ಮುಸ್ಲಿಂ ಮಹಿಳೆಯರ ವಿರುದ್ಧ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಯತ್ನಾಳ್ ವಿರುದ್ದದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ವಿಜಯಪುರದಲ್ಲಿ ಮಾತನಾಡಿದ್ದ ಯತ್ನಾಳ್, “ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದು ಹುಡುಗರಿಗೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ” ಎಂದು ಘೋಷಿಸಿದ್ದರು. ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮುಸ್ಲಿಂ ಮಹಿಳೆಯರ ಬಗ್ಗೆ ಕೋಮುದ್ವೇಷ ಮತ್ತು ಅವಹೇಳನಕಾರಿ ಹೇಳಿಕೆ ನೀಡಿರುವ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು.
ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಬಿ ಪಾಟೀಲ್, “ಯತ್ನಾಳ್ ಮಾತುಗಳು ಖಂಡನೀಯ ಮತ್ತು ಅಸಹ್ಯಕರವಾಗಿವೆ. ಅವರ ಹೇಳಿಕೆಯು ಮಹಿಳೆಯರ ಕುರಿತು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಯತ್ನಾಳ್, ಕೋಮು ಪ್ರಚೋದನೆಯ ಮಾತನಾಡುತ್ತಿದ್ದಾರೆ. ಅವರ ಅತಿರೇಕವನ್ನು ತಡೆಯಬೇಕು” ಎಂದು ಹೇಳಿದ್ದಾರೆ.
“ಬಸನಗೌಡ ಎಂಬ ಹೆಸರು ಇಟ್ಟುಕೊಂಡಿರುವ ಯತ್ನಾಳ್ ಬಾಯಲ್ಲಿ ಬಸವಣ್ಣನವರ ವಚನಗಳು ಬರಬೇಕಿತ್ತು. ಆದರೆ, ಅವರ ಬಾಯಲ್ಲಿ ಬರೀ ಮುಸ್ಲಿಂ ದ್ವೇಷದ ಮಾತುಗಳು ಮಾತ್ರವೇ ಬರುತ್ತಿವೆ. ಇನ್ನೊಂದು ಧರ್ಮದ ಹೆಣ್ಣು ಮಕ್ಕಳನ್ನು ನಿಂದಿಸುವುದು ಅವರ ಚಾಳಿಯಾಗಿದೆ” ಎಂದು ಕಿಡಿಕಾರಿದ್ದಾರೆ.




