದ ಮಕ್ಕಳ ಕಲಿಕೆಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ” ಎಂದು ಅಭಿಪ್ರಾಯಪಟ್ಟರು.
“ಈ ನೀತಿಯಿಂದಾಗಿ ಪ್ರಸ್ತುತ ವರ್ಷದಲ್ಲಿ ಎಸ್ಎಸ್ಎಲ್ಸಿಯಲ್ಲಿ 1.16 ಲಕ್ಷ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿಯುಸಿಯಲ್ಲಿ ಮೂರು ಬಾರಿ ಪರೀಕ್ಷೆಯಲ್ಲಿ 86 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೆಲವರು ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರಿದ್ದಾರೆ. ಗೌರಿಬಿದನೂರಿನ ಓರ್ವ ವಿದ್ಯಾರ್ಥಿ ಐಐಟಿ ಗೆ ಹೋಗಿರುವುದು ಸಂತೋಷದ ಸಂಗತಿ” ಎಂದು ಹೇಳಿದರು.

“800 ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲು 3500 ಕೋಟಿ ಅನುದಾನ ಇಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ 308 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗಿದೆ. ಪಿಯು ಕಾಲೇಜ್ಗಳನ್ನು ಆರಂಭಿಸುವ ಯೋಜನೆಯಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿವೆ. ಶಿಕ್ಷಣ ಸಂಸ್ಥೆಗಳ ಸಮಸ್ಯೆ ಕಟ್ಟಡ, ರಕ್ಷಣೆಯ ವಿಷಯಗಳ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮತ್ತು ಲೋಕೊಪಯೋಗಿ ಸಚಿವ ಜಾರಕಿಹೊಳೆ ಅವರ ಬಳಿ ಹೇಳಿದ್ದೇನೆ. ಈ ಸಮಸ್ಯೆಗೆ ಅವರೇ ನಿರ್ಧಾರ ಕೈಗೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಘಟನೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ. ಘೋಷಣೆ ಕೂಗಿದ್ದರೆ, ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಿದೆ. ದೇಶದಲ್ಲಿ ಕಾನೂನು ಗೆದ್ದಾಗ ಮಾತ್ರ ನಾವು – ನೀವು ಸುರಕ್ಷಿತವಾಗಿರುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗ್ರಾಮ ಪಂಚಾಯಿತಿಯಿಂದ ಅಸೆಂಬ್ಲಿ ವರೆಗೆ, ಉದ್ಯೋಗ, ಬಡ್ತಿಯಲ್ಲಿ ಒಳಮೀಸಲಾತಿ: ಸಚಿವ ಮುನಿಯಪ್ಪ
ಕಾರ್ಯಕ್ರಮದಲ್ಲಿ ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ. ಮೋಹನ್ ಅಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಕಾರ್ಯದರ್ಶಿ ನರೇಂದ್ರ ಎಲ್. ನಾಯಕ್, ಕುಪ್ಮಾ ದಾವಣಗೆರೆ ಜಿಲ್ಲಾಧ್ಯಕ್ಷ ಎಸ್.ಜಿ. ಶ್ರೀಧರ್, ಕಾರ್ಯದರ್ಶಿ ಡಿ.ಎಸ್. ಜಯಂತ್ ಸೇರಿದಂತೆ ಇತರ ಸದಸ್ಯರು ಭಾಗವಹಿಸಿದ್ದರು.





