ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ನಿರ್ಣಯ ಕೈಗೊಂಡು, ದಾವಣಗೆರೆ ಲೋಕಸಭಾ ಕ್ಷೇತ್ರದ ಮಸೀದಿಗಳ ಮುತುವಲ್ಲಿ ಹಾಗೂ ವಿವಿಧ ಪಕ್ಷಗಳ ಮುಸ್ಲಿಂ ಮುಖಂಡರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದಾವಣಗೆರೆ ತಾಜ್ ಪ್ಯಾಲೇಸ್ ನಲ್ಲಿ ಇಂದು ಸಭೆ ನಡೆಸಿ ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ (MLC) ಕೆ. ಅಬ್ದುಲ್ ಜಬ್ಬಾರ್ ಸಾಬ್ “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅಹಿಂದ ಮತಗಳ ಬೆಂಬಲ ಸಿಗಲಿದೆ. ಈ ಹಿಂದಿನಿಂದಲು ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬಕ್ಕೆ ಟಿಕೆಟ್ ಎನ್ನುವುದು ಇನ್ನೂ ಮುಂದೆ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
“ಶಾಮನೂರು ಕುಟುಂಬವನ್ನು 1994 ರಿಂದ ಮುಸ್ಲಿಂ ಸಮುದಾಯ ಗೆಲ್ಲಿಸಿಕೊಂಡು ಬಂದಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ. ಹಿಂದುಳಿದ ಸಮುದಾಯವಾದ ಮುಸಲ್ಮಾನರಿಗೆ ಶಾಮನೂರು ಕುಟುಂಬ ಬೆಂಬಲಿಸಬೇಕು” ಎಂದು ಅಭಿಪ್ರಾಯಪಟ್ಟರು.

“ಶಾಮನೂರು ಕುಟುಂಬಕ್ಕೆ ಮುಸ್ಲಿಂ ಸಮುದಾಯ ಈ ಹಿಂದಿನಿಂದಲೂ ತ್ಯಾಗ ಮಾಡಿಕೊಂಡು ಬಂದಿದೆ. ಇನ್ನೂ ಮುಂದೆ ಇದನ್ನು ಅರಿತು ಶಾಮನೂರು ಕುಟುಂಬ ಮುಸಲ್ಮಾನರಿಗೆ ಬೆಂಬಲಿಸಬೇಕು. ಈಗ ಇಲ್ಲವೆಂದರೆ ಯಾವತ್ತೂ ನಮಗೆ ರಾಜಕೀಯ ನ್ಯಾಯ ಸಿಗಲು ಸಾಧ್ಯವಿಲ್ಲ. ಅದರಿಂದ ತಮ ತಮ್ಮ ಏರಿಯದಲ್ಲಿ ಹೆಚ್ಚು ಹೆಚ್ಚು ಚರ್ಚೆ ಮಾಡಿ” ಎಂದು ಮುಸ್ಲಿಂ ಬಾಂಧವರಿಗೆ ಕರೆ ನೀಡಿದರು

ಜೆಡಿಎಸ್ ಪಕ್ಷದ ಜೆ.ಅಮನುಲ್ಲಾ ಖಾನ್ “ದಾವಣಗೆರೆ ಜಿಲ್ಲೆ ಎಲ್ಲ ಮುತುವಲ್ಲಿಗಳು ಹಾಗೂ ರಾಜಕೀಯ ಮುಖಂಡರುಗಳು ಹಾಗೂ ಮುಸ್ಲಿಂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೇ ಇದ್ದರೆ ಮುಂದಿನ ಯಾವ ಚುನಾವಣೆಯಲ್ಲೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಪಟ್ಟು ಹಿಡಿಯಬೇಕು” ಎಂದು ಹೇಳಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಸಾಧಿಕ್ ಪೈಲ್ವಾನ್ ಮಾತನಾಡ “ಕಾಂಗ್ರೆಸ್ ಪಕ್ಷ ನಮ್ಮ ಮತಗಳ ಬೆಂಬಲ ಇಲ್ಲದೆ ಗೆಲ್ಲಲು ಸಾಧ್ಯವಿಲ್ಲ ನನ್ನ ಆತ್ಮೀಯ ಸ್ನೇಹಿತ ಕೆ. ಅಬ್ದುಲ್ ಜಬ್ಬಾರ್ ಮತ್ತು ನನಗೆ, ಯಾರಿಗೂ ಟಿಕೆಟ್ ನೀಡಿದರೂ ನಮ್ಮ ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ಬೆಂಬಲಿಸಲಿದೆ. (SIR) ಎಸ್ ಐ ಆರ್ ವಿಷಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕರು ಜಾಗೃತಿ ಯಿಂದ ಕೆಲಸ ಮಾಡಿ ತಮ ಮತ ಉಳಿಸಿಕೊಳ್ಳಬೇಕು” ಎಂದು ಸೂಚಿಸಿದರು.ಎಐಎಂಐಎಂ (AIMIM) ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೋಯೇಬ್ ಮಾತನಾಡಿ
“ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಸಮಾಜಿಕ ನ್ಯಾಯ ನೀಡದಂತೆ. ಇಲ್ಲ ಎಂದರೆ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಹಾಗೂ ಹೈದರಾಬಾದ್ ಸಂಸದರಾದ ಅಸಾವುದ್ದೀನ್ ಓವೈಸಿ ದಾವಣಗೆರೆ ಬಂದು ಪ್ರಚಾರ ಮಾಡಲಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಸ ಬೇರ್ಪಡಿಸಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ; ಬಂಧನಕ್ಕೆ ಆಗ್ರಹ
ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ದಾವಣಗೆರೆ ಜಿಲ್ಲೆಯ ಬಹುತೇಕ ಮಸೀದಿಗಳ ಮುತುವಲ್ಲಿಗಳು ಮತ್ತು ಮುಸ್ಲಿಂ ಸಮುದಾಯದ ಬಹುತೇಕ ಸಂಘ ಸಂಸ್ಥೆಗಳ ಮುಖಂಡರು ರಾಜಕೀಯವಾಗಿ ಒಂದು ವೇದಿಕೆಯ ಮೇಲೆ ಕಾಣಿಸಿಕೊಂಡರು.
ಈ ಸಭೆಯಲ್ಲಿ ಮುಸ್ಲಿಂ ಒಕ್ಕೂಟದ ಅಬ್ದುಲ್ ಘನಿ ತಾಹಿರ್, ಜೆಡಿಎಸ್ ಪಕ್ಷದ ಟಿ.ಅಸ್ಗರ್, ಬಿಜೆಪಿಯ ಸಿ. ನಾಸೀರ್ ಅಹ್ಮದ್, ಆಮ್ ಅದ್ಮಿಪಕ್ಷದ ಅದಿಲ್ ಖಾನ್ SDPI ಪಕ್ಷದ ಮುಖಂಡರು ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಮಸೀದಿಗಳ ಮುತುವಲ್ಲಿಗಳು ಸೇರಿ ಮುಸ್ಲಿಂ ಸಮುದಾಯದ ಅನೇಕ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.





